ಬೆಂಗಳೂರು : ನಟ ದರ್ಶನ್ (Actor Darshan) ಆರೋಪಿಯಾಗಿರುವ ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ದಿನಕ್ಕೊಂದು ಹೊಸ ತಿರುವು ಸಿಗುತ್ತಿದ್ದು, ಪ್ರಕರಣದ 14ನೇ ಆರೋಪಿ (A14) ಪ್ರದೋಶ್ ನ್ಯಾಯಾಲಯಕ್ಕೆ ಸಲ್ಲಿಸಿರುವ ಅರ್ಜಿಯೊಂದು ತೀವ್ರ ಸಂಚಲನ ಮೂಡಿಸಿದೆ.
ಪ್ರಕರಣಕ್ಕೆ ಸಂಬಂಧಿಸಿದಂತೆ 'ನಾನು ಸಂಪೂರ್ಣ ಸತ್ಯವನ್ನು ಬಹಿರಂಗಪಡಿಸಲು ಸಿದ್ಧನಿದ್ದೇನೆ, ನನ್ನನ್ನು ಕ್ಷಮಿಸಿ' ಎಂದು ಕೋರಿ ಪ್ರದೋಶ್ ನ್ಯಾಯಾಲಯದ ಮೊರೆ ಹೋಗಿದ್ದಾರೆ.
ನಟ ದರ್ಶನ್ ಹಾಗೂ ಅವರ ಆಪ್ತರ ಸುತ್ತ ಸುತ್ತುತ್ತಿರುವ ಈ ಭೀಕರ ಕೊಲೆ ಪ್ರಕರಣದ ತನಿಖೆ ತೀವ್ರವಾಗಿ ನಡೆಯುತ್ತಿರುವ ಬೆನ್ನಲ್ಲೇ ಈ ಬೆಳವಣಿಗೆ ನಡೆದಿದೆ.
ಪ್ರಕರಣದಲ್ಲಿ ತನಗೆ ತಿಳಿದಿರುವ ಎಲ್ಲಾ ನೈಜ ಸಂಗತಿಗಳನ್ನು ನ್ಯಾಯಾಲಯದ ಮುಂದೆ ಮುಕ್ತವಾಗಿ ಹಂಚಿಕೊಳ್ಳಲು ಬಯಸುವುದಾಗಿ ಪ್ರದೋಶ್ ಮನವಿ ಮಾಡಿದ್ದು, ತನಿಖೆಗೆ ದೊಡ್ಡ ಮಟ್ಟದ ತಿರುವು ಸಿಕ್ಕಂತಾಗಿದೆ.
ರೇಣುಕಾಸ್ವಾಮಿ ಹತ್ಯೆಯ ಬಳಿಕ ಕೃತ್ಯವನ್ನು ಮುಚ್ಚಿಹಾಕಲು, ಸಾಕ್ಷ್ಯನಾಶ ಮಾಡಲು ಹಾಗೂ ಪೊಲೀಸರ ಹಾದಿ ತಪ್ಪಿಸಲು ನಡೆದ ಸಂಚಿನಲ್ಲಿ ಪ್ರದೋಶ್ ಪ್ರಮುಖ ಪಾತ್ರ ವಹಿಸಿದ್ದರು ಎಂಬ ಆರೋಪ ಕೇಳಿಬಂದಿತ್ತು.
ಈಗ ಸ್ವತಃ ಪ್ರದೋಶ್ ಅವರೇ ಕೋರ್ಟ್ ಮುಂದೆ ಸತ್ಯ ಒಪ್ಪಿಕೊಳ್ಳಲು ಮತ್ತು ಅಪರಾಧದ ವಿವರಗಳನ್ನು ಹಂಚಿಕೊಳ್ಳಲು ಮುಂದಾಗಿರುವುದು ಪ್ರಕರಣದಲ್ಲಿ ಭಾಗಿಯಾಗಿರುವ ಇತರ ಪ್ರಮುಖ ಆರೋಪಿಗಳಿಗೆ ಮತ್ತಷ್ಟು ಕಾನೂನು ಸಂಕಷ್ಟ ತಂದೊಡ್ಡುವ ಸಾಧ್ಯತೆಯಿದೆ.
ಪ್ರದೋಶ್ ಸಲ್ಲಿಸಿರುವ ಈ ಅರ್ಜಿಯನ್ನು ನ್ಯಾಯಾಲಯ ಮುಂದಿನ ವಿಚಾರಣೆಗೆ ಕೈಗೆತ್ತಿಕೊಳ್ಳಲಿದ್ದು, ಅವರು ನೀಡಲಿರುವ ಹೇಳಿಕೆ ಹಾಗೂ ಕೋರ್ಟ್ ಕೈಗೊಳ್ಳುವ ನಿರ್ಧಾರದ ಮೇಲೆ ಇಡೀ ಪ್ರಕರಣದ ಮುಂದಿನ ಹಂತ ನಿರ್ಧಾರವಾಗಲಿದೆ.
ತನಿಖಾ ತಂಡ ಹಾಗೂ ಪೊಲೀಸ್ ಅಧಿಕಾರಿಗಳು ಸಹ ಈ ಅರ್ಜಿಯ ನಡೆ ಮೇಲೆ ತೀವ್ರ ಕಣ್ಣಿಟ್ಟಿದ್ದು, ಮುಂಬರುವ ದಿನಗಳಲ್ಲಿ ಪ್ರಕರಣಕ್ಕೆ ಸಂಬಂಧಿಸಿದಂತೆ ಇನ್ನಷ್ಟು ಸ್ಪೋಟಕ ಮಾಹಿತಿಗಳು ಹೊರಬೀಳುವ ನಿರೀಕ್ಷೆಯಿದೆ.


