Join The Telegram | Join The WhatsApp |
ಹರಪನಹಳ್ಳಿ: ತಾಲೂಕಿನಲ್ಲಿ ಬಹುಸಂಖ್ಯೆಯಲ್ಲಿರುವ ಮಾದಿಗ ಸಮಾಜಕ್ಕೆ 5 ಎಕರೆ ಜಮೀನು ಮಂಜೂರು ಮಾಡುವಂತೆ ಜಿಲ್ಲಾಧಿಕಾರಿಗಳಿಗೆ ಪತ್ರ ಬರೆದು ಜಾಗ ಹಸ್ತಾಂತರಿಸಲು ಕ್ರಮಕೈಗೊಳ್ಳಲಾಗುವುದು ಎಂದು ಶಾಸಕ ಜಿ.ಕರುಣಾಕರರೆಡ್ಡಿ ಭರವಸೆ ನೀಡಿದರು.
ಪಟ್ಟಣದ ಹಳೇ ಬಸ್ ನಿಲ್ದಾಣದಲ್ಲಿ ಮಾದಿಗ ಸಮಾಜದವತಿಯಿಂದ ಹಮ್ಮಿಕೊಂಡಿದ್ದ ಮಾದಿಗ
ಜಾಗೃತಿ ಸಮಾವೇಶ, ಮಕ್ಕಳಿಗೆ ಪ್ರತಿಭಾ ಪುರಸ್ಕಾರ ಹಾಗೂ ಜನಪ್ರತಿನಿಧಿಗಳಿಗೆ ಸನ್ಮಾನ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಗ್ರಾಮೀಣ ಪ್ರದೇಶದಲ್ಲಿ ಮಾದಿಗ ಸಮಾಜ ಸಾಮಾಜಿಕ, ಶೈಕ್ಷಣಿಕ, ಅರ್ಥಿಕವಾಗಿ ಹಿಂದುಳಿದಿದೆ. ಶಿಕ್ಷಣ ಪಡೆಯುವ ಮೂಲಕ ಮುನ್ನೆಲೆಗೆ ಬರಬೇಕು. ಅಂಬೇಡ್ಕರ್ ಹೆಸರಿನಲ್ಲಿ ಗ್ರಂಥಾಲಯ ಸೇರಿದಂತೆ ವಿವಿಧ ಬೇಡಿಕೆಗಳನ್ನು ಹಂತ ಹಂತವಾಗಿ ಈಡೇರಿಸುತ್ತೇನೆ. ಈಗಾಗಲೇ ಮಾದಿಗ ಕೇರಿಗಳಲ್ಲಿ ಸಿಸಿ ರಸ್ತೆ, ಚರಂಡಿ ನಿರ್ಮಾಣ, ಅಂಬೇಡ್ಕರ್ ಸಮುದಾಯ ಭವನ, ತಾಲೂಕಿನಲ್ಲಿ 20 ಎಸ್ಸಿ-ಎಸ್ಟಿ ವಿದ್ಯಾರ್ಥಿ ನಿಲಯಗಳನ್ನು ಸ್ಥಾಪಿಸಿ ಶೋಷಿತ ಮಕ್ಕಳ ಶಿಕ್ಷಣಕ್ಕೆ ಅದ್ಯತೆ ನೀಡಿದ್ದೇನೆ ಎಂದರು.
ಮೀಸಲಾತಿ ಹೆಚ್ಚಳಕ್ಕೆ ಆಗ್ರಹಿಸಿ ವಾಲ್ಮೀಕಿ ಶ್ರೀಗಳು ನಡೆಸುತ್ತಿರುವ ಧರಣಿ ಸಂಬಂಧ ಮುಖ್ಯಮಂತ್ರಿ ಬಸವರಾಜ ಬೊಮ್ಮಯಿ ನೇತೃತ್ವದಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಚರ್ಚಿಸಲಾಗಿದೆ. ಈ ಕುರಿತು ಶೀಘ್ರವೇ ಘೋಷಣೆಯಾಗಲಿದೆ ಎಂದು ತಿಳಿಸಿದರು.
ಡಾ.ಬಿ.ಆರ್.ಅಂಬೇಡ್ಕರ್ ಹಾಗೂ ಬಾಬು ಜಗಜೀವನರಾಂ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ
ಮಾಡಿ ಮಾತನಾಡಿದ ಕೆಪಿಸಿಸಿ ರಾಜ್ಯ ಪ್ರಧಾನ ಕಾರ್ಯದರ್ಶಿ ಎಂ.ಪಿ.ಲತಾ ಮಲ್ಲಿಕಾರ್ಜುನ್ ಅವರು, ಮನುಷ್ಯ ಹುಟ್ಟಿದಾಗ ಮಂಗಳ ಕಾರ್ಯ ಜಂಗಮರಿಂದ ಶುರುವಾಗಿ ಸತ್ತಾಗ ಮಾದಿಗ ಸಮಾಜದಿಂದ ಅಂತ್ಯ ಸಂಸ್ಕಾರ ಮಾಡುವ ಮೂಲಕ ಮನುಷ್ಯನ ಜೀವನ ಅಂತ್ಯಗೊಳ್ಳುತ್ತದೆ. ಹೀಗಾಗಿ ನಾವು ಮತ್ತು ನೀವು ಇಬ್ಬರೂ ಬೇರೆ ಅಲ್ಲ. ಪ್ರತಿಯೊಂದು ಸಮಾಜಕ್ಕೂ ತಮ್ಮದೇ ಆದ ಕಾಯಕದ ಶ್ರೇಷ್ಠತೆಯಿದೆ. ಹೀಗಾಗಿ ಮಾದಿಗ ಸಮಾಜವೂ ಕೂಡ ಶೇಷ್ಠವಾಗಿದೆ. ಗಾಂಧೀಜಿ ಅವರು ತಮ್ಮನ್ನು ಹರಿಜನ ಅಂತ ಕರೆದಿದ್ದಾರೆ. ಹರಿಜನ ಅಂದ್ರೆ ವಿಷ್ಣು ಪರಮಾತ್ಮನ ಪ್ರೀತಿಗೆ
ಪಾತ್ರರಾದವರು ಎಂದರ್ಥವಿದೆ. ಈ ಸಮಾಜದವರನ್ನು ಎಲ್ಲರೂ ಗೌರವದಿಂದ ಕಾಣಬೇಕು. ಭಾರತ ದೇಶಕ್ಕೆ ಈ ಸಮಾಜದ ಮಹಾನ್ ನಾಯಕ ಡಾ.ಬಿ.ಆರ್.ಅಂಬೇಡ್ಕರ್ ಅವರು ಸಂವಿಧಾನ ರಚಿಸಿ ಕೊಟ್ಟಿದ್ದಾರೆ. ಮಾದಿಗ ಸಮಾಜಕ್ಕೆ ಅನ್ಯಾಯವಾದಾಗ ನಾವೆಲ್ಲರೂ ಅವರ ಬೆಂಬಲಕ್ಕೆ ನೀಲ್ಲಬೇಕು. ಸಮಾಜದ ಬಂಧುಗಳು ಮಕ್ಕಳಿಗೆ ಶಿಕ್ಷಣ ಕೊಡಿಸಬೇಕು ಎಂದು ಸಲಹೆ ನೀಡಿದರು.
ಸಾನಿಧ್ಯವಹಿಸಿದ್ದ ಚಿತ್ರದುರ್ಗ ಮಾದಾರ ಚೆನ್ನಯ್ಯ ಗುರುಪೀಠದ ಬಸವಮೂರ್ತಿ ಮಾದಾರ ಚೆನ್ನಯ್ಯ ಸ್ವಾಮೀಜಿ ಮಾತನಾಡಿ, ರಾಜ್ಯ ಸರ್ಕಾರ ಮಾದಿಗ ಸಮಾಜಕ್ಕೆ ಹುಬ್ಬಳ್ಳಿ ಬಳಿ 85 ಎಕರೆ ಜಮೀನು ಮಂಜೂರು ಮಾಡಿದ್ದು, ಅಲ್ಲಿ ಸಮಾಜದ 5 ಸಾವಿರ ಮಕ್ಕಳ ವಿದ್ಯಾಭ್ಯಾಸಕ್ಕೆ ಅನುಕೂಲವಾಗುವಂತೆ ವಸತಿ ಶಾಲೆ ನಿರ್ಮಾಣ ಮಾಡಲಾಗುವುದು ಎಂದ ಅವರು ಸಮಾಜದ ಯುವಕರು ಅಂಬೇಡ್ಕರ್ ಅವರ ಚಿಂತನೆಗಳನ್ನು ಅಳವಡಿಸಿಕೊಳ್ಳಬೇಕು. ದುಶ್ಚಟಗಳಿಂದ ದೂರ ಬಂದು ಶಿಕ್ಷಣ ಪಡೆದುಕೊಂಡು ಉದ್ಯೋಗ ಹಿಡಿಯಬೇಕು. ಶಿಕ್ಷಣವಂತರಾದಾಗ ಮಾತ್ರ ಮಾದಿಗ ಸಮಾಜ ಸಾಮಾಜಿಕವಾಗಿ, ಶೈಕ್ಷಣಿಕವಾಗಿ, ಅರ್ಥಿಕವಾಗಿ ಸದೃಢರಾಗಲು ಸಾಧ್ಯವಿದೆ. ಅದ್ದರಿಂದ ಮಕ್ಕಳಿಗೆ ಶಿಕ್ಷಣ ಕೊಡಿಸಬೇಕು ಎಂದು ಕರೆ ನೀಡಿದರು.
ಹಿರಿಯೂರು ಕೋಡಿಹಳ್ಳಿ ಮಠದ ಷಡಾಕ್ಷರಮುನಿ ಸ್ವಾಮೀಜಿ ಮಾತನಾಡಿ, ಚುನಾವಣೆ ಬಂದಾಗ
ರಾಜಕೀಯ ಪಕ್ಷಗಳು ಮಾದಿಗರಿಗೆ ಟಿಕೆಟ್ ಕೊಡುವಾಗ ಮೀನಾಮೇಷ ಎಣಿಸದೇ ಸಮಾಜಕ್ಕೆ ಪ್ರಾತಿನಿಧ್ಯ ನೀಡಬೇಕು. ಭಕ್ತರು ಸಹ ಮಠಾಧೀಶರನ್ನು ಯಾವುದೇ ರಾಜಕೀಯ ಪಕ್ಷಕ್ಕೆ ಸೀಮಿತಗೊಳಿಸಬೇಡಿ ಎಂದು ಮನವಿ ಮಾಡಿದರು.
ನಿವೃತ್ತ ಪ್ರಾಂಶುಪಾಲರಾದ ಪ್ರೋ.ಟಿ.ರಾಜಪ್ಪ ಅವರು ಮಾದಿಗ ಸಮಾಜದ ಸ್ಥಿತಿಗತಿ ಕುರಿತು ವಿಶೇಷ ಉಪನ್ಯಾಸ ನೀಡಿದರು. ಮಾಜಿ ಶಾಸಕರಾದ ಹೆಚ್.ಪಿ.ರಾಜೇಶ್, ನಂದಿಹಳ್ಳಿ ಹಾಲಪ್ಪ, ಪುರಸಭೆ ಅಧ್ಯಕ್ಷ ಹಾರಾಳು ಅಶೋಕ್, ಮುಖಂಡರಾದ ಎಂ.ಬಿ.ಯಶವಂತಗೌಡ, ಶಶಿಧರ ಪೂಜಾರ್, ಎಂ.ಟಿ.ಸುಭಾಶ್ಚಂದ್ರ ಮಾತನಾಡಿದರು. ಹೊಸಪೇಟೆ ಮಾತಂಗ ಮಹರ್ಷಿ ಸೇವಾಶ್ರಮದ ಪೂರ್ಣನಂದ ಭಾರತಿ ಸ್ವಾಮೀಜಿ ಸಾನಿಧ್ಯವಹಿಸಿದ್ದರು.
ಎಸ್ಎಸ್ಎಲ್ಸಿ ಮತ್ತು ಪಿಯುಸಿ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನಡೆಯಿತು. ಪಟ್ಟಣದ ಹಿರೆಕೆರೆ ವೃತ್ತದಿಂದ ಮಾದಿಗ ಸಮಾಜದ ಬಂಧುಗಳು ಹಲಗಿ ವಾದ್ಯದೊಂದಿಗೆ ಬೃಹತ್ ಮೆರವಣಿಗೆ ನಡೆಸಿದರು. ಅಂಬೇಡ್ಕರ್ ಸಂಘದ ಅಧ್ಯಕ್ಷ ನಿಚ್ಚವ್ವನಹಳ್ಳಿ ಭೀಮಪ್ಪ ಅಧ್ಯಕ್ಷತೆವಹಿಸಿದ್ದರು.
ಮುಖಂಡರಾದ ಕಣವಿಹಳ್ಳಿ ಮಂಜುನಾಥ್ ಕಾರ್ಯಕ್ರಮ ನಿರೂಪಣೆ ಮಾಡಿದರು. ಮುಖಂಡರಾದ ಎನ್.ಕೊಟ್ರೇಶ್, ಹೆಚ್.ಬಿ.ಪರುಶುರಾಮಪ್ಪ, ಕೆಪಿಸಿಸಿ ಕಾರ್ಯದರ್ಶಿ ಕವಿತಾರೆಡ್ಡಿ, ಐಗೋಳ್ ಚಿದಾನಂದ, ಅಂಬಾಡಿ ನಾಗರಾಜ್, ಬೇಲೂರು ಅಂಜಪ್ಪ, ಮುಖಂಡರಾದ ಹುಲಿಕಟ್ಟಿ ಚಂದ್ರಪ್ಪ, ಮೈದೂರು ಓ.ರಾಮಪ್ಪ, ಮತ್ತಿಹಳ್ಳಿ ಪಿ.ರಾಮಪ್ಪ, ಓ.ಮಹಾಂತೇಶ್, ಪುಣಬಗಟ್ಟಿ ನಿಂಗಪ್ಪ, ಕಬ್ಬಳ್ಳಿ ಪರಸಪ್ಪ, ಗೌರಿಹಳ್ಳಿ ಮಂಜಪ್ಪ, ಮತ್ತಿಹಳ್ಳಿ ಶಿವಣ್ಣ, ಅರಸೀಕೆರೆ ಕೆ.ಡಿ.ಅಂಜಿನಪ್ಪ, ಕಲ್ಲಹಳ್ಳಿ ಹನುಮಂತಪ್ಪ, ಅರಸೀಕೆರೆ ಪೂಜಾರ್ ಮರಿಯಪ್ಪ,
ಕೊಂಗಹೊಸೂರು ಶಿವಣ್ಣ, ನೀಲಗುಂದ ಸಣ್ಣಪ್ಪ, ಶೃಂಗಾರದೋಟ ನಿಂಗರಾಜ್, ಕಬ್ಬಳ್ಳಿ ಮೈಲಪ್ಪ, ಪುಣಬಗಟ್ಟ ಆರ್.ಕೆ.ಮಂಜಪ್ಪ, ಭಂಗಿ ಚಂದ್ರಪ್ಪ, ಭಂಗಿ ರಮೇಶ್, ನಂದಿಬೇವೂರು ಚಾರೆಪ್ಪ, ಕರ್ನಾಟಕ ಕಾರ್ಯನಿರತ ಪತ್ರಕರ್ತರ ಧ್ವನಿ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಎಸ್.ಎನ್.ಕುಮಾರ್ ಪುಣಬಗಟ್ಟಿ, ಕರ್ನಾಟಕ ಕಾರ್ಯನಿರತ ಪತ್ರಕರ್ತರ ಧ್ವನಿ ಸಂಘದ ರಾಜ್ಯ ಸಮಿತಿ ಸದಸ್ಯರಾದ ಅಲಗಿಲವಾಡ ಎ.ಎಂ.ವಿಶ್ವನಾಥ್, ಹುಣಸಿಹಳ್ಳಿ ಕೋಟ್ರಪ್ಪ, ಕರ್ನಾಟಕ ಕಾರ್ಯನಿರತ ಪತ್ರಕರ್ತರ ಪತ್ರಕರ್ತರ ಧ್ವನಿ ಸಂಘದ ತಾಲ್ಲೂಕು ಅಧ್ಯಕ್ಷ ಮಾಳ್ಗಿ ಮಂಜುನಾಥ ಮತ್ತು ಕರ್ನಾಟಕ ಕಾರ್ಯನಿರತ ಪತ್ರಕರ್ತರ ಧ್ವನಿ ಉಪಾಧ್ಯಕ್ಷ ಜೈರಾಜ್ ಮತ್ತಿತರರು ಉಪಸ್ಥಿತರಿದ್ದರು.
Join The Telegram | Join The WhatsApp |