ಬಾಗಲಕೋಟೆ : ಪಟ್ಟಣ ಅಭಿವೃದ್ಧಿ ಪ್ರಾಧಿಕಾರದ ನೌಕರನಿಗೆ ಚಪ್ಪಲಿ ಏಟು ನೀಡಿದ ಪ್ರಕರಣ ಇದೀಗ ರಾಜ್ಯ ಲೋಕಾಯುಕ್ತದ ಗಮನಕ್ಕೆ ಬಂದಿದ್ದು, ಚಪ್ಪಲಿ ಏಟು ನೀಡಿದ ರೈತ ಬಸಪ್ಪ ದೊಡ್ಡಮನಿ ಪರವಾಗಿ ಮಾಧ್ಯಮದ ವರದಿಯಾಧರಿಸಿ ಬೆಂಗಳೂರು ಲೋಕಾಯುಕ್ತರು ಸುಮೊಟೊ ಕೇಸ್ ದಾಖಲಿಸಿಕೊಂಡಿದ್ದಾರೆ.
20 ವರ್ಷದಿಂದ ಸ್ವಾಧೀನಕ್ಕೊಳಪಟ್ಟ ಭೂಮಿಗೆ ಪರಿಹಾರ ನೀಡದ ಹಿನ್ನೆಲೆಯಲ್ಲಿ ಉಪಲೋಕಾಯುಕ್ತ 2ರ ನ್ಯಾಯಮೂರ್ತಿ ಬಿ.ವೀರಪ್ಪ ಅವರ ಆದೇಶದ ಮೇರೆಗೆ ಸುಮೊಟೊ ಕೇಸ್ ದಾಖಲಿಸಿಕೊಳ್ಳಲಾಗಿದೆ. ಜೊತೆಗೆ, ಸಂಬಂಧಿತ ಅಧಿಕಾರಿಗಳಿಗೆ ಜುಲೈ 27ರಂದು ವಿಚಾರಣೆಗೆ ಹಾಜರಾಗಲು ನಿರ್ದೇಶನ ನೀಡಲಾಗಿದೆ.
ರೈತನ ಪರ ಸುಮೊಟೊ ಕೇಸ್ ದಾಖಲಿಸಿದ ಲೋಕಾಯುಕ್ತ
ಬಸಪ್ಪ ದೊಡ್ಡಮನಿ, ಬಾಗಲಕೋಟೆ ಪಟ್ಟಣ ಅಭಿವೃದ್ಧಿ ಪ್ರಾಧಿಕಾರದ ಕೇಸ್ ವರ್ಕರ್ ನೀಲಕಂಠ ಅಂಕದ ಅವರಿಗೆ ಚಪ್ಪಲಿ ಏಟು ನೀಡಿದ್ದ. ಈ ಬಗ್ಗೆ ಬಾಗಲಕೋಟೆ ನವನಗರ ಠಾಣೆಯಲ್ಲಿ ನೀಲಕಂಠ ಅವರು ದೂರು ದಾಖಲಿಸಿದ್ದರು. ನಂತರ, ಬಾಗಲಕೋಟೆ ಪಟ್ಟಣ ಅಭಿವೃದ್ಧಿ ಪ್ರಾಧಿಕಾರದಿಂದಲೂ ದೂರು ದಾಖಲಾಗಿತ್ತು.
ಬಳಿಕ ರೈತ ಬಸಪ್ಪನನ್ನು ಬಂಧಿಸಿ ನವನಗರ ಪೊಲೀಸರು ಬಿಡುಗಡೆ ಮಾಡಿದ್ದರು. ಗುರುವಾರ ಬಾಗಲಕೋಟೆ ಪಟ್ಟಣ ಅಭಿವೃದ್ಧಿ ಪ್ರಾಧಿಕಾರದ ಭ್ರಷ್ಟ ಅಧಿಕಾರಿಗಳ ವಿರುದ್ಧ, ದಲಿತ ಸಂಘರ್ಷ ಸಮಿತಿ ಭೀಮವಾದ ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ದರು.
ಬಾಗಲಕೋಟೆ ಲೋಕಾಯುಕ್ತ ಕಚೇರಿಗೆ ಮುತ್ತಿಗೆ ಯತ್ನ ನಡೆಸಿದ್ದರು. ಇದರ ಬೆನ್ನಲ್ಲೇ ರೈತನ ಪರ ಸುಮೊಟೊ ಕೇಸ್ ದಾಖಲಾಗಿದೆ.


