ರಾಮನಗರ: ಡಿ.ಕೆ.ಶಿವಕುಮಾರ್ ಮುಖ್ಯಮಂತ್ರಿಯಾಗಲೆಂದು ಅವರ ಅಭಿಮಾಅನಿಗಳು ವಿವಿಧ ರೀತಿಯ ಹರಕೆಗಳನ್ನು ಹೊತ್ತಿದ್ದಾರೆ.
ಡಿ.ಕೆ.ಶಿವಕುಮಾರ್ ಸಿಎಂ ಆಗುವವರೆಗೂ ಚಪ್ಪಲಿಯನ್ನೇ ಧರಿಸಲ್ಲ ಎಂದು ಶಪಥ ಮಾಡಿರುವ ಅಭಿಮಾನಿ ಬಗ್ಗೆ ನೋಡಿದ್ದೆವು. ಇದೀಗ ಇಲ್ಲೋರ್ವ ಅಭಿಮಾನಿ ಡಿ.ಕೆ.ಶಿವಕುಮಾರ್ ಸಿಎಂ ಆಗಲಿ ಎಂದು ಕಳೆದ ಮೂರು ವರ್ಷಗಳಿಂದ ಕ್ಷೌರವನ್ನೇ ಮಾಡಿಸಿಲ್ಲ.
ಹೌದು. ಡಿ.ಕೆ.ಶಿವಕುಮಾರ್ ಅವರ ಅಪ್ಪಟ ಅಭಿಮಾನಿಯೊಬ್ಬರು ಅಪರೂಪದ ಹರಕೆಯನ್ನು ಹೊತ್ತಿದ್ದಾರೆ. ಬೆಂಗಳೂರು ದಕ್ಷಿಣ ಜಿಲ್ಲೆಯ ಹಾರೋಹಳ್ಳಿ ತಾಲೂಕಿನ ಚಿಕ್ಕಸಾದೇನಹಳ್ಳಿ ಗ್ರಾಮದ ಈಶ್ವರಪ್ಪ ಎಂಬ ಅಭಿಮಾನಿ, ತಮ್ಮ ನೆಚ್ಚಿನ ನಾಯಕ ಡಿ.ಕೆ.ಶಿವಕುಮಾರ್ ಮುಖ್ಯಮಂತ್ರಿಯಾಗಲಿ ಎಂದು ಕಳೆದ ಮೂರು ವರ್ಷಗಳಿಂದ ಗಡ್ದ-ಕೂಡಲು ಕತ್ತರಿಸದೇ ಕ್ಷೌರವನ್ನೇ ಮಾಡಿಸದೇ ವಿಶಿಷ್ಠ ಹರಕೆ ಹೊತ್ತಿದ್ದಾರೆ.
ಆಸ್ತಿ, ಅಂತಸ್ತಿಗಿಂತಲೂ ಡಿ.ಕೆ. ಶಿವಕುಮಾರ್ ಅವರ ರಾಜಕೀಯ ಬೆಳವಣಿಗೆಯನ್ನೇ ತನ್ನ ಧ್ಯೇಯವಾಗಿಸಿಕೊಂಡಿದ್ದ ಈಶ್ವರಪ್ಪ, 'ಡಿಕೆಶಿ ರಾಜ್ಯದ ಮುಖ್ಯಮಂತ್ರಿಯಾಗುವವರೆಗೂ ನಾನು ತಲೆಗೂದಲು ಹಾಗೂ ಗಡ್ಡವನ್ನು ಕತ್ತರಿಸುವುದಿಲ್ಲ (ಕ್ಷೌರ ಮಾಡಿಸುವುದಿಲ್ಲ)' ಎಂದು ಪ್ರತಿಜ್ಞೆ ಮಾಡಿದ್ದರು.
ಅಷ್ಟೇ ಅಲ್ಲದೆ, ಉತ್ತರ ಪ್ರದೇಶದ ಪ್ರಯಾಗ್ ರಾಜ್ಗೆ ತೆರಳಿದ್ದ ಈಶ್ವರಪ್ಪ, ಪವಿತ್ರ ಕುಂಭಮೇಳದ ಸಂದರ್ಭದಲ್ಲಿ ಅಲ್ಲಿನ ತ್ರಿವೇಣಿ ಸಂಗಮದಲ್ಲಿ ಡಿ.ಕೆ ಶಿವಕುಮಾರ್ ಅವರ ಭಾವಚಿತ್ರವನ್ನು ಕೈಯಲ್ಲಿ ಹಿಡಿದು, ಅವರು ಶೀಘ್ರದಲ್ಲೇ ಕರುನಾಡಿನ ಸಿಎಂ ಆಗಲಿ ಎಂದು ವಿಶೇಷ ಪ್ರಾರ್ಥನೆ ಮತ್ತು ಪೂಜೆ ಸಲ್ಲಿಸಿ ಗಮನ ಸೆಳೆದಿದ್ದರು.
ಕಳೆದ ಮೂರು ವರ್ಷಗಳಿಂದ ಗಡ್ಡ ಮತ್ತು ದಟ್ಟವಾದ ತಲೆಗೂದಲು ಬಿಟ್ಟು ತಪಸ್ವಿಯಂತೆ ತಿರುಗುತ್ತಿದ್ದ ಈಶ್ವರಪ್ಪ ಅವರ ಸುದೀರ್ಘ ಪ್ರಾರ್ಥನೆಗೆ ಕೊನೆಗೂ ಮಂತ್ರಾಲಯದ ಶ್ರೀ ರಾಘವೇಂದ್ರ ಸ್ವಾಮಿಗಳು ಹಾಗೂ ಕಾಲಭೈರವೇಶ್ವರ ಅನುಗ್ರಹ ನೀಡಿದ್ದಾರೆ.
ಹೈಕಮಾಂಡ್ ಮಟ್ಟದಲ್ಲಿ ಡಿಕೆಶಿ ಹೆಸರು ಸಿಎಂ ಹುದ್ದೆಗೆ ಫೈನಲ್ ಆಗುತ್ತಿದ್ದಂತೆಯೇ ಈಶ್ವರಪ್ಪ ಅವರ ಗ್ರಾಮದಲ್ಲಿ ಹಬ್ಬದ ವಾತಾವರಣ ಸೃಷ್ಟಿಯಾಗಿದೆ.
ಡಿ.ಕೆ ಶಿವಕುಮಾರ್ ಅವರು ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ ತಕ್ಷಣವೇ ಬೆಂಗಳೂರಿಗೆ ಬಂದು ಅವರನ್ನು ಖುದ್ದಾಗಿ ಭೇಟಿಯಾಗಿ ಅಭಿನಂದನೆ ಸಲ್ಲಿಸಲು ಈಶ್ವರಪ್ಪ ನಿರ್ಧರಿಸಿದ್ದಾರೆ.
ಅದಾದ ಬಳಿಕ ನೇರವಾಗಿ ಮಂತ್ರಾಲಯ ಕ್ಷೇತ್ರಕ್ಕೆ ತೆರಳಿ ಶ್ರೀ ಗುರು ರಾಯರ ಸನ್ನಿಧಿಯಲ್ಲಿ ತಮ್ಮ ತಲೆಗೂದಲು ಹಾಗೂ ಗಡ್ಡವನ್ನು ಮುಡಿ ಕೊಟ್ಟು ಹರಕೆ ತೀರಿಸುವುದಾಗಿ ತಿಳಿಸಿದ್ದಾರೆ. ಡಿ.ಕೆ.ಶೊವಕುಮಾರ್ ಮೇಲಿನ ಇವರ ಅಭಿಮಾನ ಸಾಮಾಜಿಕ ಜಾಲತಾಣಗಲಲ್ಲಿ ಭಾರಿ ವೈರಲ್ ಆಗಿದೆ.


