ಬೆಂಗಳೂರು: ರಾಜ್ಯದ ಸರ್ಕಾರಿ ಪದವಿ ಪೂರ್ವ ಕಾಲೇಜುಗಳ (Pu College ) ಉಪನ್ಯಾಸಕರಿಗೆ ಕರ್ನಾಟಕ ಸರ್ಕಾರ ಬಿಗ್ ಶಾಕ್ (Shocking) ನೀಡಿದೆ.
ಇನ್ಮುಂದೆ ಪಿಯು ಉಪನ್ಯಾಸಕರು ಕೇವಲ 11 ಮತ್ತು 12ನೇ ತರಗತಿ (ಪಿಯುಸಿ) ಮಾತ್ರವಲ್ಲದೆ, ಪ್ರೌಢಶಾಲಾ ಹಂತದ 9 ಮತ್ತು 10ನೇ ತರಗತಿ ವಿದ್ಯಾರ್ಥಿಗಳಿಗೂ ಕಡ್ಡಾಯವಾಗಿ ಬೋಧನೆ ಮಾಡಬೇಕೆಂದು ಸರ್ಕಾರ ವಿಶೇಷ ರಾಜ್ಯಪತ್ರ ಪ್ರಕಟಿಸಿದೆ.
ರಾಜ್ಯದ ಸರ್ಕಾರಿ ಪ್ರೌಢಶಾಲೆಗಳಲ್ಲಿ ದೀರ್ಘಕಾಲದಿಂದ ಕಾಡುತ್ತಿರುವ ಶಿಕ್ಷಕರ ಕೊರತೆಯನ್ನು ನೀಗಿಸಲು ಹಾಗೂ ಕರ್ನಾಟಕ ಪಬ್ಲಿಕ್ ಶಾಲೆಗಳ (KPS) ನಿರ್ವಹಣೆಯನ್ನು ಸುಗಮಗೊಳಿಸಲು ಶಿಕ್ಷಣ ಇಲಾಖೆ ಈ ಹಠಾತ್ ತಿದ್ದುಪಡಿ ತಂದಿದೆ.
ಸರ್ಕಾರದ ಈ ಹೊಸ ನಿರ್ಧಾರವು ಈಗ ಶೈಕ್ಷಣಿಕ ವಲಯದಲ್ಲಿ ದೊಡ್ಡ ಸಂಚಲನ ಮೂಡಿಸಿದ್ದು, ಉಪನ್ಯಾಸಕರು ಮತ್ತು ಸರ್ಕಾರದ ನಡುವೆ ನೇರ ಸಂಘರ್ಷಕ್ಕೆ ದಾರಿ ಮಾಡಿಕೊಟ್ಟಿದೆ.ಈ ಕರಡು ನಿಯಮದ ವಿರುದ್ಧ ಕರ್ನಾಟಕ ರಾಜ್ಯ ಪದವಿ ಪೂರ್ವ ಕಾಲೇಜುಗಳ ಉಪನ್ಯಾಸಕರ ಸಂಘ ತೀವ್ರ ಆಕ್ರೋಶ ವ್ಯಕ್ತಪಡಿಸಿದೆ.
ಸ್ನಾತಕೋತ್ತರ ಪದವಿ ಮುಗಿಸಿ 'ಗೆಜೆಟೆಡ್-ಬಿ' (Group-B) ವೃಂದದಲ್ಲಿ ಸೇವೆ ಸಲ್ಲಿಸುತ್ತಿರುವ ಉಪನ್ಯಾಸಕರನ್ನು, 'ಗ್ರೂಪ್-ಸಿ' ವೃಂದಕ್ಕೆ ಒಳಪಡುವ ಪ್ರೌಢಶಾಲಾ ತರಗತಿಗಳಿಗೆ ನಿಯೋಜಿಸುವುದು ಸೇವಾ ನಿಯಮಗಳ ಸ್ಪಷ್ಟ ಉಲ್ಲಂಘನೆ ಎಂದು ಸಂಘಟನೆಗಳು ವಾದಿಸುತ್ತಿವೆ.
ಈಗಾಗಲೇ ವಾರದ ಕಾರ್ಯಭಾರವನ್ನು 20 ಗಂಟೆಗಳಿಗೆ ಹೆಚ್ಚಿಸಿರುವುದರಿಂದ ತೀವ್ರ ಒತ್ತಡದಲ್ಲಿದ್ದು, ಈಗ ಹೈಸ್ಕೂಲ್ ಜವಾಬ್ದಾರಿಯನ್ನೂ ಹೊರಿಸುತ್ತಿರುವುದು ಅವೈಜ್ಞಾನಿಕ ಎಂದು ಉಪನ್ಯಾಸಕರು ದೂರಿದ್ದಾರೆ.
ಸದ್ಯ ಸರ್ಕಾರ ಈ ಕರಡು ತಿದ್ದುಪಡಿಗೆ ಆಕ್ಷೇಪಣೆ ಸಲ್ಲಿಸಲು 7 ದಿನಗಳ ಕಾಲಾವಕಾಶ ನೀಡಿದ್ದು, ಉಪನ್ಯಾಸಕರು ರಾಜ್ಯವ್ಯಾಪಿ ಪ್ರತಿಭಟನೆಗೆ ಸಜ್ಜಾಗುತ್ತಿದ್ದಾರೆ.


