ಚೇಳೂರು : ಪಟ್ಟಣದಲ್ಲಿರುವ ಪ್ರಾಥಮಿಕ ಆರೋಗ್ಯ ಕೇಂದ್ರವು ಮೂಲಸೌಕರ್ಯಗಳ ಕೊರತೆ ಮತ್ತು ಅಧಿಕಾರಿಗಳ ದಿವ್ಯ ನಿರ್ಲಕ್ಷ್ಯದಿಂದಾಗಿ ಅಕ್ಷರಶಃ ಅವ್ಯವಸ್ಥೆಯ ಆಗರವಾಗಿದೆ. ರೋಗಿಗಳಿಗೆ ಗುಣಮಟ್ಟದ ಸೇವೆ ನೀಡಬೇಕಾದ ಆಸ್ಪತ್ರೆಯ ಆವರಣವೀಗ ಅನಾಥ ಪ್ರಜ್ಞೆ ಅನುಭವಿಸುತ್ತಿದೆ.
ಕಿತ್ತು ಹೋದ ಗೇಟು, ಅಶುಚಿಯ ಆವರಣ: ಆಸ್ಪತ್ರೆಯ ಮುಖ್ಯ ಪ್ರವೇಶ ದ್ವಾರದ ಗೇಟು ಕಿತ್ತು ಹೋಗಿ ಸುಮಾರು ಒಂದು ವರ್ಷ ಕಳೆದಿದ್ದರೂ, ಅದನ್ನು ಸರಿಪಡಿಸುವ ಮನಸ್ಸನ್ನು ವೈದ್ಯಾಧಿಕಾರಿಗಳು ಮಾಡುತ್ತಿಲ್ಲ. ಇನ್ನು ಆಸ್ಪತ್ರೆಯ ಆವರಣದಲ್ಲಿ ಅನಗತ್ಯ ಗಿಡಗಂಟಿಗಳು ಬೆಳೆದು ನಿಂತಿದ್ದು, ಅಶುಚಿಯ ವಾತಾವರಣ ನಿರ್ಮಾಣವಾಗಿದೆ. ಸ್ವಚ್ಛತೆಗೆ ಆದ್ಯತೆ ನೀಡಬೇಕಾದ ಆಸ್ಪತ್ರೆಯೇ ಗಲೀಜಿನಿಂದ ಕೂಡಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.
ಖಾಸಗಿ ವಾಹನಗಳ ನಿಲ್ದಾಣವಾದ ಆಸ್ಪತ್ರೆ ಆವರಣ: ಆಸ್ಪತ್ರೆಗೆ ಬರುವ ರೋಗಿಗಳಿಗೆ ಪಾರ್ಕಿಂಗ್ ವ್ಯವಸ್ಥೆ ಇಲ್ಲದಂತಾಗಿದೆ. ಬದಲಿಗೆ, ಸಾರ್ವಜನಿಕ ಕೆಲಸಗಳಿಗೆ ಬರುವವರು ಮತ್ತು ಬಾಡಿಗೆ ವಾಹನ ಚಾಲಕರು ನೆರಳಿನ ಆಸೆಗಾಗಿ ತಮ್ಮ ಕಾರು ಹಾಗೂ ದ್ವಿಚಕ್ರ ವಾಹನಗಳನ್ನು ಇಡೀ ದಿನ ಇಲ್ಲೇ ನಿಲುಗಡೆ ಮಾಡುತ್ತಿದ್ದಾರೆ. ಇದು ಆಸ್ಪತ್ರೆಯ ಆವರಣವೋ ಅಥವಾ ಖಾಸಗಿ ಟ್ಯಾಕ್ಸಿ ನಿಲ್ದಾಣವೋ ಎಂಬ ಸಂಶಯ ಸಾರ್ವಜನಿಕರಲ್ಲಿ ಮೂಡುತ್ತಿದೆ. ಈ ಕುರಿತು ಕ್ರಮ ಕೈಗೊಳ್ಳಬೇಕಾದ ವೈದ್ಯಾಧಿಕಾರಿಗಳು ಮೌನಕ್ಕೆ ಶರಣಾಗಿದ್ದಾರೆ.
ಸರ್ಕಾರವು ವೈದ್ಯರು ಮತ್ತು ಸಿಬ್ಬಂದಿಗಾಗಿ ಆಸ್ಪತ್ರೆಯ ಆವರಣದಲ್ಲೇ ವಸತಿ ಗೃಹಗಳನ್ನು ನಿರ್ಮಿಸಿಕೊಟ್ಟಿದ್ದರೂ ಸಹ, ರಾತ್ರಿ ವೇಳೆ ಇಲ್ಲಿ ವೈದ್ಯರು ಇರುವುದಿಲ್ಲ ಎಂಬುದು ಸಾರ್ವಜನಿಕರ ಪ್ರಮುಖ ಆರೋಪವಾಗಿದೆ. ರಾತ್ರಿ ವೇಳೆ ತುರ್ತು ಪರಿಸ್ಥಿತಿ ಎದುರಾದರೆ ರೋಗಿಗಳು 45 ರಿಂದ 50 ಕಿಲೋಮೀಟರ್ ದೂರದಲ್ಲಿರುವ ಚಿಂತಾಮಣಿ ಅಥವಾ ಬಾಗೇಪಲ್ಲಿ ಆಸ್ಪತ್ರೆಗೆ ತೆರಳಬೇಕಾದ ಅನಿವಾರ್ಯತೆ ಇದೆ.ಆಸ್ಪತ್ರೆಯಲ್ಲಿ ಆಂಬುಲೆನ್ಸ್ ವ್ಯವಸ್ಥೆಯೂ ಇಲ್ಲದಿರುವುದು ಗಾಯದ ಮೇಲೆ ಬರೆ ಎಳೆದಂತಾಗಿದೆ. ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿಗಳು ಮೊದಲು ಆಸ್ಪತ್ರೆಯ ಆವರಣವನ್ನು ಸ್ವಚ್ಛಗೊಳಿಸಿ, ಗೇಟು ದುರಸ್ತಿಪಡಿಸಬೇಕು.
ಖಾಸಗಿ ವಾಹನಗಳ ಪಾರ್ಕಿಂಗ್ ತಡೆಗಟ್ಟಬೇಕು ಹಾಗೂ ರಾತ್ರಿ ವೇಳೆಯಲ್ಲಿ ಕಡ್ಡಾಯವಾಗಿ ವೈದ್ಯರು ಲಭ್ಯವಿರುವಂತೆ ಜಿಲ್ಲಾ ಆರೋಗ್ಯಾಧಿಕಾರಿಗಳು ಕ್ರಮ ಕೈಗೊಳ್ಳಬೇಕು ಎಂದು ಚೇಳೂರು ತಾಲೂಕಿನ ಜನತೆ ಆಗ್ರಹಿಸಿದ್ದಾರೆ.
ಆಸ್ಪತ್ರೆಯ ಆವರಣವೆಲ್ಲಾ ಖಾಸಗಿ ವಾಹನಗಳ ನಿಲ್ದಾಣವಾಗಿ ಬದಲಾಗಿದೆ. ರಾತ್ರಿ ವೇಳೆ ತುರ್ತು ಚಿಕಿತ್ಸೆಗೆ ಬಂದರೆ ವೈದ್ಯರು ಇರುವುದಿಲ್ಲ. ಅಂಬುಲೆನ್ಸ್ ವ್ಯವಸ್ಥೆಯೂ ಇಲ್ಲದ ಕಾರಣ, ಬಡ ರೋಗಿಗಳು ಅನಿವಾರ್ಯವಾಗಿ ಖಾಸಗಿ ವಾಹನಗಳನ್ನು ಹೆಚ್ಚಿನ ಬಾಡಿಗೆಗೆ ಪಡೆದು ದೂರದ ಪಟ್ಟಣಗಳಿಗೆ ಹೋಗುವಂತಾಗಿದೆ. ಅಧಿಕಾರಿಗಳು ಈ ಕೂಡಲೇ ಎಚ್ಚೆತ್ತು ಆಸ್ಪತ್ರೆಯ ವ್ಯವಸ್ಥೆಯನ್ನು ಸರಿಪಡಿಸಬೇಕು.
— ಜಿ ನರಸಿಂಹಪ್ಪ,
ಈ ತಿಂಗಳ 20ರಿಂದ ವೈದ್ಯರ ಕೌನ್ಸೆಲಿಂಗ್ ನಡೆಯಲಿದ್ದು, ಚೇಳೂರಿಗೆ ಕಾಯಂ ವೈದ್ಯರನ್ನು ನೇಮಿಸಲಾಗುವುದು. ಅಲ್ಲದೆ, 5.75 ಕೋಟಿ ರೂ. ವೆಚ್ಚದಲ್ಲಿ ಈ ಆಸ್ಪತ್ರೆಯನ್ನು 'ಸಮುದಾಯ ಆರೋಗ್ಯ ಕೇಂದ್ರ'ವಾಗಿ ಮೇಲ್ದರ್ಜೆಗೇರಿಸಲು ಅನುಮೋದನೆ ಸಿಕ್ಕಿದೆ. ಶೀಘ್ರದಲ್ಲೇ ಹಳೆ ಕಟ್ಟಡ ತೆರವುಗೊಳಿಸಿ ಸುಸಜ್ಜಿತ ಹೊಸ ಕಟ್ಟಡ ನಿರ್ಮಿಸಲಾಗುವುದು. ಅಲ್ಲಿ ಐವರು ವೈದ್ಯರು ಲಭ್ಯವಿರಲಿದ್ದು, 24 ಗಂಟೆಯೂ ಗುಣಮಟ್ಟದ ಸೇವೆ ಸಿಗಲಿದೆ.
—ಡಾ. ಮಹೇಶ್ ಕುಮಾರ್, ಜಿಲ್ಲಾ ಆರೋಗ್ಯಾಧಿಕಾರಿಗಳು, ಚಿಕ್ಕಬಳ್ಳಾಪುರ.
ವರದಿ :ಯಾರಬ್. ಎಂ

