ಸವಣೂರು: ಹಾವೇರಿ ಜಿಲ್ಲೆಯ ಸವಣೂರು ನಗರದ ಕೊರಿಪೇಟೆ ಓಣಿಯಲ್ಲಿರುವ ಶಿರಹಟ್ಟಿ ಶ್ರೀ ಜಗದ್ಗುರು ಫಕ್ಕೀರೇಶ್ವರ ಶಾಖಾ ಮಠದ ಜಾತ್ರಾ ಮಹೋತ್ಸವದ ಅಂಗವಾಗಿ ಭಾನುವಾರ ಶ್ರೀ ಜಗದ್ಗುರು ದಿಂಗಾಲೇಶ್ವರ ಸ್ವಾಮೀಜಿ ಅವರ ಪುರ ಪ್ರವೇಶವು ವಿವಿಧ ವಾದ್ಯ ವೈಭವಗಳೊಂದಿಗೆ ಅದ್ದೂರಿಯಾಗಿ ಜರುಗಿತು.
ಪಟ್ಟಣದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆಯು ಸಾಗಿ ಶಿರಹಟ್ಟಿ ಶ್ರೀ ಜಗದ್ಗುರು ಫಕ್ಕೀರೇಶ್ವರ ಶಾಖಾ ಮಠವನ್ನು ತಲುಪಿತು. ಮೇ 11 ಮತ್ತು 12 ರಂದು ಎರಡು ದಿನಗಳ ಕಾಲ ಜಾತ್ರಾ ಮಹೋತ್ಸವ ವಿಜೃಂಭಣೆಯಿಂದ ನಡೆಯಲಿದೆ.
ಮೇ 11 ರಂದು ಕಾರ್ಯಕ್ರಮ:
ಪ್ರಾತಃಕಾಲ ಶ್ರೀ ಜಗದ್ಗುರು ಫಕ್ಕೀರೇಶ್ವರ ಗದ್ದುಗೆಗೆ ರುದ್ರಾಭಿಷೇಕ, ಸಹಸ್ರ ಬಿಲ್ವಾರ್ಚನೆ ಪೂಜೆ ಸೇರಿದಂತೆ ವಿವಿಧ ಧಾರ್ಮಿಕ ಕೈಂಕರ್ಯಗಳು ಜರುಗಲಿವೆ. ನಂತರ ಮಹಿಳಾ ಡೊಳ್ಳು ಮೇಳ, ಕುದುರೆ ಕುಣಿತ, ಆನೆ ಅಂಬಾರಿ ಪಲ್ಲಕ್ಕಿ, ಗೊಂಬೆ ಕುಣಿತ ಸೇರಿದಂತೆ ವಿವಿಧ ವಾದ್ಯ ವೈಭವಗಳೊಂದಿಗೆ ಶ್ರೀಮಠದಿಂದ ಮೆರವಣಿಗೆ ಆರಂಭವಾಗಲಿದೆ.
ಮೆರವಣಿಗೆಯು ಕೊರಿಪೇಟೆ, ಬುಧವಾರ ಪೇಟೆ, ಶಿಂಪಿಗಲ್ಲಿ, ಉಪ್ಪಾರ ಓಣಿ, ವೀರಗಲ್ಲಿ, ಮುಖ್ಯ ಮಾರುಕಟ್ಟೆ ಸೇರಿದಂತೆ ಪಟ್ಟಣದ ರಾಜಬೀದಿಯಲ್ಲಿ ಸಂಚರಿಸಿ ಶ್ರೀಮಠದಲ್ಲಿ ಸಂಪನ್ನಗೊಳ್ಳಲಿದೆ. ಸಂಜೆ ಶ್ರೀ ಜಗದ್ಗುರು ದಿಂಗಾಲೇಶ್ವರ ಸ್ವಾಮೀಜಿ ಅವರ ಸಾನ್ನಿಧ್ಯದಲ್ಲಿ ಅದ್ದೂರಿ ರಥೋತ್ಸವ ಜರುಗಲಿದೆ.
ಮೇ 12 ರಂದು ಕಾರ್ಯಕ್ರಮ:
ಪ್ರಾತಃಕಾಲ ವಿವಿಧ ಪೂಜಾ ಕೈಂಕರ್ಯಗಳು ನಡೆಯಲಿವೆ. ನಂತರ ನಗರದ ಪ್ರಮುಖ ಬೀದಿಗಳಲ್ಲಿ ವಾದ್ಯ ವೈಭವಗಳೊಂದಿಗೆ ಪಲ್ಲಕ್ಕಿ ಉತ್ಸವ ಜರುಗಲಿದೆ. ಸಂಜೆ 6 ಗಂಟೆಗೆ ಶ್ರೀಗಳ ಸಾನ್ನಿಧ್ಯದಲ್ಲಿ "ಕಡುಬಿನ ಕಾಳಗ" ಉತ್ಸವ ವಿಶೇಷ ಆಕರ್ಷಣೆಯಾಗಿ ನಡೆಯಲಿದೆ.
ವರದಿ: ವಿಶ್ವನಾಥ ಹತ್ತಲಗೇರಿ


