ಅಥಣಿ: ಜೂ. ೨೨ರಂದು ಮಹಾರಾಷ್ಟ್ರ ಏಕೀಕರಣ ಸಮಿತಿ (ಎಂ. ಈ.ಎಸ್) ವತಿಯಿಂದ ಆಯೋಜಿಸಲು ಮುಂದಾಗಿರುವ "ಕನ್ನಡ ಕಡ್ಡಾಯ ವಿರೋಧಿ ಮಹಾಮೋರ್ಚಾ" ಕಾರ್ಯಕ್ರಮಕ್ಕೆ ಯಾವುದೇ ಕಾರಣಕ್ಕೂ ಅನುಮತಿ ನೀಡಬಾರದು ಎಂದು ಕರ್ನಾಟಕ ರಕ್ಷಣೆ ವೇದಿಕೆಯ ಅಥಣಿ ತಾಲೂಕಿನ ಘಟಕವು ತೀವ್ರವಾಗಿ ಆಗ್ರಹಿಸಿದೆ. ಈ ಕುರಿತು ಕರವೇ ಪದಾಧಿಕಾರಿಗಳ ನಿಯೋಗವು ಇಂದು ಅಥಣಿ ತಾಲೂಕಿನ ದಂಡಾಧಿಕಾರಿಗಳಿಗೆ ಖುದ್ದಾಗಿ ಭೇಟಿ ಮಾಡಿ ಮನವಿ ಪತ್ರ ಸಲ್ಲಿಸಿತು. ಕನ್ನಡಿಗರ ಹಕ್ಕುಗಳನ್ನು ಹತ್ತಿಕ್ಕುವ ಇಂತಹ ಪ್ರಯತ್ನಗಳಿಗೆ ಕಾನೂನಾತ್ಮಕವಾಗಿ ಬ್ರೇಕ್ ಹಾಕಬೇಕು ಎಂದು ಸಂಘಟನೆ ಒತ್ತಾಯಿಸಿದೆ. ಕರ್ನಾಟಕದ ನೆಲದಲ್ಲಿ ಕನ್ನಡವನ್ನು ಕಡ್ಡಾಯಗೊಳಿಸುವುದು ರಾಜ್ಯದ ಭಾಷಾ ಹಕ್ಕು ಮಾತ್ರವಲ್ಲದೆ, ಅದು ಸಂವಿಧಾನಬದ್ಧ ನೀತಿಯ ಭಾಗವಾಗಿದೆ. ಬೆಳಗಾವಿ ಕನ್ನಡದ ನೆಲ,ಕರ್ನಾಟಕದ ಕಿರೀಟ, ಇಲ್ಲಿ ಕನ್ನಡವೇ ಸಾರ್ವಭೌಮ, ಕನ್ನಡ ನೆಲ,ಜಲ,ಭಾಷೆ, ಮತ್ತು ಸಂಸ್ಕೃತಿಗೆ ಗೌರವ ಕೊಡುವದು ಇಲ್ಲಿಯ ನಿವಾಸಿಗಳ ಕರ್ತವ್ಯ. ಬೆಳಗಾವಿಯಲ್ಲಿ ಕನ್ನಡ ಕಡ್ಡಾಯದ ವಿರುದ್ಧ ಜೂನ್ ೨೨ ರಂದು ಬೆಳಗಾವಿಯಲ್ಲಿ ಪ್ರತಿಭಟನೆ ನಡೆಸಲು ನಿರ್ಧರಿಸಿರುವ ಎಂಈಎಸ್ ನಾಯಕರನ್ನು ಮುಂಜಾಗ್ರತವಾಗಿ ಬಂಧಿಸಬೇಕು. ಎಂಈಎಸ್ ಬೆಳಗಾವಿಯಲ್ಲಿ ನಡೆಸಲಿರುವ ಪ್ರತಿಭಟನೆಗೆ ಯಾವುದೇ ಕಾರಣಕ್ಕೂ ಅನುಮತಿ ನೀಡಬಾರದು. ಇಂತಹ ಸಂದರ್ಭದಲ್ಲಿ ಕನ್ನಡ ಕಡ್ಡಾಯ ನೀತಿಯನ್ನು ವಿರೋಧಿಸುವ ನೆಪದಲ್ಲಿ ಬೃಹತ್ ಮೋರ್ಚಾ ನಡೆಸಲು ಹೊರಟಿರುವುದು ಕನ್ನಡ ನಾಡು, ನುಡಿ ಮತ್ತು ರಾಜ್ಯದ ಹಿತಾಸಕ್ತಿಗೆ ಸಂಪೂರ್ಣ ವಿರುದ್ಧವಾಗಿದೆ ಎಂದು ಕರವೇ ಕಾರ್ಯಕರ್ತರು ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ನಮ್ಮದೇ ನೆಲದಲ್ಲಿ ಇಂತಹ ಕನ್ನಡ ವಿರೋಧಿ ಚಟುವಟಿಕೆಗಳಿಗೆ ಮುಕ್ತ ಅವಕಾಶ ನೀಡಿದರೆ, ಗಡಿ ಭಾಗದಲ್ಲಿ ಅನಗತ್ಯವಾಗಿ ಕಾನೂನು ಸುವ್ಯವಸ್ಥೆ ಉದ್ವಿಗ್ನ ವಾತಾವರಣ ಸೃಷ್ಟಿಯಾಗುವ ಸಾಧ್ಯತೆ ಹೆಚ್ಚಿರುತ್ತದೆ. ಬೆಳಗಾವಿ ಗಡಿ ಜಿಲ್ಲೆಯಲ್ಲಿ ಭಾಷಾ ವಿಷಯವನ್ನು ಮುಂದಿಟ್ಟುಕೊಂಡು ರಾಜಕೀಯ ಬೇಳೆ ಬೇಯಿಸಿಕೊಳ್ಳುವ ಇಂತಹ ಪ್ರಯತ್ನಗಳನ್ನು ಹತ್ತಿಕ್ಕಲು ಆಡಳಿತ ವ್ಯವಸ್ಥೆಯು ತಕ್ಷಣವೇ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಮನವಿಯಲ್ಲಿ ಒತ್ತಾಯಿಸಲಾಗಿದೆ.
ಗಡಿಭಾಗದ ಶಾಂತಿ, ಸೌಹಾರ್ದತೆ ಮತ್ತು ಕಾನೂನು ಸುವ್ಯವಸ್ಥೆಯನ್ನು ಕಾಪಾಡುವ ಹಿತದೃಷ್ಟಿಯಿಂದ ಜೂನ್ ೨೨ರ ಮಹಾಮೋರ್ಚಾಗೆ ಯಾವುದೇ ಕಾರಣಕ್ಕೂ ಆಡಳಿತ ಮಂಡಳಿ ಅನುಮತಿ ನೀಡಬಾರದು. ಕನ್ನಡದ ವಿರುದ್ಧ ಜನಾಭಿಪ್ರಾಯ ಮೂಡಿಸುವ ಅಥವಾ ರಾಜ್ಯ ಸರ್ಕಾರದ ಭಾಷಾ ನೀತಿಯನ್ನು ಬಹಿರಂಗವಾಗಿ ಪ್ರಶ್ನಿಸುವ ಯಾವುದೇ ಪ್ರಚೋದನಾತ್ಮಕ ಕಾರ್ಯಕ್ರಮಗಳಿಗೆ ಜಿಲ್ಲಾಡಳಿತ ಕಟ್ಟುನಿಟ್ಟಾಗಿ ಆಸ್ಪದ ನೀಡಬಾರದು ಎಂದು ಕರವೇ ಎಚ್ಚರಿಸಿದೆ. ಈ ಮಹತ್ವದ ನಿಯೋಗದಲ್ಲಿ ಕರವೇ ತಾಲೂಕಾ ಅಧ್ಯಕ್ಷರು ಶಬ್ಬೀರ್ ಸಾತ್ಬಚ್ಚೆ, ಉಪಾಧ್ಯಕ್ಷರಾದ ಸಿದ್ದಗೌಡ ಹಿಪ್ಪರಗಿ,ಕಾರ್ಯದರ್ಶಿ ಜಾಫರ್ ಪಟೇಲ್, ಅಪ್ಪು ಪೂಜಾರಿ, ನಿಖಿಲ್, ಹಾಗೂ ಮಹಿಳಾ ಕರವೇ ತಾಲೂಕಾ ಅಧ್ಯಕ್ಷರು, ಆರತಿ ಶಿವಶರಣ, ಮತ್ತು ಉಪಾಧ್ಯಕ್ಷರು ಲಕ್ಷ್ಮೀ ಸೇರಿದಂತೆ ಹಲವು ಮುಖಂಡರು ಮತ್ತು ಕಾರ್ಯಕರ್ತರು ಉಪಸ್ಥಿತರಿದ್ದರು.
ವರದಿ:ಪ್ರಲ್ಹಾದ ವಾಘಮೋರೆ


