ಬಳ್ಳಾರಿ: ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣ ಇಡೀ ರಾಜ್ಯವನ್ನೇ ನಡುಗಿಸಿತ್ತು. ಈ ಘಟನೆಯ ಬೆನ್ನಲ್ಲೇ ಇದೀಗ ಬಳ್ಳಾರಿಯಲ್ಲೂ ಅದೇ ಮಾದರಿಯ ಮತ್ತೊಂದು ಭೀಕರ ಹತ್ಯೆ ಪ್ರಕರಣ ಬೆಳಕಿಗೆ ಬಂದಿದೆ.
ವಿವಾಹಿತ ಮಹಿಳೆಗೆ ಅಶ್ಲೀಲ ಸಂದೇಶ (ಮೆಸೇಜ್) ಕಳುಹಿಸಿ ಕಿರುಕುಳ ನೀಡುತ್ತಿದ್ದ ಯುವಕನೊಬ್ಬನನ್ನು ಮಹಿಳೆ, ಆಕೆಯ ಪತಿ ಹಾಗೂ ಸಹೋದರ ಸೇರಿ ಅತ್ಯಂತ ಕ್ರೂರವಾಗಿ ಕೊಲೆ ಮಾಡಿ, ಸಾಕ್ಷ್ಯ ನಾಶಪಡಿಸಲು ಶವವನ್ನು ಸುಟ್ಟು ಹಾಕಿರುವ ಘಟನೆ ಜಿಲ್ಲೆಯಲ್ಲಿ ಸಂಚಲನ ಮೂಡಿಸಿದೆ.
ಹತ್ಯೆಯಾದ ದುರ್ದೈವಿಯನ್ನು ಬಸವನಗೌಡ ಎಂದು ಗುರುತಿಸಲಾಗಿದೆ. ಈ ಘಟನೆಗೆ ಸಂಬಂಧಿಸಿದಂತೆ ಮೃತನ ಸಂಬಂಧಿಕಳಾದ ಶ್ವೇತಾ, ಆಕೆಯ ಪತಿ ದೊಡ್ಡ ಬಸವನಗೌಡ ಮತ್ತು ಶ್ವೇತಾಳ ಸಹೋದರ ವಿಜಯ್ ಎಂಬುವವರನ್ನು ಪೊಲೀಸರು ಬಂಧಿಸಿದ್ದಾರೆ. ಜೂನ್ 7ರಂದು ರಾತ್ರಿ ಈ ಭೀಕರ ಕೊಲೆ ನಡೆದಿದ್ದು, ಸದ್ಯ ಆರೋಪಿಗಳು ಕಂಬಿ ಎಣಿಸುತ್ತಿದ್ದಾರೆ.
ಪೊಲೀಸ್ ತನಿಖೆಯ ಪ್ರಕಾರ, ಮೃತ ಬಸವನಗೌಡನಿಗೆ ಎರಡು ವರ್ಷಗಳ ಹಿಂದೆ ಮದುವೆಯೊಂದರಲ್ಲಿ ಶ್ವೇತಾಳ ಪರಿಚಯವಾಗಿತ್ತು. ಶ್ವೇತಾ ಸಂಬಂಧದಲ್ಲಿ ಬಸವನಗೌಡನಿಗೆ ಅತ್ತಿಗೆಯಾಗಬೇಕಿತ್ತು.
ಆದರೂ ಬಸವನಗೌಡ ಆಕೆಯ ಹಿಂದೆ ಬಿದ್ದಿದ್ದ ಎನ್ನಲಾಗಿದೆ. ನಿರಂತರವಾಗಿ ಮೊಬೈಲ್ನಲ್ಲಿ ಅಶ್ಲೀಲ ಸಂದೇಶಗಳನ್ನು ಕಳುಹಿಸುತ್ತಾ ಮಾನಸಿಕವಾಗಿ ಕಿರುಕುಳ ನೀಡುತ್ತಿದ್ದ. ಶ್ವೇತಾ ಹಲವು ಬಾರಿ ಆತನಿಗೆ ಬುದ್ಧಿವಾದ ಹೇಳಿ ಇಂತಹ ನಡವಳಿಕೆಯನ್ನು ನಿಲ್ಲಿಸುವಂತೆ ಎಚ್ಚರಿಸಿದ್ದರೂ, ಬಸವನಗೌಡ ಮಾತ್ರ ತನ್ನ ವಿಕೃತ ಚೇಷ್ಟೆಯನ್ನು ಮುಂದುವರಿಸಿದ್ದ ಎನ್ನಲಾಗಿದೆ.
ಕೊಲೆಗೆ ಹೆಣೆದರು ಜಂಟಿ ಸ್ಕೆಚ್:
ಬಸವನಗೌಡನ ಅತಿಯಾದ ಕಿರುಕುಳದಿಂದ ಬೇಸತ್ತ ಶ್ವೇತಾ, ಕೊನೆಗೆ ಈ ವಿಷಯವನ್ನು ತನ್ನ ಪತಿ ದೊಡ್ಡ ಬಸವನಗೌಡ ಹಾಗೂ ಸಹೋದರ ವಿಜಯ್ ಬಳಿ ಹಂಚಿಕೊಂಡಿದ್ದಾಳೆ.
ವಿಷಯ ತಿಳಿಯುತ್ತಿದ್ದಂತೆ ಆಕ್ರೋಶಗೊಂಡ ಮೂವರೂ ಸೇರಿ ಆತನಿಗೆ ಪಾಠ ಕಲಿಸಲು ನಿರ್ಧರಿಸಿ, ಕೊಲೆಗೆ ಸಂಚು ರೂಪಿಸಿದ್ದಾರೆ. ಜೂನ್ 7ರ ರಾತ್ರಿ ಯೋಜನೆಯಂತೆಯೇ ಶ್ವೇತಾಳ ಕೈಯಿಂದ ಬಸವನಗೌಡನಿಗೆ ಕರೆ ಮಾಡಿಸಿ, ನಿರ್ದಿಷ್ಟ ಸ್ಥಳವೊಂದಕ್ಕೆ ಬರುವಂತೆ ಆಕೆ ತಿಳಿಸಿದ್ದಾಳೆ. ಅತ್ತಿಗೆಯ ಕರೆಯನ್ನೇ ನಂಬಿ ಬಸವನಗೌಡ ಸ್ಥಳಕ್ಕೆ ಬಂದಿದ್ದಾನೆ.
ಹಗ್ಗದಿಂದ ಬಿಗಿದು ಹತ್ಯೆ, ಶವಕ್ಕೆ ಬೆಂಕಿ:
ಶ್ವೇತಾ ಹೇಳಿದ ಜಾಗಕ್ಕೆ ಬಸವನಗೌಡ ಬರುತ್ತಿದ್ದಂತೆ ಹೊಂಚು ಹಾಕಿ ಕುಳಿತಿದ್ದ ಪತಿ ಮತ್ತು ಆಕೆಯ ಸಹೋದರ ಆತನ ಮೇಲೆ ಮುಗಿಬಿದ್ದಿದ್ದಾರೆ. ತಕ್ಷಣವೇ ಆತನ ಕುತ್ತಿಗೆಗೆ ಹಗ್ಗ ಬಿಗಿದು ಉಸಿರುಗಟ್ಟಿಸಿ ಭೀಕರವಾಗಿ ಕೊಲೆ ಮಾಡಿದ್ದಾರೆ.
ಅಷ್ಟಕ್ಕೇ ನಿಲ್ಲದ ಆರೋಪಿಗಳು, ಕೊಲೆಯನ್ನು ಮುಚ್ಚಿಹಾಕಲು ಶವವನ್ನು ಎಲ್ಎಲ್ಸಿ (LLC) ಕಾಲುವೆಯ ಹತ್ತಿರದ ನಿರ್ಜನ ಪ್ರದೇಶಕ್ಕೆ ಸಾಗಿಸಿದ್ದಾರೆ. ಅಲ್ಲಿ ಶವಕ್ಕೆ ಬೆಂಕಿ ಹಚ್ಚಿ ಸಾಕ್ಷ್ಯ ನಾಶಪಡಿಸಲು ಯತ್ನಿಸಿ ಸ್ಥಳದಿಂದ ಪರಾರಿಯಾಗಿದ್ದಾರೆ.


