ಬೆಂಗಳೂರು: ತಮ್ಮ ಜೀವನದಲ್ಲಿ ಕನಿಷ್ಠ ಒಂದು ಪಂಚಾಯಿತಿ ಚುನಾವಣೆಯಲ್ಲೂ ಸ್ಪರ್ಧಿಸದೇ ಇದ್ದ ನರೇಂದ್ರ ಮೋದಿ ಅವರನ್ನು ಗುಜರಾತ್ನಲ್ಲಿ ಮುಖ್ಯಮಂತ್ರಿ ಗದ್ದುಗೆಯ ಮೇಲೆ ಕೂರಿಸಿದವರು ಯಾರು? ಎಂದು ಕೆಪಿಸಿಸಿ ಅಧ್ಯಕ್ಷ ಬಿ.ಕೆ. ಹರಿಪ್ರಸಾದ್(BK Hariprasad) ಅವರು ಭಾರತೀಯ ಜನತಾ ಪಾರ್ಟಿಗೆ (ಬಿಜೆಪಿ) ಪ್ರಶ್ನೆ ಕೇಳಿದ್ದಾರೆ.
ತಮ್ಮ ಎಕ್ಸ್ (ಟ್ವಿಟರ್) ಖಾತೆಯಲ್ಲಿ ಸುದೀರ್ಘ ಪೋಸ್ಟ್ ಒಂದನ್ನು ಹಂಚಿಕೊಂಡಿರುವ ಅವರು, ಬಿಜೆಪಿ(BJP) ಮತ್ತು ಆರ್ಎಸ್ಎಸ್(RSS) ನಾಯಕರ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಕಾಂಗ್ರೆಸ್ನಲ್ಲಿ ಅಂತಹ ಕೆಟ್ಟ ಪರಂಪರೆಯಿಲ್ಲ
ಬಿಜೆಪಿಯ ಆರೋಪಗಳಿಗೆ ತಿರುಗೇಟು ನೀಡಿರುವ ಹರಿಪ್ರಸಾದ್, ಕಾಂಗ್ರೆಸ್ ಪಕ್ಷದಲ್ಲಿ ಪೇಮೆಂಟ್ ಕೊಟ್ಟು ಅಧ್ಯಕ್ಷರಾಗುವ ಯಾವುದೇ ರೂಢಿಯೂ ಇಲ್ಲ. ಅದರೊಂದಿಗೆ, ಕೊಲೆ ಕೇಸ್ನಲ್ಲಿ ಸಿಲುಕಿ ಗಡಿಪಾರಾದವರು, ಪೋಕ್ಸೋ ಕಾಯ್ದೆಯಡಿ ಆರೋಪ ಹೊತ್ತವರು, ಕ್ರಿಮಿನಲ್ಗಳು ಹಾಗೂ ಜೈಲುವಾಸ ಅನುಭವಿಸಿದವರನ್ನು ತಂದು ಪಕ್ಷದ ಅಧ್ಯಕ್ಷರನ್ನಾಗಿ ಮಾಡುವ ಕೆಟ್ಟ ಪರಂಪರೆಯೂ ನಮ್ಮಲ್ಲಿ ಇಲ್ಲ ಎಂದು ಲೇವಡಿ ಮಾಡಿದ್ದಾರೆ.
ಮೋದಿ ಅವರ ರಾಜಕೀಯ ಇತಿಹಾಸವನ್ನು ಕೆದಕಿದ ಅವರು, ಯಾವತ್ತೂ ಪಂಚಾಯಿತಿ ಚುನಾವಣೆಯನ್ನೂ ಎದುರಿಸದ ಮೋದಿ ಅವರನ್ನು ಗುಜರಾತ್ ಮುಖ್ಯಮಂತ್ರಿ ಮಾಡಿದ್ದು ಯಾರು? ಅಂದು ಅವರು ಯಾವ ಜನರಿಂದ ಆಯ್ಕೆಯಾಗಿ ಮುಖ್ಯಮಂತ್ರಿಯಾಗಿದ್ದರು ಎನ್ನುವ ಕನಿಷ್ಠ ಇತಿಹಾಸವಾದರೂ ಬಿಜೆಪಿಗೆ ನೆನಪಿದೆಯೇ? ಎಂದು ಪ್ರಶ್ನಿಸಿದ್ದಾರೆ.


