ಧಾರವಾಡ: ಸಾಂಸ್ಕೃತಿಕ ನಗರಿ ಧಾರವಾಡದ (Dharwad) ಜನ್ನತ್ ನಗರದಲ್ಲಿ ತಡರಾತ್ರಿ ಭೀಕರ ದುರಂತವೊಂದು ಸಂಭವಿಸಿದ್ದು, ಗ್ಯಾಸ್ ಸಿಲಿಂಡರ್ (Cylinder blast) ಸ್ಫೋಟಗೊಂಡು ಇಡೀ ಗಲ್ಲಿಯೇ ಬೆಚ್ಚಿಬಿದ್ದಿದೆ.
ಮನೆಯೊಂದರಲ್ಲಿ ಗ್ಯಾಸ್ ಸೋರಿಕೆಯಾದ (Gas Leak) ಪರಿಣಾಮ ಈ ದುರಂತ ಸಂಭವಿಸಿದ್ದು, ಸ್ಫೋಟದ ತೀವ್ರತೆಗೆ ಮನೆಯಲ್ಲಿದ್ದ ಪೀಠೋಪಕರಣಗಳು ಹಾಗೂ ಪಾತ್ರೆ-ಪಗಡಗಳು ಛಿದ್ರಗೊಂಡು ರಸ್ತೆಗೆ ಬಿದ್ದಿವೆ.
ಸಿಲಿಂಡರ್ ಸ್ಫೋಟಗೊಂಡ ರಭಸ ಮತ್ತು ಅದರ ತೀವ್ರತೆ ಸಮೀಪದ ಮನೆಯ ಸಿಸಿಟಿವಿ (CCTV) ಕ್ಯಾಮರಾದಲ್ಲಿ ಸಲ್ಲಿಕೆಯಾಗಿದೆ.
ಬೆಂಕಿಯ ಜ್ವಾಲೆ ಹಾಗೂ ಶಬ್ದದ ತೀವ್ರತೆಗೆ ಜನ್ನತ್ ನಗರದ ನಿವಾಸಿಗಳು ಭಯಭೀತರಾಗಿ ರಸ್ತೆಗೆ ಓಡಿ ಬಂದಿದ್ದಾರೆ. ಗ್ಯಾಸ್ ಲೀಕ್ ಆಗಿದ್ದೇ ಈ ಭೀಕರ ಅವಘಡಕ್ಕೆ ಮೂಲ ಕಾರಣ ಎಂದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ.
ಘಟನೆ ನಡೆದ ವೇಳೆ ರಾಜಾಸಾಬ್ ನೀರಲಕಟ್ಟಿ ಎಂಬ ಯುವಕ ಮನೆಯಲ್ಲಿ ಗಾಢ ನಿದ್ದೆಯಲ್ಲಿದ್ದ. ಏಕಾಏಕಿ ಸಂಭವಿಸಿದ ಸ್ಫೋಟದ ರಭಸಕ್ಕೆ ಯುವಕನಿಗೆ ತೀವ್ರ ಸ್ವರೂಪದ ಸುಟ್ಟ ಗಾಯಗಳಾಗಿದ್ದು, ದೇಹದ ಹಲವು ಭಾಗಗಳು ಜಖಂಗೊಂಡಿವೆ.
ಕಿಮ್ಸ್ ಆಸ್ಪತ್ರೆಗೆ ಗಾಯಾಳು ರವಾನೆ!
ಸ್ಫೋಟದ ಸದ್ದು ಕೇಳಿ ಧಾವಿಸಿ ಬಂದ ಸ್ಥಳೀಯರು, ಬೆಂಕಿಯ ನಡುವೆಯೂ ಸಾಹಸಸಿಂಹರಂತೆ ಕಾರ್ಯನಿರ್ವಹಿಸಿ ರಕ್ತಸ್ರಾವದಿಂದ ಬಳಲುತ್ತಿದ್ದ ರಾಜಾಸಾಬ್ನನ್ನು ರಕ್ಷಿಸಿದ್ದಾರೆ.
ಕೂಡಲೇ ಆತನನ್ನು ಹುಬ್ಬಳ್ಳಿಯ ಕಿಮ್ಸ್ (KIMS) ಆಸ್ಪತ್ರೆಗೆ ರವಾನಿಸಲಾಗಿದ್ದು, ಪ್ರಸ್ತುತ ಯುವಕನಿಗೆ ತೀವ್ರ ನಿಗಾ ಘಟಕದಲ್ಲಿ (ICU) ಚಿಕಿತ್ಸೆ ನೀಡಲಾಗುತ್ತಿದೆ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.


