ಬೆಂಗಳೂರು : ಕರ್ನಾಟಕ ವಿಧಾನಪರಿಷತ್ ಚುನಾವಣೆಯಲ್ಲಿ ಶಾಸಕರು ಅಡ್ಡ ಮತದಾನ ಮಾಡಿರುವುದು ರಾಜ್ಯ ಬಿಜೆಪಿ (BJP) ನಾಯಕರನ್ನ ಕಂಗೆಡಿಸಿದೆ. ಯಾರು ಅಡ್ಡ ಗೆರೆ ದಾಟಿದ್ರು ಎಂಬುದು ತಿಳಿಯಲಾಗದೇ ಸ್ಥಿತಿ ನಿರ್ಮಾಣವಾಗಿದೆ.
ಹೀಗಿರುವಾಗ್ಲೇ, ಇದೇ ಸೋಮವಾರ ಸಿ.ಟಿ ರವಿ ನೇತೃತ್ವದ ಸತ್ಯ ಶೋಧನಾ ಸಮಿತಿ ವರದಿ ಸಲ್ಲಿಸಲಿದೆ. ವರದಿಯಲ್ಲಿ ಬಿಜೆಪಿಯ 4ರಿಂದ 5 ಶಾಸಕರು ಅಡ್ಡ ಮತದಾನ ಮಾಡಿರುವ ಬಗ್ಗೆ ಅನುಮಾನ ವ್ಯಕ್ತಪಡಿಸಲಾಗಿದೆ ಎಂದು ಬಿಜೆಪಿ ಮೂಲಗಳು ಹೇಳುತ್ತಿವೆ.
ಇದೇ ರಿಪೋರ್ಟ್ ಸೋಮವಾರ ವಿಜಯೇಂದ್ರಗೆ ತಲುಪಲಿದ್ದು, ಬಳಿಕ ಹೈಕಮಾಂಡ್ ಅಂಗಳಕ್ಕೂ ಹೋಗಲಿದೆ. ಇದರ ಮಧ್ಯೆ ಇದೀಗ ಬೆಳಗಾವಿ ಮೂಲದ ಶಾಸಕ ಅಡ್ಡಮತದಾನ ಮಾಡಿರುವ ಶಂಕೆ ವ್ಯಕ್ತವಾಗಿದ್ದು, ರಾಜ್ಯ ಬಿಜೆಪಿಯಲ್ಲಿ ಸಂಚಲನಕ್ಕೆ ಕಾರಣವಾಗಿದೆ.
ಬೆಳಗಾವಿಯ ಹಿರಿಯ ಶಾಸಕನಿಂದಲೇ ಅಡ್ಡ ಮತದಾನವಾಗಿರುವ ಶಂಕಿ ವ್ತಕ್ತವಾಗಿದ್ದು, ಈ ಬಗ್ಗೆ ಕೇಂದ್ರ ನಾಯಕತ್ವದ ಮುಂದೆಯು ಬೆಳಗಾವಿ ರಾಜಕಾರಣ ಪ್ರಸ್ತಾಪವಾಗಿದೆ.
ಇನ್ನು ಈ ಬಗ್ಗೆ ಬಿಜೆಪಿಯ ಸಮಿತಿ ಸಭೆಯಲ್ಲೂ ಭಾರೀ ಚರ್ಚೆಯಾಗಿದ್ದು, ಇದರ ಕುರಿತು ಕೇಂದ್ರ ನಾಯಕರು ಇನ್ನಷ್ಟು ಮಾಹಿತಿ ಕಲೆಹಾಕುತ್ತಿದ್ದಾರೆ. ಹಾಗಾದ್ರೆ, ಅಡ್ಡಮತದಾನ ಮಾಡಿದ ಶಾಸಕನನ್ನು ಪತ್ತೆ ಮಾಡಲಾಯ್ತಾ? ಯಾರವರು ಎನ್ನುವುದು ಮಾತ್ರ ನಿಗೂಢವಾಗಿದೆ.


