ಬಾಗಲಕೋಟೆ: ಆಧುನಿಕವಾಗಿ ಪ್ರಪಂಚ ಅದೇಷ್ಟೇ ಮುಂದುವರೆದಿದ್ದರೂ ಬಹಿಷ್ಕಾರದಂತಹ ಅನಿಷ್ಟ ಪದ್ಧತಿ ಇನ್ನೂ ಸಮಾಜದಲ್ಲಿ ಜೀವಂತವಾಗಿದೆ.
ದೇವರ ಜಾತ್ರೆಗೆ ಹಣ ನೀಡಲಿಲ್ಲ ಎಂಬ ಕಾರಣಕ್ಕೆ 7 ಕುಟುಂಬಗಳನ್ನು ಊರಿನಿಂದ ಬಹಿಷ್ಕರಿಸಿರುವ ವಿಚಿತ್ರ ಘಟನೆ ಬಾಗಲಕೋಟೆಯಲ್ಲಿ ನಡೆದಿದೆ.
ಬಾಗಲಕೋಟೆ ಜಿಲ್ಲೆಯ ಜಮಖಂಡಿ ತಾಲೂಕಿನ ಹುಣಸಿಕಟ್ಟಿ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಹನುಮಂತ ದೇವರ ಓಕುಳಿ ಜಾತ್ರೆಗೆ 600 ರೂಪಾಯಿ ಹಣ ನೀಡಿಲ್ಲ ಎಂಬ ಕಾರಣಕ್ಕೆ 7 ಕುಟುಂಬಗಳಿ ಗ್ರಮದ ಮುಖಂಡರು ಊರಿನಿಂದಲೇ ಬಹಿಷ್ಕಾರ ಹಾಕಿಸಿದ್ದಾರೆ.
ಈ ಕುಟುಂಬಗಳು ಊರಿನಲ್ಲಿದ್ದರೂ ಯಾರೂ ಅವರನ್ನು ಸಪರ್ಕಿಸುವಂತಿಲ್ಲ. ಯಾವುದೇ ಸಹಾಯ ಮಾಡುವಂತಿಲ್ಲ. ಮಾತನಾಡಿಸುವಂತಿಲ್ಲ. ಅವರ ಮನೆಗಳಿಗೆ ಯಾರೂ ಭೇಟಿ ನೀಡುವಂತಿಲ್ಲ ಹೀಗೆಂದು ಊರಿನಲ್ಲಿ ಡಂಗುರ ಸಾರಲಾಗಿದೆ.
ಯಲಪ್ಪ ಛಗಣ್ಣವರ, ಅಣ್ಣಪ್ಪ ಕಡಪಟ್ಟಿ, ಸಿದ್ದಪ್ಪ ಎಣ್ಣಿ, ಕರೆಪ್ಪ ಎಣ್ಣಿ, ಯಲ್ಲಪ್ಪ, ಮಲ್ಲಪ್ಪ ಬಟಕುರ್ಕಿ, ರಾಮಪ್ಪ ಕುಟುಂಬಕ್ಕೆ ಬಹಿಷ್ಕಾರ ಹಾಕಲಾಗಿದೆ. ಈ 7 ಕುಟುಂಬವನ್ನು ಊರಿನಿಂದ ಹೊರಗೆ ಇಟ್ಟಿದ್ದೇವೆ ಎಂದು ಡಂಗುರ ಸಾರಿ ಘೋಷಿಸಲಾಗಿದೆ.
ಏಪ್ರಿಲ್ 2ರಂದು ಹನುಮನ ಓಕುಳಿ ಜಾತ್ರೆ ಹಿನ್ನೆಲೆ ಹಣ ಸಂಗ್ರಹಕಾರ್ಯ ನಡೆದಿತ್ತು. ಆದರೆ ಈ 7 ಕುಟುಂಬಗಳು ದುಡ್ಡನ್ನು ನೀಡದ ಕಾರಣಕ್ಕೆ ಏಪ್ರಿಲ್ 5ರಂದು ಬಹಿಷ್ಕಾರದ ಬಗ್ಗೆ ಡಂಗುರ ಸಾರಲಾಗಿದೆ.
ಇವರ ಮನೆಗೆ ಸ್ವಾಮಿಗಳು, ಪೂಜಾರಿಗಳು ಹೋಗುವ ಹಾಗಿಲ್ಲ. ಇವರ ಮನೆ ಕಾರ್ಯಗಳಿಗೆ ಯಾರೂ ಹೋಗಬಾರದು. ಕಿರಾಣಿ ಅಂಗಡಿಯವರು ಈ ಕುಟುಂಬಗಳಿಗೆ ದಿನಸಿ ವಸ್ತುಗಳನ್ನು ಕೂಡ ನೀಡುವಂತಿಲ್ಲ. ಯಾರೂ ಏನು ಕೊಡುವ ಹಾಗಿಲ್ಲ ಎಂದು ಡಂಗುರ ಸಾರಲಾಗಿದೆ.
ಇನ್ನು ಬಹಿಷ್ಕಾರಕ್ಕೆ ಒಳಗಾಗಿರುವ 7 ಕುಟುಂಬಗಳ ಸದಸ್ಯರ ಪೈಕಿ ಹುಬ್ಬಳ್ಳಿಯಲ್ಲಿ ರೇಲ್ವೆ ಇಲಾಖೆಯ ನೌಕರರಾಗಿರುವ ಯಲ್ಲಪ್ಪ ಛಗಣ್ಣ ಅವರು ಊರಿನ ಮುಖಂಡರ ಈ ನಿರ್ಧಾರ ಪ್ರಶ್ನೆ ಮಾಡಿದ್ದಾರೆ.
ಕುಟುಂಬಗಳಿಗೆ ಬಹಿಷ್ಕಾರ ಹಾಕಿರುವವರ ಮೇಲೆ ಕ್ರಮಕ್ಕೆ ಕೈಗೊಳ್ಳುವಂತೆ ಜಮಖಂಡಿ ತಹಶೀಲ್ದಾರ್, ಜಿಲ್ಲಾಧಿಕಾರಿಗಳಿಗೆ ಪತ್ರ ಬರೆದಿದ್ದಾರೆ.
ನಾನು ಯಾವಾಗಲೂ ಜಾತ್ರೆಗೆ ಕೇಳಿದ ದೇಣಿಗೆ ಪಾವತಿಸುತ್ತಿದ್ದೆ. ಆದರೆ ಈ ಬಾರಿ ಕೆಲಸದ ನಿಮಿತ್ತ ಬರಲು ಸಾಧ್ಯವಾಗಿಲ್ಲ. ಈ ವಿಚಾರ ಗೊತ್ತಾಗಿಲ್ಲ. ಅಷ್ಟರಲ್ಲಿ ನಮ್ಮ ಕುಟುಂಬದವರನ್ನೂ ಊರಿನಿಂದ ಬಹಿಷ್ಕಾರ ಹಾಕಿ ಹೊರಗಿಟ್ಟಿರುವುದು ತಿಳಿಯಿತು.
ನಮಗೆ ಊರಲ್ಲಿ ಬಹಿಷ್ಕಾರ ಹಾಕಿದ ಹಿನ್ನೆಲೆ ಅಪಮಾನವಾಗಿದೆ, ಗೌರವಕ್ಕೆ ಧಕ್ಕೆಯಾಗಿದೆ. ಹೀಗಾಗಿ ಡಂಗುರ ಸಾರಿದವರು ಮತ್ತು ಸಾರಿಸಿದವರ ಮೇಲೆ ಕಾನೂನು ಕ್ರಮ ಆಗಬೇಕು.
ಅವರಿಗೆ ಶಿಕ್ಷೆಯಾಗಬೇಕೆಂದು ಆಗ್ರಹಿಸಿದ್ದಾರೆ. ಊರಿಗೆ ಬಂದ ಅಧಿಕಾರಿಗಳು ಸಭೆ ನಡೆಸಿ ಎಲ್ಲರನ್ನೂ ಸಮಾಧಾನ ಮಾಡಿ ಹೋಗಿದ್ದಾರೆ. ಆದರೆ ನಮಗಾದ ಅಪಮಾನಕ್ಕೆ ಹೊಣೆ ಯಾರು ಈ ಬಗ್ಗೆ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.

