ತುರುವೇಕೆರೆ : ಮನುಸ್ಮೃತಿಯನ್ನು ಸರಿಯಾಗಿ ಅರ್ಥೈಸಿಕೊಳ್ಳಲಾಗದೆ ಅದರಲ್ಲಿನ ಮೌಲ್ಯಗಳ ಬಗ್ಗೆ ಅಪವ್ಯಾಖ್ಯಾನ ಮಾಡಿ ಬುದ್ದಿಜೀವಿಗಳು ಜನರನ್ನು ದಾರಿತಪ್ಪಿಸುತ್ತಿದ್ದಾರೆ. ಇದು ನಿಜಕ್ಕೂ ಸನಾತನ ಧರ್ಮಕ್ಕೆ ನಮ್ಮವರಿಂದಲೇ ಬಂದೊದಗಿರುವ ತೀವ್ರ ಅಪಾಯ ಎಂದು ತುಮಕೂರಿನ ರಾಮಕೃಷ್ಣ-ವಿವೇಕಾನಂದ ಆಶ್ರಮದ ಶ್ರೀ ವೀರೇಶಾನಂದ ಸರಸ್ವತೀ ಸ್ವಾಮೀಜಿ ವಿಷಾಧಿಸಿದರು.
ಪಟ್ಟಣದ ಪತಂಜಲಿ ಯೋಗಮಂದಿರದಲ್ಲಿ ಪತಂಜಲಿ ಯೋಗ ಶಿಕ್ಷಣ ಸಮಿತಿ, ಧೇನುಪುರಿ ರೀಜನಲ್ ಟ್ರಸ್ಟ್ ಮತ್ತು ಲಯನ್ಸ ಕ್ಲಬ್ ಇತರೆ ಸಂಸ್ಥೆಗಳ ಸಹಯೋಗದೊಂದಿಗೆ ಏರ್ಪಡಿಸಿದ್ದ ಚಿಂತನ-ಮAಥನ ಕಾರ್ಯಕ್ರಮದಲ್ಲಿ ಅವರು ವಿಶೇಷ ಉಪನ್ಯಾಸ ನೀಡಿದ ಅವರು, ಮನುಸ್ಮೃತಿ ಶೋಷಣೆಯ ಕೃತಿಯಲ್ಲ, ಮನುಷ್ಯ ಧರ್ಮ ಪೋಷಣೆಯ ಕೃತಿ, ಕೆಳವರ್ಗದವರಿಂದಲಾದರೂ ಶುದ್ಧವಾದ ಜ್ಞಾನ ಸಂಪಾದಿಸು, ಕೆಳವರ್ಗದವರಿಂದಲಾದರೂ ಧರ್ಮವನ್ನು ಅರ್ಥ ಮಾಡಿಕೋ, ಕೆಳವರ್ಗದ ಸ್ತ್ರೀಯನ್ನು ಮೇಲ್ವರ್ಗದವರು ವಿವಾಹವಾಗುವುದೂ ಕೂಡ ಶ್ರೇಯಸ್ಕರ ಎಂದು ಮನಸ್ಮೃತಿಯಲ್ಲೇ ಹೇಳಿದೆ. ಹೀಗಾಗಿ ಮನಸ್ಮೃತಿ ಯಾವುದೇ ಶ್ರೇಣೀಕೃತ ಜಾತಿ ವ್ಯವಸ್ಥೆಯನ್ನಾಗಲೀ, ಲಿಂಗ ಶೋಷಣೆಯ ನೀತಿಯನ್ನಾಗಿ ಪ್ರತಿಪಾದಿಸಿಲ್ಲ ಎಂದು ಶ್ಲೋಕಗಳ ಸಮೇತ ಮನವರಿಕೆ ಮಾಡಿಕೊಟ್ಟರು.
ನಿತ್ಯಜೀವನದಲ್ಲಿ ಭಗವದ್ಗೀತೆಯ ಉಪಯೋಗಗಳ ಕುರಿತು ಸುಧೀರ್ಘ ಉಪನ್ಯಾಸ ನೀಡಿದ ಅವರು ಭಗವದ್ಗೀತೆ ಅಧ್ಯಾತ್ಮಿಕ ದೃಷ್ಟಿಗಿಂತ ಮಾನವೀಯ ಮೌಲ್ಯಗಳ ಅಭಿವೃದ್ಧಿಯನ್ನು ಪ್ರೇರೇಪಿಸುತ್ತದೆ. ಬದುಕಿನ ಒಂದು ಹಂತದಿAದ ಮತ್ತೊಂದು ಹಂತಕ್ಕೆ ಹೋಗಲು ಆದರ್ಶದ ಬೆಂಬಲ ಬೇಕು. ಅಂತಹ ಬೆಂಬಲ, ಆತ್ಮಸ್ಥೈರ್ಯವನ್ನು ಭಗವದ್ಗೀತೆ ಬದುಕಿನ ಎಲ್ಲಾ ಹಂತಗಳಲ್ಲಿ ನೀಡುತ್ತದೆ. ಭಗವದ್ಗೀತೆ ಎಸಿ ರೂಮಲ್ಲಿ ನಡೆದ ವಿಚಾರ ಸಂಕಿರಣವಲ್ಲ. ಅದು ಘಟಿಸಿದ್ದು ರಣರಂಗದಲ್ಲಿ! ಜಗತ್ತಿನ ಯುಗಪುರುಷರಿಗೆಲ್ಲಾ ಜ್ಞಾನೋದಯವಾಗಿರುವುದು ಬೆಟ್ಟಗುಡ್ಡಗಳ ಮೇಲೆ, ಮರಗಳ ಕೆಳಗೇ ಹೊರತು ಅರಮನೆಯ ಸುಪ್ಪತ್ತಿಗೆಯಲ್ಲಲ್ಲ. ಹಾಗಾಗಿ ಭಗವದ್ಗೀತೆ ನಿಜ ಅರ್ಥದಲ್ಲಿ ಕರ್ಮಯೋಗವೆನಿಸುತ್ತದೆ ಎಂದರು.

ಭಗವದ್ಗೀತೆಯ ಮೌಲ್ಯಗಳನ್ನು ಸಮಗ್ರವಾಗಿ ಕಟ್ಟಿಕೊಟ್ಟ ಸ್ವಾಮೀಜಿ ಭಗವದ್ಗೀತೆ ಜಾತಿ ಮತ ಮೀರಿದ ಎಲ್ಲಾ ಧರ್ಮ, ಜನಾಂಗದವರಿಗೆ ಸಾರ್ವತ್ರಿಕವಾಗಿ ಅನ್ವಯ ಆಗುವಂತಾದ್ದು. ಭಗವದ್ಗೀತೆ ಆಂತರಿಕ ಹಾಗೂ ನೈತಿಕ ಬಲ ಹೆಚ್ಚಿಸುತ್ತದೆ. ಇದೊಂದು ಮಾನವೀಯ ವಿಜ್ಞಾನ, ಅದೂ ಬರೀ ಅಂತೆ ಕಂತೆಗಳ ಉಪದೇಶವಲ್ಲ, ಪ್ರಾಯೋಗಿಕ ಮೌಲ್ಯಗಳುಳ್ಳ ಸಂದೇಶವಾಗಿದ್ದು ತಮ್ಮ ತಮ್ಮ ಶಕ್ತ್ಯಾನುಸಾರ ಈ ತತ್ವಗಳನ್ನು ಜನರು ಜೀವನದಲ್ಲಿ ಅಳವಡಿಸಿಕೊಂಡು ತಮ್ಮ ಬದುಕನ್ನು ಸದಾ ಕಾಲ ಚೈತನ್ಯಮಯವಾಗಿಟ್ಟುಕೊಳ್ಳಬಹುದು ಎಂದರು.
ಹಲವು ನಾಗರಿಕ ಸಂಸ್ಥೆಗಳ ವತಿಯಿಂದ ಸ್ವಾಮೀಜಿಯವರಿಗೆ ಗುರುವಂದನೆ ಸಲ್ಲಿಸಲಾಯಿತು. ಎಚ್.ಕೆ. ಆನಂದರಾಜ್, ವಕೀಲ ರಾಜಶೇಖರ್, ಬ್ರಾಹ್ಮಣ ಸೇವಾ ಸಭಾದ ಅಧ್ಯಕ್ಷ ಸತ್ಯನಾರಾಯಣ್, ಸಮಾಜ ಸೇವಕ, ಶಿವಶಕ್ತಿ ಕಲಾವಿದರು ಸಂಸ್ಥೆ ಅಧ್ಯಕ್ಷ ಅಮಾನಿಕೆರೆ ಮಂಜುನಾಥ್, ಲಯನ್ಸ್ ಕ್ಲಬ್ ಅಧ್ಯಕ್ಷ ಪರಮೇಶ್, ಪ್ರಾಣೇಶ್, ಎಸ್.ಎಂ. ಕುಮಾರಸ್ವಾಮಿ. ಡಾ. ನಾಗರಾಜ್, ಗಂಗಾಧರ ದೇವರಮನೆ, ಟಿ.ಎನ್. ಸರಸ್ವತೀ, ಧೇನುಪುರಿ ರೀಜನಲ್ ಟ್ರಸ್ಟ್ ಅಧ್ಯಕ್ಷ ಟಿ.ಆರ್.ಶ್ರೀಧರ್, ಶಿವಾನಂದ್ ಮೊದಲಾದವರು ಉಪಸ್ಥಿತರಿದ್ದರು.
ವರದಿ: ಗಿರೀಶ್ ಕೆ ಭಟ್


