ತುರುವೇಕೆರೆ : ಕಳ್ಳತನ ಮಾಡುವ ಉದ್ದೇಶದಿಂದ ಎಟಿಎಂ ಒಳಗೆ ಹೋಗಿ ಅಲ್ಲಿದ್ದ ಮೆಷಿನ್ ಹಾಗೂ ಉಪಕರಣಗಳನ್ನು ಹಾಳು ಮಾಡಿದ್ದ ಆರೋಪಿಗೆ 6,42,500 ರೂ ದಂಡ ಅಥವಾ ಒಂದು ವರ್ಷ ಕಾರಾಗೃಹ ಶಿಕ್ಷೆ ವಿಧಿಸಿ ತುರುವೇಕೆರೆ ಜೆ.ಎಂ.ಎಫ್.ಸಿ ಸಿವಿಲ್ ನ್ಯಾಯಾಲಯದ ಹಿರಿಯ ನ್ಯಾಯಾಧೀಶರಾದ ಪವಿತ್ರ ಎಂ.ಡಿ. ಅವರು ತೀರ್ಪು ಪ್ರಕಟಿಸಿದ್ದಾರೆ.
2025 ರ ನವೆಂಬರ್ 28 ರಂದು ರಾತ್ರಿ ಸಮಯದಲ್ಲಿ ತುರುವೇಕೆರೆ ನಗರದ ದಬ್ಬೇಘಟ್ಟ ವೃತ್ತದ ಹತ್ತಿರದಲ್ಲಿರುವ ಮಂಚೇಗೌಡ ಕಟ್ಟಡದಲ್ಲಿದ್ದ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಎಟಿಎಂ ಕೇಂದ್ರಕ್ಕೆ ದುಷ್ಕರ್ಮಿಗಳು ನುಗ್ಗಿ ಎಟಿಎಂ ಯಂತ್ರದಲ್ಲಿದ್ದ ಹಣ ಕಳವು ಮಾಡುವ ಉದ್ದೇಶದಿಂದ ಎಟಿಎಂ ಯಂತ್ರ, ಸಿಸಿಟಿವಿ, ಪೆನಾಲ್, ಯುಪಿಎಸ್, ಬ್ಯಾಟರಿಡೋರ್, ಎಟಿಎಂ ವಾಲ್ಟ್ ನ ಡಿಜಿಟಲ್ ಲಾಕರ್ ಅನ್ನು ಕಲ್ಲಿನಿಂದ ಹೊಡೆದು ಹಾಳು ಮಾಡಿ ಬ್ಯಾಂಕಿಗೆ 6,42,500 ರೂ ನಷ್ಟವುಂಟು ಮಾಡಿದ್ದಾರೆಂದು ಬ್ಯಾಂಕಿನ ಮ್ಯಾನೇಜರ್ ರಮೇಶ್ ಕೆ.ಆರ್. ತುರುವೇಕೆರೆ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಈ ಹಿನ್ನೆಲೆಯಲ್ಲಿ ಪ್ರಕರಣ ದಾಖಲಿಸಿಕೊಂಡು ಪೊಲೀಸರು ತನಿಖೆ ಪ್ರಾರಂಭಿಸಿದ್ದರು.
ಪ್ರಕರಣದಲ್ಲಿನ ಆರೋಪಿಯ ಪತ್ತೆಗೆ ತುಮಕೂರು ಜಿಲ್ಲಾ ಪೊಲೀಸ್ ಅಧೀಕ್ಷಕ ಅಶೋಕ್ ಕೆ.ವಿ., ಹೆಚ್ಚುವರಿ ಪೊಲೀಸ್ ಅಧೀಕ್ಷಕರಾದ ಸಿ.ಗೋಪಾಲ್ ಮತ್ತು ಪುರುಷೋತ್ತಮ್ ಅವರ ಮಾರ್ಗದರ್ಶನದಲ್ಲಿ ಕುಣಿಗಲ್ ಉಪ ಅಧೀಕ್ಷಕ ಓಂಪ್ರಕಾಶ್ ನೇತೃತ್ವದಲ್ಲಿ ತುರುವೇಕೆರೆ ಸಿಪಿಐ ಲೋಹಿತ್, ಪಿಎಸೈ ಮೂರ್ತಿ, ಅಪರಾಧ ವಿಭಾಗದ ಸಿಬ್ಬಂದಿಗಳಾದ ಗುರುಮೂರ್ತಿ, ರಾಜಕುಮಾರ್ ವಗ್ಗೇರಿ ಒಳಗೊಂಡ ವಿಶೇಷ ತಂಡವನ್ನು ರಚಿಲಾಗಿತ್ತು. ಈ ತಂಡವು ಎರಡೇ ದಿನದಲ್ಲಿ 2025ರ ನವೆಂಬರ್ 30 ರಂದು ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿತ್ತು. ತುರುವೇಕೆರೆ ಪಟ್ಟಣದ ಇಂದಿರಾನಗರ ನಿವಾಸಿಯಾದ ಸ್ವಾಮಿ ಅಲಿಯಾಸ್ ವಡಿವೇಲು ಸ್ವಾಮಿ (43) ಆರೋಪಿಯಾಗಿದ್ದಾನೆ. ಆರೋಪಿಯಿಂದ ಕಳ್ಳತನ ಮಾಡಲು ಉಪಯೋಗಿಸಿದ್ದ ಆಯುಧ, ಇನ್ನಿತರ ಉಪಕರಣಗಳನ್ನು ವಶಪಡಿಸಿಕೊಂಡು ಆರೋಪಿಯನ್ನು ನ್ಯಾಯಾಲಯ ಬಂಧನಕ್ಕೆ ಒಪ್ಪಿಸಲಾಗಿತ್ತು.
ಪ್ರಕರಣದ ತನಿಖೆ ಪೂರ್ಣಗೊಳಿಸಿದ ತನಿಖಾಧಿಕಾರಿ ಪಿ.ಎಸ್.ಐ. ಮೂರ್ತಿ 2026ರ ಜನವರಿ 19ರಂದು ತುರುವೇಕೆರೆ ಹಿರಿಯ ನ್ಯಾಯಾಲಯಕ್ಕೆ ದೋಷಾರೋಪಣ ಪಟ್ಟಿ ಸಲ್ಲಿಸಿದದ್ದರು. ದೋಷಾರೋಪಣೆಯ ಆಧಾರದ ಮೇಲೆ ನ್ಯಾಯಾಲಯದಲ್ಲಿ ವಿಚಾರಣೆ ನಡೆದು ಸರ್ಕಾರಿ ಅಭಿಯೋಜಕರಾದ ಕವಿತಾ ಹಿರೇಮಠ, ಶಿವಬಸಪ್ಪ ಹುಕ್ಕೇರಿ ವಾದ ಮಂಡಿಸಿದ್ದರು. ಆರೋಪ ಸಾಬೀತಾದ ಹಿನ್ನೆಲೆಯಲ್ಲಿ 2026 ಆಗಸ್ಟ್ 03 ರಂದು ಪ್ರಕರಣದ ಆರೋಪಿ ಸ್ವಾಮಿ ಅಲಿಯಾಸ್ ವಡಿವೇಲು ಸ್ವಾಮಿಗೆ ರೂಪಾಯಿ 6,42,500 ರೂ ದಂಡ ಅಥವಾ ಒಂದು ವರ್ಷ ಕಾರಾಗೃಹ ಶಿಕ್ಷೆ ವಿಧಿಸಿ ತುರುವೇಕೆರೆ ನ್ಯಾಯಾಲಯದ ನ್ಯಾಯಾಧೀಶರಾದ ಪವಿತ್ರ ಎಂ.ಡಿ. ತೀರ್ಪು ನೀಡಿರುತ್ತಾರೆ.
ವರದಿ: ಗಿರೀಶ್ ಕೆ ಭಟ್


