ರಾಯಚೂರು: ಜಿಲ್ಲೆಯಲ್ಲಿ ನಕಲಿ ನೋಟುಗಳ ಹಾವಳಿಯ ಬಗ್ಗೆ ನಿರಂತರವಾಗಿ ಕೇಳಿಬರುತ್ತಿದ್ದ ಸುದ್ದಿಗಳ ನಡುವೆ, ಸಾರ್ವಜನಿಕರಲ್ಲಿ ಆತಂಕ ಹೆಚ್ಚಾಗಿದ್ದ ಸಂದರ್ಭದಲ್ಲಿ ಸಿರವಾರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದ ಘಟನೆಯೊಂದು ಈ ಭಯಕ್ಕೆ ಮತ್ತಷ್ಟು ಗಂಭೀರತೆ ನೀಡಿದೆ.
ದಿನಾಂಕ 29 ಏಪ್ರಿಲ್ 2026 ರಂದು ರಾತ್ರಿ ಸುಮಾರು 10:15 ಗಂಟೆಗೆ, ಸಿರವಾರ ತಾಲ್ಲೂಕಿನ ಕಲ್ಲೂರು ಗ್ರಾಮದ ವ್ಯಾಪ್ತಿಯಲ್ಲಿರುವ ಪೆಟ್ರೋಲ್ ಬಂಕ್ ನಲ್ಲಿ ಇಬ್ಬರು ವ್ಯಕ್ತಿಗಳು ತಮ್ಮ ಮೋಟಾರ್ ಸೈಕಲ್ಗೆ ಪೆಟ್ರೋಲ್ ಹಾಕಿಸಿಕೊಂಡು ₹120 ಪಾವತಿಸಲು ₹100 ಮುಖಬೆಲೆಯ ನಕಲಿ ನೋಟು ನೀಡಿದ ಘಟನೆ ನಡೆದಿದೆ. ಪೆಟ್ರೋಲ್ ಹಾಕುತ್ತಿದ್ದ ಸಿಬ್ಬಂದಿಗೆ ನೋಟಿನ ಬಗ್ಗೆ ಅನುಮಾನ ಬಂದ ಹಿನ್ನೆಲೆ ತಕ್ಷಣವೇ ತನ್ನ ಮಾಲೀಕರು ಹಾಗೂ ಮ್ಯಾನೇಜರ್ಗೆ ಮಾಹಿತಿ ನೀಡಿದ್ದಾನೆ.
ಸ್ಥಳಕ್ಕೆ ಬಂದ ಮಾಲೀಕರು ಮತ್ತು ಮ್ಯಾನೇಜರ್ ಆರೋಪಿಗಳನ್ನು ವಿಚಾರಿಸಿದಾಗ, ಅವರ ಬಳಿ ಇದ್ದ ಒಂದು ಬ್ಯಾಗ್ ತುಂಬಾ ನಕಲಿ ನೋಟುಗಳು ಕಂಡುಬಂದಿದ್ದು, ಇದರಿಂದ ಅವರು ಬೆಚ್ಚಿಬಿದ್ದಿದ್ದಾರೆ. ತಕ್ಷಣವೇ 112 ತುರ್ತು ಸೇವೆಗೆ ಕರೆ ಮಾಡಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಘಟನೆ ಸ್ಥಳಕ್ಕೆ ಧಾವಿಸಿದ ಪೊಲೀಸರು ಹಾಗೂ ಸಿರವಾರ ಪೊಲೀಸ್ ಠಾಣೆಯ ಪಿ.ಎಸ್.ಐ. ಶ್ರೀ ಚಂದ್ರಶೇಖರ್ ಹಿರೇಮಠ ಅವರು ಆರೋಪಿಗಳನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ, ಆರೋಪಿಗಳು ನಕಲಿ ನೋಟುಗಳ ವ್ಯವಹಾರದಲ್ಲಿ ತೊಡಗಿರುವುದನ್ನು ಒಪ್ಪಿಕೊಂಡಿದ್ದಾರೆ. ಈ ಹಿನ್ನೆಲೆಯಲ್ಲಿ ಪ್ರಕರಣ ದಾಖಲಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
ಬಂಧಿತ ಆರೋಪಿಗಳನ್ನು1. ಮುರ್ತುಜಾ ಪಾಶಾ ತಂದೆ ದಸ್ತಗೀರ್, ನಿವಾಸಿ: ಬಂದೆನವಾಜ್ ಕಾಲೋನಿ, ರಾಯಚೂರು2. ಯೂಸುಫ್ ಮೊಹಮ್ಮದ್ ತಂದೆ ಆಲಂ ಪಾಶಾ, ನಿವಾಸಿ: ಎಲ್.ಬಿ.ಎಸ್. ನಗರ, ಶ್ರೀನಿವಾಸ್ ಕಾಲೋನಿ, ರಾಯಚೂರು
ಎಂದು ಗುರುತಿಸಲಾಗಿದೆ.
ಇದರಲ್ಲೇ ಮತ್ತೊಂದು ಆತಂಕಕಾರಿ ಸಂಗತಿ ಏನೆಂದರೆ, ಮೊದಲ ಆರೋಪಿ ಮುರ್ತುಜಾ ಪಾಶಾ, ಈಗಾಗಲೇ ದರ್ವೇಶ್ ಕಂಪನಿಯ ಅಂಗ ಸಂಸ್ಥೆಯಾದ "DOULAT" ಕಂಪನಿಯ ಮೂಲಕ ಸಾರ್ವಜನಿಕರಿಂದ ಕೋಟ್ಯಂತರ ರೂಪಾಯಿಗಳನ್ನು ಹೂಡಿಕೆ ಮಾಡಿಸಿಕೊಂಡು ಪರಾರಿಯಾಗಿದ್ದ ವ್ಯಕ್ತಿ ಎಂಬ ಮಾಹಿತಿ ಬೆಳಕಿಗೆ ಬಂದಿದೆ. ಇಂತಹ ವ್ಯಕ್ತಿ ಈಗ ನಕಲಿ ನೋಟು ಪ್ರಕರಣದಲ್ಲೂ ಸಿಕ್ಕಿಬಿದ್ದಿರುವುದು ಜನರಲ್ಲಿ ಇನ್ನಷ್ಟು ಅನುಮಾನ ಮತ್ತು ಆತಂಕಕ್ಕೆ ಕಾರಣವಾಗಿದೆ.
ಈ ಘಟನೆ ನಕಲಿ ನೋಟುಗಳ ಜಾಲವು ಕೇವಲ ಸಣ್ಣ ಮಟ್ಟದಲ್ಲಿಲ್ಲ, ಅದರ ಹಿಂದೆ ದೊಡ್ಡ ಸಂಘಟಿತ ಜಾಲವಿರುವ ಸಾಧ್ಯತೆಯನ್ನು ಸೂಚಿಸುತ್ತಿದೆ. ಪೊಲೀಸರು ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ, ಈ ಜಾಲದ ಹಿಂದೆ ಇನ್ನಾರು ಇದ್ದಾರೆ ಎಂಬುದರ ಬಗ್ಗೆ ಸಮಗ್ರ ತನಿಖೆ ನಡೆಸಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.
ಸಾರ್ವಜನಿಕರಿಗೆ ಮನವಿ:
ಯಾವುದೇ ಹಣದ ವ್ಯವಹಾರ ಮಾಡುವಾಗ ನೋಟುಗಳನ್ನು ಚೆನ್ನಾಗಿ ಪರಿಶೀಲಿಸಿ. ಅನುಮಾನಾಸ್ಪದ ನೋಟುಗಳು ಕಂಡುಬಂದಲ್ಲಿ ತಕ್ಷಣವೇ ಸಮೀಪದ ಪೊಲೀಸ್ ಠಾಣೆಗೆ ಅಥವಾ 112 ತುರ್ತು ಸಂಖ್ಯೆಗೆ ಮಾಹಿತಿ ನೀಡಿ. ಪೆಟ್ರೋಲ್ ಬಂಕ್ ಸಿಬ್ಬಂದಿಯ ಜಾಗೃತಿಯಿಂದ ದೊಡ್ಡ ಮೋಸವೊಂದು ಬಹಿರಂಗವಾಗಿರುವುದು ಎಲ್ಲರಿಗೂ ಎಚ್ಚರಿಕೆಯ ಸಂದೇಶವಾಗಿದೆ.
ವರದಿ: ಗಾರಲದಿನ್ನಿ ವೀರನಗೌಡ


