ಬೆಳಗಾವಿ: ಬೆಳಗಾವಿ ಜಿಲ್ಲೆಯಲ್ಲಿ ಮತ್ತೊಂದು ಭೀಕರ ಹಾಗೂ ಕಾನೂನು ಕೈಗೆತ್ತಿಕೊಂಡ ಘಟನೆ ನಡೆದಿದೆ. ವಿವಾಹಿತ ಮಹಿಳೆಯೊಬ್ಬಳನ್ನು ಕರೆದೊಯ್ದ ಯುವಕನ ಮನೆ ಮೇಲೆ ನೂರಕ್ಕೂ ಹೆಚ್ಚು ಜನರ ಗುಂಪು ಮಾರಕಾಸ್ತ್ರಗಳೊಂದಿಗೆ ದಾಳಿ ನಡೆಸಿ, ಇಡೀ ಮನೆಯನ್ನು ಸಂಪೂರ್ಣವಾಗಿ ಧ್ವಂಸಗೊಳಿಸಿರುವ ಘಟನೆ ಬೆಳಗಾವಿ ತಾಲೂಕಿನ ಭರಮ್ಯಾನಟ್ಟಿ ಗ್ರಾಮದಲ್ಲಿ ವರದಿಯಾಗಿದೆ.
ಈ ಗ್ರಾಮವು ಸಚಿವ ಸತೀಶ್ ಜಾರಕಿಹೊಳಿ ಅವರು ಪ್ರತಿನಿಧಿಸುವ ಯಮಕನಮರಡಿ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಗೆ ಒಳಪಡಲಿದ್ದು, ಸದ್ಯ ಇಡೀ ಭಾಗದಲ್ಲಿ ತೀವ್ರ ಆತಂಕ ಹಾಗೂ ಉದ್ವಿಗ್ನ ವಾತಾವರಣ ಸೃಷ್ಟಿಸಿದೆ.
ಭರಮ್ಯಾನಟ್ಟಿ ಗ್ರಾಮದ ಯಲ್ಲಪ್ಪ ನಾಯಕ ಹಾಗೂ ಬಸಪ್ಪ ನಾಯಕ ಇಬ್ಬರೂ ಆತ್ಮೀಯ ಸ್ನೇಹಿತರಾಗಿದ್ದರು. ಕಳೆದ ವರ್ಷವಷ್ಟೇ ಬಸಪ್ಪ ನಾಯಕ ಗೆ ನಾಗವ್ವ ಎಂಬಾಕೆಯೊಂದಿಗೆ ವಿವಾಹವಾಗಿತ್ತು.
ಬಸಪ್ಪ, ಆತನ ಪತ್ನಿ ನಾಗವ್ವ ಹಾಗೂ ಸ್ನೇಹಿತ ಯಲ್ಲಪ್ಪ ನಾಯಕ ಮೂವರೂ ಬೆಳಗಾವಿಯ ಉದ್ಯಮಬಾಗದ 'ಅಶೋಕ್ ಐರನ್' ಕಂಪನಿಯಲ್ಲಿ ಒಟ್ಟಿಗೆ ಕೆಲಸ ಮಾಡುತ್ತಿದ್ದರು. ಒಂದೇ ಕಡೆ ಕೆಲಸ ಮಾಡುತ್ತಿದ್ದರಿಂದ ಮೂವರ ನಡುವೆ ಸಲುಗೆ ಹೆಚ್ಚಾಗಿತ್ತು.
ಈ ನಡುವೆ ನಾಗವ್ವ ಹಾಗೂ ಯಲ್ಲಪ್ಪ ನಾಯಕ ನಡುವೆ ಪ್ರೇಮಾಂಕುರವಾಗಿತ್ತು ಎನ್ನಲಾಗಿದೆ. ಇದೇ ಕಾರಣಕ್ಕೆ ಕಳೆದ ಎರಡು ದಿನಗಳ ಹಿಂದೆ ಯಲ್ಲಪ್ಪ, ತನ್ನ ಸ್ನೇಹಿತನ ಪತ್ನಿಯಾಗಿದ್ದ ನಾಗವ್ವಳನ್ನು ಕರೆದುಕೊಂಡು ಊರಿನಿಂದ ಓಡಿ ಹೋಗಿದ್ದನು.
ವಿವಾಹಿತ ಮಹಿಳೆಯನ್ನು ಯುವಕ ಕರೆದೊಯ್ದಿದ್ದಾನೆ ಎಂಬ ವಿಷಯ ತಿಳಿಯುತ್ತಿದ್ದಂತೆ ಆಕ್ರೋಶಗೊಂಡ ಮಹಿಳೆಯ ಪೋಷಕರು ಹಾಗೂ ಆಕೆಯ ಪತಿಯ ಕಡೆಯವರು ಭೀಕರ ಕೃತ್ಯಕ್ಕೆ ಮುಂದಾಗಿದ್ದಾರೆ. ತಲವಾರ, ಜಂಬೆ, ಕುಡಗೋಲು ಹಾಗೂ ಬಡಿಗೆಗಳಂತಹ ಮಾರಕಾಸ್ತ್ರಗಳನ್ನು ಹಿಡಿದುಕೊಂಡು ಸುಮಾರು ಇನ್ನೂರಕ್ಕೂ ಅಧಿಕ ಜನರಿದ್ದ ಉದ್ರಿಕ್ತ ಗುಂಪು ಭರಮ್ಯಾನಟ್ಟಿ ಗ್ರಾಮದಲ್ಲಿದ್ದ ಯುವಕ ಯಲ್ಲಪ್ಪ ನಾಯಕನ ಮನೆ ಮೇಲೆ ಏಕಾಏಕಿ ಮುಗಿಬಿದ್ದಿದೆ.
ದುಷ್ಕರ್ಮಿಗಳ ಈ ರೌದ್ರಾವತಾರ ಹಾಗೂ ಹತ್ಯೆಯ ಯತ್ನದಿಂದ ಹೆದರಿದ ಯಲ್ಲಪ್ಪನ ಪೋಷಕರು ಮತ್ತು ಕುಟುಂಬಸ್ಥರು ತಕ್ಷಣವೇ ಮನೆಯಿಂದ ಓಡಿ ಹೋಗಿ ಪ್ರಾಣ ಉಳಿಸಿಕೊಂಡಿದ್ದಾರೆ.


