ವಿಜಯಪುರ: ಪಂಚಮಸಾಲಿ ಮೀಸಲಾತಿ ಹೋರಾಟಕ್ಕೆ ಅಸಹಕಾರ ತೋರಿದ ಮನಸ್ಸುಗಳ ಒಳಸಂಚು ಮತ್ತು ಕುತಂತ್ರದಿಂದ ಬಸನಗೌಡ ಪಾಟೀಲ ಯತ್ನಾಳ ಅವರಿಗೆ ವಿರೋಧ ಪಕ್ಷದ ಸ್ಥಾನ ಕೈತಪ್ಪಿದೆ ಎಂದು ಕೂಡಲಸಂಗಮ ಲಿಂಗಾಯತ ಪಂಚಮಸಾಲಿ ಪೀಠದ ಬಸವಜಯ ಮೃತ್ಯುಂಜಯ ಸ್ವಾಮೀಜಿ ಆರೋಪಿಸಿದರು.
ನಗರದಲ್ಲಿ ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಪತ್ರಕರ್ತರ ಪ್ರಶ್ನೆಯೊಂದಕ್ಕೆ ಉತ್ತರಿಸಿದ ಅವರು, ಯತ್ನಾಳ ಅವರಿಗೆ ವಿರೋಧ ಪಕ್ಷದ ನಾಯಕ ಸ್ಥಾನ ನೀಡಬೇಕು ಎಂದು ಸಮಾಜ ಕೇಳಿರಲಿಲ್ಲ.
ಬಿಜೆಪಿಯಲ್ಲಿ ಯತ್ನಾಳ ಅವರಷ್ಟು ಜನಪ್ರಿಯ ನಾಯಕ ಸದ್ಯ ಯಾರೂ ಇರಲಿಲ್ಲ. ರಾಜ್ಯದ ಬಹುತೇಕ ಜನ ಯತ್ನಾಳ ವಿರೋಧ ಪಕ್ಷದ ನಾಯಕ ಆಗುತ್ತಾರೆ ಎಂಬ ಅಪೇಕ್ಷೆ ಪಟ್ಟಿದ್ದರು. ಆದರೆ, ಒಳಸಂಚಿನಿಂದಾಗಿ ಅವರಿಗೆ ಕೊನೇ ಗಳಿಗೆಯಲ್ಲಿ ಅನ್ಯಾಯವಾಗಿದೆ ಎಂದರು.
ಯತ್ನಾಳ ಅವರಿಗೆ ಅನ್ಯಾಯ ಆಗಿರುವುದರಿಂದ ಸಮಾಜದಲ್ಲಿ ದೊಡ್ಡ ಅಸಮಾದಾನ ಉಂಟಾಗಿದೆ. ಸಮಾಜದವರು ಸೇರಿದಂತೆ ಉತ್ತರ ಕರ್ನಾಟಕದವರು ಈ ಬಗ್ಗೆ ವಿರೋಧ ವ್ಯಕ್ತಪಡಿಸಬೇಕು ಎಂದು ಕರೆ ನೀಡಿದರು.
ಉತ್ತರ ಕರ್ನಾಟಕ ಭಾಗದ ಲಿಂಗಾಯತ ನಾಯಕರನ್ನು ಅದರಲ್ಲೂ ವಿಶೇಷವಾಗಿ ಪಂಚಮಸಾಲಿ ಮೀಸಲಾತಿ ಹೋರಾಟದ ಮುಂಚೂಣಿಯಲ್ಲಿ ಇದ್ದರವನ್ನು ಬಿಜೆಪಿ ಮತ್ತು ಕಾಂಗ್ರೆಸ್ ಕಡೆಗಣಿಸುತಾ ಬಂದಿವೆ ಎಂದು ದೂರಿದರು.