ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಯಲ್ಲಿ ಭಾರತೀಯ ಜನತಾ ಪಕ್ಷವು ಐತಿಹಾಸಿಕ ಜಯ ದಾಖಲಿಸಿ ಅಧಿಕಾರ ಹಿಡಿಯುತ್ತಿದ್ದಂತೆ, ರಾಜ್ಯದಲ್ಲಿ ವಿಶಿಷ್ಟ ಘಟನೆಯೊಂದು ನಡೆದಿದೆ.
ತೃಣಮೂಲ ಕಾಂಗ್ರೆಸ್ (ಟಿಎಂಸಿ) ಆಡಳಿತ ಅಂತ್ಯವಾಗುವವರೆಗೆ ತಾವು ಕ್ಷೌರ ಮಾಡಿಸಿಕೊಳ್ಳುವುದಿಲ್ಲ ಎಂದು ಪ್ರತಿಜ್ಞೆ ಮಾಡಿದ್ದ ಬಿಜೆಪಿ ಬೆಂಬಲಿಗರೊಬ್ಬರು, 15 ವರ್ಷಗಳ ನಂತರ ತಮ್ಮ ಹರಕೆಯನ್ನು ತೀರಿಸಿದ್ದಾರೆ.
ಬಂಗಾಳದ ಬಮನ್ ಪಾರಾ ಗ್ರಾಮದ ನಿವಾಸಿ ಬನೇಶ್ವರ್ ಬರ್ಮನ್ ಈ ಸಾಹಸ ಮಾಡಿದ ವ್ಯಕ್ತಿ. 2011ರಲ್ಲಿ ಮಮತಾ ಬ್ಯಾನರ್ಜಿ ನೇತೃತ್ವದ ಟಿಎಂಸಿ ಸರ್ಕಾರ ಅಧಿಕಾರಕ್ಕೆ ಬಂದಾಗ, ಬರ್ಮನ್ ಅವರು ಒಂದು ಕಠಿಣ ನಿರ್ಧಾರ ಕೈಗೊಂಡಿದ್ದರು. ಬಂಗಾಳದಲ್ಲಿ ಟಿಎಂಸಿ ಅಧಿಕಾರದಿಂದ ಇಳಿಯುವವರೆಗೂ ನಾನು ಕೂದಲು ಕತ್ತರಿಸುವುದಿಲ್ಲ ಎಂದು ಅವರು ಶಪಥ ಮಾಡಿದ್ದರು. ಅದರಂತೆ ಕಳೆದ ಒಂದೂವರೆ ದಶಕದಿಂದ ಅವರು ತಮ್ಮ ಕೂದಲನ್ನು ಹಾಗೆಯೇ ಬೆಳೆಸಿದ್ದರು.
2026ರ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ 200ಕ್ಕೂ ಹೆಚ್ಚು ಸ್ಥಾನಗಳನ್ನು ಗೆಲ್ಲುವ ಮೂಲಕ ಟಿಎಂಸಿಯ 15 ವರ್ಷಗಳ ಸುದೀರ್ಘ ಆಡಳಿತಕ್ಕೆ ಅಂತ್ಯ ಹಾಡಿದೆ.
ಈ ರಾಜಕೀಯ ಬದಲಾವಣೆಯ ಬೆನ್ನಲ್ಲೇ ಬರ್ಮನ್ ಅವರು ಸ್ಥಳೀಯ ಕ್ಷೌರದ ಅಂಗಡಿಗೆ ತೆರಳಿ ಶಿರ ಮುಂಡನ ಮಾಡಿಸಿಕೊಂಡಿದ್ದಾರೆ. ಈ ಅಪರೂಪದ ಕ್ಷಣವನ್ನು ನೋಡಲು ಗ್ರಾಮಸ್ಥರು ಹೆಚ್ಚಿನ ಸಂಖ್ಯೆಯಲ್ಲಿ ಜಮಾಯಿಸಿದ್ದರು.
ಬಿಜೆಪಿ ಬೆಂಬಲಿಗರು ಬರ್ಮನ್ ಅವರ ಈ ನಡೆಯನ್ನು ವಿಜಯೋತ್ಸವದ ಸಂಕೇತವೆಂದು ಆಚರಿಸುತ್ತಿದ್ದಾರೆ. ಈ ಬಾರಿಯ ಚುನಾವಣೆಯಲ್ಲಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಭವಾನಿಪುರ ಕ್ಷೇತ್ರದಲ್ಲಿ ಸುುವೇಂದು ಅಧಿಕಾರಿಯವರ ವಿರುದ್ಧ ಸೋಲನುಭವಿಸಿದ್ದಾರೆ.
ಬಂಗಾಳದ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಬಿಜೆಪಿ ಅಧಿಕಾರ ಹಿಡಿದಿದ್ದು, ಅತ್ತ ಬರ್ಮನ್ 15 ವರ್ಷಗಳ ನಂತರ ಕೂದಲು ಕತ್ತರಿಸುವ ಮೂಲಕ ನಿರಾಳವಾಗಿದ್ದಾರೆ.


