ತುರುವೇಕೆರೆ : ಪಂಚ ರಾಜ್ಯಗಳ ಚುನಾವಣೆ ಪೈಕಿ ಮೂರು ರಾಜ್ಯಗಳಲ್ಲಿ ಬಿಜೆಪಿ ಗೆಲುವು ಸಾಧಿಸಿದ್ದು, ಇದು ದೇಶದ ಜನತೆ ಅಭಿವೃದ್ದಿ ಪರವಾಗಿದ್ದಾರೆ ಎಂಬುದಕ್ಕೆ ಸಾಕ್ಷಿಯಾಗಿದೆ ಎಂದು ಬಿಜೆಪಿ ಮುಖಂಡ, ತಾಲ್ಲೂಕು ಪಂಚಾಯ್ತಿ ಮಾಜಿ ಉಪಾಧ್ಯಕ್ಷ ಹರಳಕೆರೆ ಮಹಲಿಂಗಯ್ಯ ತಿಳಿಸಿದರು.
ಮಾಧ್ಯಮದೊಂದಿಗೆ ಮಾತನಾಡಿದ ಅವರು, ಕಳೆದ 12 ವರ್ಷದಿಂದ ಕೇಂದ್ರದಲ್ಲಿ ನರೇಂದ್ರ ಮೋದಿ ಸರ್ಕಾರ ದೇಶದುದ್ದಗಲಕ್ಕೂ ಮಾಡಿರುವ ಅಭಿವೃದ್ದಿ, ನೀಡಿರುವ ಭ್ರಷ್ಟಾಚಾರ ರಹಿತ ಜನಪರ ಆಡಳಿತ, ದೇಶ ರಕ್ಷಣೆ ವಿಚಾರದಲ್ಲಿ ಕೈಗೊಂಡ ನಿಲುವುಗಳು ದೇಶದ ಜನರನ್ನು ಬಿಜೆಪಿಗೆ ಮತ ಚಲಾಯಿಸುವಂತೆ ಮಾಡಿದೆ. ಪಶ್ಚಿಮ ಬಂಗಾಳ, ಅಸ್ಸಾಂ ಹಾಗೂ ಪುದುಚೇರಿ ರಾಜ್ಯದ ಜನತೆ ಅಭಿವೃದ್ದಿ ಬಯಸಿ ಬಿಜೆಪಿಯನ್ನು ಆಯ್ಕೆ ಮಾಡಿದ್ದಾರೆ. ಅಸ್ಸಾಂನಲ್ಲಿ ಸತತ ಮೂರನೇ ಬಾರಿಗೆ ಬಿಜೆಪಿ ಗೆಲುವು ಸಾಧಿಸಲು ಕಳೆದ 10 ವರ್ಷದಲ್ಲಿ ಬಿಜೆಪಿ ಮಾಡಿದ ಅಭಿವೃದ್ದಿಯೆ ಕಾರಣವಾಗಿದೆ ಎಂದರು.
ಕಳೆದ 15 ವರ್ಷ ಪಶ್ಚಿಮ ಬಂಗಾಳದಲ್ಲಿ ಅಧಿಕಾರದಲ್ಲಿದ್ದ ಮಮತಾ ಬ್ಯಾನರ್ಜಿ ಸರ್ಕಾರದ ದುರಾಡಳಿತಕ್ಕೆ ಬಂಗಾಳದ ಜನತೆ ಮುಕ್ತಿ ಹಾಡಿದ್ದಾರೆ. ನರೇಂದ್ರ ಮೋದಿ ನೇತೃತ್ವದ ಬಿಜೆಪಿಗೆ ಜೈ ಅಂದಿದ್ದಾರೆ. ಅಭಿವೃದ್ದಿ ಮಾಡದೆ ಅಧಿಕಾರ ಅನುಭವಿಸುತ್ತಿದ್ದವರಿಗೆ ಜನತೆ ತಕ್ಕ ಪಾಠ ಕಲಿಸಿದ್ದಾರೆ. ಮುಂಬರುವ ದಿನಗಳಲ್ಲಿ ಕರ್ನಾಟಕದಲ್ಲಿಯೂ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬರುವ ವಿಶ್ವಾಸವಿದೆ. ಆದರೆ ರಾಜ್ಯ ನಾಯಕರುಗಳು ಭಿನ್ನಾಭಿಪ್ರಾಯ ಮರೆತು ಒಮ್ಮತ ಹಾಗೂ ಸಂಘಟನಾತ್ಮಕವಾಗಿ ನರೇಂದ್ರ ಮೋದಿಯವರ ನೇತೃತ್ವದಲ್ಲಿ, ಯಡಿಯೂರಪ್ಪನವರ ಮಾರ್ಗದರ್ಶನದಲ್ಲಿ ಪಕ್ಷವನ್ನು ಮುನ್ನಡೆಸಬೇಕಿದೆ ಎಂದರು.
ವರದಿ : ಗಿರೀಶ್ ಕೆ ಭಟ್


