ತುರುವೇಕೆರೆ: ಯಾವುದೇ ಸರ್ಕಾರದ ಕೈಯಲ್ಲಿ ಆಗದಂತಹ ಪುಣ್ಯ ಕಾರ್ಯಗಳನ್ನು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಮಾಡುತ್ತಿದೆ ಎಂದು ವಿಧಾನಪರಿಷತ್ ಮಾಜಿ ಸದಸ್ಯ ಎಂ.ಡಿ. ಲಕ್ಷ್ಮೀನಾರಾಯಣ್ ಶ್ಲಾಘಿಸಿದರು.
ತಾಲ್ಲೂಕಿನ ಮುನಿಯೂರು ಗ್ರಾಮದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ಹಾಗೂ ವಿವಿಧ ಸಂಘಸಂಸ್ಥೆಗಳ ಸಹಕಾರದೊಂದಿಗೆ ಆಯೋಜಿಸಿದ್ದ 2061 ನೇ ಮದ್ಯವರ್ಜನ ಶಿಬಿರದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ಅವರು, ಕುಡಿಯುವುದಕ್ಕೆ ಸರ್ಕಾರದ ಬೆಂಬಲವಿದ್ದರೆ ದುಶ್ಚಟಗಳಿಂದ ಮುಕ್ತಿ ಪಡೆದು ಉತ್ತಮ ಜೀವನ ನಡೆಸುವುದಕ್ಕೆ ಶ್ರೀಕ್ಷೇತ್ರ ಧರ್ಮಸ್ಥಳದ ಶ್ರೀರಕ್ಷೆಯಿದೆ. ಕುಡಿದರೆ ಜೀವನ ಎಂಬ ಭ್ರಮೆಯಿಂದ ಹೊರಬಂದು ಉತ್ತಮ ಜೀವನ ಸಾಗಿಸಬೇಕಿದೆ. ತಾಯಿ ಹಾಗೂ ಹಸುವಿನ ಹಾಲನ್ನು ಕುಡಿದು ಬೆಳೆದ ನಾವು ಪ್ರಸ್ತುತ ಮದ್ಯ ಎಂಬ ವಿಷಕ್ಕೆ, ದುಶ್ಚಟಗಳಿಗೆ ದಾಸರಾಗುತ್ತಿರುವುದು ದುರಂತ. ಎಂದರು.

ಸರ್ಕಾರದ ಆಯವ್ಯಯದಲ್ಲಿ ಒಂದು ಸಮುದಾಯಕ್ಕೆ, ಒಂದು ಕ್ಷೇತ್ರಕ್ಕೆ ಅನ್ಯಾಯವಾಗಬಹುದು, ಆದರೆ ಧರ್ಮಸ್ಥಳ ಯೋಜನೆಯಲ್ಲಿ ಸರ್ವರ ಹಿತ, ಗ್ರಾಮಾಭಿವೃದ್ದಿ, ಮಹಿಳಾ ಸಬಲೀಕರಣವೇ ಮುಖ್ಯವಾಗಿ ಅನ್ಯಾಯಕ್ಕೆ ಅವಕಾಶವೇ ಇಲ್ಲದಂತಾಗಿದೆ. ಹಣಕಾಸು ಸಂಸ್ಥೆಗಳಲ್ಲಿ ಆರ್ಥಿಕ ಸಮಸ್ಯೆ ಸರ್ವೇಸಾಮಾನ್ಯ, ಆದರೆ ಯೋಜನೆಯ ಹಣಕಾಸಿನ ವ್ಯವಹಾರ ಪಾರದರ್ಶಕ, ನ್ಯಾಯಸಮ್ಮತವಾಗಿದ್ದು ಸಮಸ್ಯೆಯೇ ಇಲ್ಲದೆ ಅಚ್ಚುಕಟ್ಟಾಗಿ ನಡೆಯುತ್ತಿರುವ ಏಕೈಕ ಸಂಸ್ಥೆ ಇದಾಗಿದೆ ಎಂದು ಹರ್ಷ ವ್ಯಕ್ತಪಡಿಸಿದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಜಿಲ್ಲಾ ಜನಜಾಗೃತಿ ಸಮಿತಿ ಅಧ್ಯಕ್ಷ ಕಾಮರಾಜ್, ವ್ಯಸನಮುಕ್ತ, ಸದೃಢ, ಸ್ವಾಸ್ಥ್ಯ ಸಮಾಜ ನಿರ್ಮಾಣದ ಕನಸು ಧರ್ಮಾಧಿಕಾರಿಗಳವರದ್ದಾಗಿದೆ. ದುಶ್ಚಟಕ್ಕೆ ದಾಸರಾಗಿ ಕುಟುಂಬದಲ್ಲಿ ನೆಮ್ಮದಿ ಕಳೆದುಕೊಂಡವರ ಬದುಕಲ್ಲಿ ಹೊಸ ಚೈತನ್ಯವನ್ನು ತುಂಬಿ ಆರ್ಥಿಕ ಸದೃಢರನ್ನಾಗಿಸಿ ಸತ್ಪ್ರೆಜೆಗಳನ್ನಾಗಿ ಮಾಡುವುದೇ ಶಿಬಿರದ ಮೂಲ ಉದ್ದೇಶವಾಗಿದೆ ಎಂದರು.
ಯೋಜನೆಯ ಜಿಲ್ಲಾ ನಿರ್ದೇಶಕ ಸತೀಶ್ ಸುವರ್ಣ ಮಾತನಾಡಿ, ಚತುರ್ದಾನಕ್ಕೆ ಹೆಸರಾದ ಧರ್ಮಸ್ಥಳ ಕ್ಷೇತ್ರವು ಸಮಾಜದಲ್ಲಿ ದುಶ್ಚಟ, ವ್ಯಸನ ಮುಕ್ತ ಸಮಾಜ ನಿರ್ಮಾಣಕ್ಕೆ ಹಾಗೂ ಗ್ರಾಮಾಭಿವೃದ್ದಿಯ ಉದ್ದೇಶವನ್ನಿಟ್ಟುಕೊಂಡು 1982 ರಲ್ಲಿ ಯೋಜನೆಯನ್ನು ಪ್ರಾರಂಭಿಸಿತು. ಯೋಜನೆಯ ಮೂಲಕ 40 ಜಿಲ್ಲೆಗಳಲ್ಲಿ ಜನಜಾಗೃತಿ ವೇದಿಕೆ ಸ್ಥಾಪಿಸಿ, ವೇದಿಕೆ ಮೂಲಕ ಸ್ವಾಸ್ಥ್ಯ ಸಮಾಜ ನಿರ್ಮಾಣದ ಉದ್ದೇಶದಿಂದ ವ್ಯಸನಿಗಳ ಮನಃಪರಿವರ್ತನೆ ಮಾಡುವುದಕ್ಕಾಗಿ ಮದ್ಯವರ್ಜನ ಶಿಬಿರ ಪ್ರಾರಂಭಿಸಲಾಯಿತು. ಈವರೆಗೆ ಯೋಜನೆಯಿಂದ ರಾಜ್ಯಾದ್ಯಂತ 2061 ಶಿಬಿರ ನಡೆಸಿದ್ದು, 1 ಲಕ್ಷದ 40 ಸಾವಿರಕ್ಕೂ ಅಧಿಕ ಮಂದಿ ವ್ಯಸನ ಮುಕ್ತರಾಗಿ ನವಜೀವನ ಸಮಿತಿಯ ಸದಸ್ಯರಾಗಿ ಉತ್ತಮ ಬದುಕನ್ನು ಕಟ್ಟಿಕೊಂಡಿದ್ದಾರೆ ಎಂದರು.
ಸಾಹಿತಿ ತುರುವೇಕೆರೆ ಪ್ರಸಾದ್ ಮಾತನಾಡಿ, ಸರ್ಕಾರದ ಆದಾಯದ ಮೂಲವೇ ಅಬಕಾರಿ ಇಲಾಕೆಯಾಗಿರುವುದರಿಂದ ಮದ್ಯಪಾನ ನಿಷೇಧದಂತಹ ಯೋಜನೆಗಳು ಜಾರಿಯಾಗುವುದು ಕಷ್ಟಸಾಧ್ಯ. ಸರ್ಕಾರ ಯಾವುದೇ ಯೋಜನೆ ರೂಪಿಸಬೇಕಾದರೆ ಯೋಜನೆಗೆ ಬೇಕಾದ ಹಣಕಾಸಿನ ಮೂಲಕ್ಕೆ ಅಬಕಾರಿಯ ಕಡೆ ದೃಷ್ಟಿ ಹಾಯಿಸುತ್ತದೆ. ಕಳೆದ ಏಪ್ರಿಲ್ ತಿಂಗಳಲ್ಲಿ 3682 ಕೋಟಿ ರೂಗಳ ಮದ್ಯ ಮಾರಾಟವಾಗಿದೆ ಎಂದು ಅಂಕಿಅಂಶ ಹೇಳುತ್ತದೆ. ವ್ಯವಸ್ಥೆ ಭ್ರಷ್ಟತೆಯ ಕುಡಿತದ ಅಮಲಿನಲ್ಲಿ ತೇಲಾಡುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಪ್ರಸ್ತುತ ಸಮಾಜದಲ್ಲಿ ಕುಡಿತ ಎಂಬುದು ಫ್ಯಾಷನ್ ಆಗಿದೆ. ನಗರ ಪ್ರದೇಶದಲ್ಲಿ ಶೇ.. 40 ರಷ್ಟು ಮಹಿಳೆಯರು ಪಬ್, ಬಾರ್ ಗಳಿಗೆ ತೆರಳಿ ಕುಡಿಯುತ್ತಿದ್ದಾರೆ. ಕನ್ನಡ ನಾಡಿನ ಸಂಸ್ಕೃತಿಯ ನೆಲದಲ್ಲಿ ಮಹಿಳೆಯರು ಮದ್ಯವ್ಯಸನಿಗಳಾಗಿರುವುದು ಅವಮಾನಕರ ಸಂಗತಿಯಾಗಿದೆ ಎಂದ ಅವರು, ವ್ಯವಸ್ಥೆ ನಮ್ಮ ವಿರುದ್ಧವಾಗಿದೆ ಎಂಬುದರ ಅರಿವಿದ್ದರೂ ಪ್ರವಾಹದ ವಿರುದ್ಧ ಈಜುವ ಸಾಹಸಕ್ಕೆ ಧರ್ಮಸ್ಥಳ ಸಂಸ್ಥೆ ಕೈಹಾಕಿದೆ. ಅದರಲ್ಲಿ ಬಹುತೇಕ ಯಶಸ್ಸನ್ನು ಸಾಧಿಸಿದೆ. ಅನುಷ್ಠಾನ ಮಾಡುವ ಶಕ್ತಿ ಇಲ್ಲದವರಿಗೆ ಉಪದೇಶ ಮಾಡುವ ಶಕ್ತಿ ಇಲ್ಲ. ಕುಡಿಯದವರಿಗೆ ಮಾತ್ರ ಕುಡಿಯಬೇಡಿ ಎಂದು ಹೇಳುವ ಹಕ್ಕಿದೆ. ತಾವು ಸ್ವತಃ ಮದ್ಯಪಾನ ಮಾಡುವವರಾಗಿ ಬೇರೆಯವರಿಗೆ ಮದ್ಯಪಾನ ಮಾಡಬೇಡಿ ಎಂದು ಸಲಹೆ ನೀಡುವುದು ಆತ್ಮದ್ರೋಹ, ಸಮಾಜದ್ರೋಹ ಎಂದರು.

ಮದ್ಯವರ್ಜನ ಶಿಬಿರದಲ್ಲಿ 44 ಮಂದಿ ವ್ಯಸನಮುಕ್ತರಾಗಿ ನವಜೀವನ ಸಮಿತಿ ಸದಸ್ಯರಾದರು. ಸಿ.ಎಸ್.ಸಿ. ಒಲಂಪಿಯಾಡ್ ನಲ್ಲಿ ಭಾಗವಹಿಸಿದ್ದ ವಿದ್ಯಾರ್ಥಿಗಳಿಗೆ ಪ್ರಮಾಣ ಪತ್ರ ವಿತರಿಸಲಾಯಿತು. ವಕೀಲ ಧನಪಾಲ್, ನಾಗಮಂಗಲ ಗ್ಯಾರಂಟಿ ಸಮಿತಿ ಅಧ್ಯಕ್ಷ ಮೂಡ್ಲಿಗೌಡ, ದಲಿತ ಸಂರಕ್ಷಣಾ ಸಮಿತಿ ಸಂಚಾಲಕ ಕೃಷ್ಣಸ್ವಾಮಿ, ಜಿಲ್ಲಾ ಜನಜಾಗೃತಿ ವೇದಿಕೆ ಸದಸ್ಯರಾದ ವಿರೂಪಾಕ್ಷಯ್ಯ, ಜ್ಯೋತಿ, ಯೋಗೀಶ್, ಹಾಲು ಉತ್ಪಾದಕ ಸಂಘದ ಅಧ್ಯಕ್ಷೆ ಅನಿತಾ ನಂಜುಂಡಯ್ಯ, ವೀರಶೈವ ಸಮಾಜದ ಅಧ್ಯಕ್ಷ ಕುಮಾರಸ್ವಾಮಿ, ಯೋಜನಾಧಿಕಾರಿಗಳಾದ ಶೇಖರ್ ಶೆಟ್ಟಿ, ತಿಮ್ಮಯ್ಯನಾಯ್ಕ, ಶಿಬಿರಾಧಿಕಾರಿ ನಾಗೇಂದ್ರ, ಆರೋಗ್ಯ ಸಹಾಯಕಿ ಪ್ರಸಿಲ್ಲಾ ಡಿಸೋಜಾ, ಜನಜಾಗೃತಿ ಮೇಲ್ವಿಚಾರಕ ದರ್ಶನ್, ಜ್ಞಾನ ವಿಕಾಸ ಸಮನ್ವಯಾಧಿಕಾರಿ ಆಶಾರಾಣಿ, ಮದ್ಯವರ್ಜನ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಗಂಗಣ್ಣ, ಮುಖಂಡ ಸೋಮೇನಹಳ್ಳಿ ಜಗದೀಶ್ ಸೇರಿದಂತೆ ಗ್ರಾಮಸ್ಥರು ಮುಂತಾದವರಿದ್ದರು.
ವರದಿ: ಗಿರೀಶ್ ಕೆ ಭಟ್


