ಲಕ್ನೋ: ಉತ್ತರ ಪ್ರದೇಶದ ಪ್ರಸೂತಿ ತಜ್ಞರೊಬ್ಬರು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿರುವ ವಿಡಿಯೋವೊಂದು (Viral Video) ಇಡೀ ದೇಶಾದ್ಯಂತ ಭಾರಿ ಚರ್ಚೆ ಮತ್ತು ಕಳವಳಕ್ಕೆ ಕಾರಣವಾಗಿದೆ.
ಕೇವಲ 22 ವರ್ಷದ ಯುವತಿಯೊಬ್ಬಳು ಈಗಾಗಲೇ ಐದು ಮಕ್ಕಳ ತಾಯಿಯಾಗಿದ್ದು, ಇದೀಗ ಆರನೇ ಮಗುವಿಗೆ ಜನ್ಮ ನೀಡಲು ಸಿದ್ಧಳಾಗುತ್ತಿರುವ ಆಘಾತಕಾರಿ ಪ್ರಕರಣವೊಂದು ಈ ವಿಡಿಯೋ ಮೂಲಕ ಬೆಳಕಿಗೆ ಬಂದಿದೆ.
ಏನಿದು ಘಟನೆ?
ರಾಜಸ್ಥಾನ ಮೂಲದ ಈ ದಂಪತಿಗೆ ಕೇವಲ 15 ವರ್ಷ ವಯಸ್ಸಾಗಿದ್ದಾಗಲೇ ಬಾಲ್ಯವಿವಾಹವಾಗಿತ್ತು. ಸದ್ಯ ಇವರಿಗೆ ನಾಲ್ಕು ಹೆಣ್ಣು ಹಾಗೂ ಒಬ್ಬ ಗಂಡು ಮಗನಿದ್ದಾನೆ. ಆದರೂ, ಮತ್ತೊಂದು ಗಂಡು ಮಗು ಬೇಕೇಬೇಕು ಎಂಬ ಹಠಕ್ಕೆ ಬಿದ್ದು ಈ ದಂಪತಿ ಮತ್ತೆ ಮಗುವನ್ನು ಪಡೆಯಲು ಮುಂದಾಗಿದ್ದಾರೆ.
ಉತ್ತರ ಪ್ರದೇಶದ ಸ್ಪಂದನ್ ಆಸ್ಪತ್ರೆಯ ವೈದ್ಯೆ ಡಾ. ಪ್ರಗ್ಯಾ ತೋಮರ್ ಅವರು ದಂಪತಿಯ ಒಪ್ಪಿಗೆಯ ಮೇರೆಗೆ ಈ ಜಾಗೃತಿ ವಿಡಿಯೋವನ್ನು ಹಂಚಿಕೊಂಡಿದ್ದಾರೆ.
ವೈದ್ಯರೊಂದಿಗೆ ಮಾತನಾಡುವಾಗ ವೇಳೆ ಆ ಯುವತಿ, "ನನಗೆ ಸತತವಾಗಿ ಹೆಣ್ಣು ಮಕ್ಕಳೇ ಆಗುತ್ತಿದ್ದಾರೆ, ನಮಗೆ ಸದ್ಯ ಒಬ್ಬನೇ ಮಗನಿದ್ದು, ಮತ್ತೊಬ್ಬ ಗಂಡು ಮಗು ಬೇಕಾಗಿದೆ" ಎಂದು ತನಗಿರುವ ಗಂಡು ಮಗುವಿನ ವ್ಯಾಮೋಹವನ್ನು ಬಿಚ್ಚಿಟ್ಟಿದ್ದಾಳೆ.
ಇದಕ್ಕೆ ಧ್ವನಿಗೂಡಿಸಿರುವ ಆಕೆಯ ಪತಿ, ಕುಟುಂಬವನ್ನು ಸಾಕಿ ಸಲಹಲು ಮತ್ತು ವಂಶೋದ್ಧಾರ ಮಾಡಲು ಕೇವಲ ಒಬ್ಬ ಮಗ ಇದ್ದರೆ ಸಾಲದು ಎಂದು ಬೇಜವಾಬ್ದಾರಿತನದ ಮಾತನಾಡಿದ್ದಾನೆ.
ಈ ದಂಪತಿಯ ಮಾತುಗಳು ಅಂತರ್ಜಾಲದಲ್ಲಿ ತೀವ್ರ ಆಕ್ರೋಶಕ್ಕೆ ಕಾರಣವಾಗಿದ್ದು, ಸಮಾಜದಲ್ಲಿ ಇಂದಿಗೂ ಬೇರೂರಿರುವ ಲಿಂಗ ತಾರತಮ್ಯ ಮತ್ತು ಹೆಣ್ಣು ಮಕ್ಕಳ ಮೇಲಿನ ನಿರ್ಲಕ್ಷ್ಯದ ಧೋರಣೆಯನ್ನು ಎತ್ತಿ ತೋರಿಸಿದೆ.
ಇಷ್ಟು ಸಣ್ಣ ವಯಸ್ಸಿನಲ್ಲಿ ಹತ್ತಿರದ ಅಂತರದಲ್ಲಿ ಸತತವಾಗಿ ಗರ್ಭ ಧರಿಸುವುದರಿಂದ ಮಹಿಳೆಯ ಜೀವಕ್ಕೆ ಇರುವ ಭೀಕರ ಆರೋಗ್ಯದ ಅಪಾಯಗಳ ಬಗ್ಗೆ ವೈದ್ಯರು ಈ ದಂಪತಿಗೆ ತೀವ್ರ ಎಚ್ಚರಿಕೆ ನೀಡಿದ್ದಾರೆ.
ಸದ್ಯ ಆ ಯುವತಿ ತೀವ್ರ ಉಸಿರಾಟದ ತೊಂದರೆ, ತಲೆಸುತ್ತು ಮತ್ತು ತೀವ್ರ ಮೈಕೈ ನೋವಿನಿಂದ ಬಳಲುತ್ತಿದ್ದು, ಇದು ಸತತ ಹೆರಿಗೆಯಿಂದ ಉಂಟಾಗುವ ರಕ್ತಹೀನತೆ, ಅಪೌಷ್ಟಿಕತೆ ಮತ್ತು ದೈಹಿಕ ಬಳಲಿಕೆಯ ಲಕ್ಷಣಗಳಾಗಿವೆ.
"ಇಷ್ಟು ಸಾಲು ಸಾಲು ಗರ್ಭಧಾರಣೆಯಿಂದ ನೀನು ನಿನ್ನ ಪ್ರಾಣವನ್ನೇ ಪಣಕ್ಕಿಡುತ್ತಿದ್ದೀಯಾ" ಎಂದು ವೈದ್ಯರು ಆಕೆಯನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
ಸೂಕ್ತ ವಿಶ್ರಾಂತಿ ಮತ್ತು ಚೇತರಿಕೆಗೆ ಸಮಯ ನೀಡದೆ ಹೆರಿಗೆಯಾಗುವುದರಿಂದ ತಾಯಿ ಮತ್ತು ಗರ್ಭದಲ್ಲಿರುವ ಮಗು ಇಬ್ಬರ ಜೀವಕ್ಕೂ ಕುತ್ತು ಬರಲಿದೆ ಎಂದು ಅವರು ತಿಳಿಸಿದ್ದಾರೆ.
ನೆಟ್ಟಿಗರಿಂದ ಟೀಕೆಗಳ ಸುರಿಮಳೆ
ಈ ವಿಡಿಯೋ ವೈರಲ್ ಆಗುತ್ತಿದ್ದಂತೆ ನೆಟ್ಟಿಗರು ಯುವತಿಯ ಸ್ಥಿತಿಗೆ ತೀವ್ರ ಮರುಕ ವ್ಯಕ್ತಪಡಿಸಿದ್ದು, ಗಂಡು ಮಗುವಿಗಾಗಿ ಮಹಿಳೆಯರ ಮೇಲೆ ಒತ್ತಡ ಹೇರುವ ಸಾಮಾಜಿಕ ವ್ಯವಸ್ಥೆಯನ್ನು ಕಟುವಾಗಿ ಟೀಕಿಸುತ್ತಿದ್ದಾರೆ.
ಗ್ರಾಮೀಣ ಭಾಗಗಳಲ್ಲಿ ಕುಟುಂಬ ಯೋಜನೆ, ಜನನ ನಿಯಂತ್ರಣದ ಬಗ್ಗೆ ಇರುವ ಅರಿವಿನ ಕೊರತೆ ಮತ್ತು ಬಾಲ್ಯವಿವಾಹದ ದುಷ್ಪರಿಣಾಮಗಳ ಬಗ್ಗೆ ಸಾರ್ವಜನಿಕರು ಕಳವಳ ವ್ಯಕ್ತಪಡಿಸಿದ್ದಾರೆ.


