ಗುರುಮಠಕಲ್ : ತಾಲೂಕಿನ ಕಾಕಲವಾರ ಗ್ರಾಮ ಪಂಚಾಯತ್ ವ್ಯಾಪ್ತಿಯ ಬುದುರು ಗ್ರಾಮದಲ್ಲಿ ಗುಡುಗು–ಸಿಡಿಲು ಸಹಿತ ಸುರಿದ ಭಾರೀ ಮಳೆಯಿಂದಾಗಿ 66 ಕುರಿಗಳು ಸಾವನ್ನಪ್ಪಿದ ದುರ್ಘಟನೆ ಸೋಮವಾರ ಸಂಜೆ ಸಂಭವಿಸಿದೆ
ಸೋಮವಾರ ಸಂಜೆ ಅಕಸ್ಮಾತ್ ಮಳೆ ಆರಂಭವಾಗಿ ಗಾಳಿ ಹಾಗೂ ಮಿಂಚಿನ ತೀವ್ರತೆ ಹೆಚ್ಚಾಗಿದ್ದ ಸಂದರ್ಭದಲ್ಲಿ ಮೇಯಲು ತೆರಳಿದ್ದ ಕುರಿಗಳು ಮರದ ಕೆಳಗೆ ಆಶ್ರಯ ಪಡೆದಿದ್ದವು ಇದೇ ವೇಳೆ ಸಿಡಿಲು ಬಡಿದ ಪರಿಣಾಮ ಈ ದುರ್ಘಟನೆ ಸಂಭವಿಸಿದೆ ಎಂದು ತಿಳಿದುಬಂದಿದೆ.

ಈ ಘಟನೆಯಲ್ಲಿ ಸಾಯಪ್ಪ (ತಂದೆ: ಮಲ್ಲಪ್ಪ ಕಂದುಕೂರು) ಅವರಿಗೆ ಸೇರಿದ 14 ಕುರಿಗಳು, ಜಲ್ಲಪ್ಪ (ತಂದೆ: ಲಕ್ಷ್ಮಪ್ಪ) ಅವರಿಗೆ ಸೇರಿದ 22 ಕುರಿಗಳು, ಸಾಬಣ್ಣ (ತಂದೆ: ದೇವಪ್ಪ) ಅವರಿಗೆ ಸೇರಿದ 16 ಕುರಿಗಳು ಹಾಗೂ ನರಸಪ್ಪ (ತಂದೆ: ಚಂದ್ರಪ್ಪ) ಅವರಿಗೆ ಸೇರಿದ 14 ಕುರಿಗಳು ಸಾವನ್ನಪ್ಪಿವೆ ಒಟ್ಟಾರೆ 66 ಕುರಿಗಳ ಸಾವನಪ್ಪಿವೆ ಕುರಿಗಾಹಿಗಳಿಗೆ ಆರ್ಥಿಕ ನಷ್ಟ ಉಂಟಾಗಿದೆ
ಸುದ್ದಿ ತಿಳಿದ ಬಳಿಕ ಬುಧವಾರ ಸಂಜೆ ಗುರುಮಠಕಲ್ ಕ್ಷೇತ್ರದ ಶಾಸಕ ಶರಣುಗೌಡ ಕಂದುಕೂರು ಅವರು ಗ್ರಾಮಕ್ಕೆ ಭೇಟಿ ನೀಡಿ ಪೀಡಿತ ಕುರಿಗಾಹಿಗಳಿಗೆ ಧೈರ್ಯ ತುಂಬಿದರು ಸರ್ಕಾರದಿಂದ ಬಂದ ಪರಿಹಾರ ಪತ್ರವನ್ನು ನೀಡಿದರು.

ಈ ಸಂದರ್ಭದಲ್ಲಿ ಗ್ರಾಮಸ್ಥರು ಮೂಲಭೂತ ಸೌಕರ್ಯಗಳ ಸಮಸ್ಯೆಗಳ ಕುರಿತು ಶಾಸಕರಿಗೆ ಮನವಿ ಸಲ್ಲಿಸಿದರು ಪ್ರತಿಕ್ರಿಯಿಸಿದ ಶಾಸಕ ಶರಣುಗೌಡ ಕಂದುಕೂರು ಅವರು ಸಂಬಂಧಪಟ್ಟ ಅಧಿಕಾರಿಗಳಿಗೆ ತಕ್ಷಣವೇ ಸಮಸ್ಯೆಗಳ ಪರಿಹಾರಕ್ಕೆ ಕ್ರಮ ಕೈಗೊಳ್ಳುವಂತೆ ಸೂಚಿಸಿದರು. ಅಗತ್ಯ ಕ್ರಮ ಕೈಗೊಳ್ಳದಿದ್ದಲ್ಲಿ ಮುಂದಿನ ದಿನಗಳಲ್ಲಿ ಪಂಚಾಯತ್ಗಳಿಗೆ ಮುತ್ತಿಗೆ ಹಾಕಬೇಕಾಗುತ್ತದೆ ಎಂದು ಎಚ್ಚರಿಸಿದರು.
ಈ ಸಂದರ್ಭದಲ್ಲಿ ತಹಸೀಲ್ದಾರ್ ಚನ್ನಮಲ್ಲಪ್ಪ ಘಂಟಿ, ಗ್ರೂಪ್-2 ಅಧಿಕಾರಿ ನರಸಿಂಹ ಸ್ವಾಮಿ, ಉಪ ತಹಸೀಲ್ದಾರ್, ಕಂದಾಯ ನಿರೀಕ್ಷಕ ಭೀಮಶೇನ್, ದೊಡ್ಡ ಬಸವರಾಜ್, ಗ್ರಾಮ ಲೆಕ್ಕಪಾಲಕ ನವನಾಥ್, ಸಹಾಯಕ ಸಬ್ ಇನ್ಸ್ಪೆಕ್ಟರ್ ಭೀಮಶಪ್ಪ ಕಾನಗಡ್ಡ, ಸುಭಾಸ್ ಕಟಕಟಿ, ಜೆಡಿಎಸ್ ಜಿಲ್ಲಾ ಅಧ್ಯಕ್ಷರು, ಬ್ಲಾಕ್ ಅಧ್ಯಕ್ಷ ಪ್ರಕಾಶ್ ನೀರೇಟಿ ಸೇರಿದಂತೆ ಜೆಡಿಎಸ್ ಮುಖಂಡರು, ಕಾರ್ಯಕರ್ತರು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.
ವರದಿ : ರವಿ ಬುರನೋಳ್

