ಬೆಂಗಳೂರು : 'ಯಶವಂತಪುರ ವಿಧಾನಸಭಾ ಕ್ಷೇತ್ರದ ಶಾಸಕ ಹಾಗೂ ಮಾಜಿ ಸಹಕಾರ ಸಚಿವ ಎಸ್.ಟಿ. ಸೋಮಶೇಖರ್ ಗೌಡ ಅವರ ಪರವಾಗಿ ನಾವು ಸದಾ ಬಲಗೈನಂತೆ ನಿಲ್ಲುತ್ತೇವೆ. ಯಾವುದೇ ಕಾರಣಕ್ಕೂ ಅವರನ್ನು ಸೋಲಲು ಬಿಡುವುದಿಲ್ಲ' ಎಂದು ಬೆಂಗಳೂರು ಪಶ್ಚಿಮ ಜಿಲ್ಲಾ ಕಾಂಗ್ರೆಸ್ ಕಮಿಟಿಯ ಉಪಾಧ್ಯಕ್ಷ ಹಾಗೂ ಭೈರವ ಗ್ರೂಪ್ಸ್ನ ಮಾಲೀಕರಾದ ಟ್ರಾವೆಲ್ಸ್ ಮಂಜುನಾಥ್ ಹೇಳಿದರು.
ದೊಡ್ಡಬಿದರಕಲ್ಲು ವಾರ್ಡಿನ ತಿಪ್ಪೇನಹಳ್ಳಿ ಸರ್ಕಲ್ನ ಕಾಲಭೈರವೇಶ್ವರ ಸಮುದಾಯ ಭವನದ ಮುಂಭಾಗದಲ್ಲಿರುವ ಬ್ಲೂಜೆ ಮೈದಾನದಲ್ಲಿ ನಡೆದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅವರು, "ನಮ್ಮ ಶಾಸಕರಿಗೆ ನಾವು ಬಲಗೈ ಬಂಟರಂತೆ ಇದ್ದೇವೆ. ಬಿಜೆಪಿಯವರು ನಮ್ಮನ್ನು ಏನೂ ಮಾಡಲು ಸಾಧ್ಯವಿಲ್ಲ. ಅವರಿಗೆ ತಾಕತ್ತಿದ್ದರೆ ನಮ್ಮ ಶಾಸಕರು ನಡೆಸಿದ ರೀತಿಯ ಅಭಿವೃದ್ಧಿ ಕಾರ್ಯಕ್ರಮಗಳು ಹಾಗೂ ಜನಪರ ಕೆಲಸಗಳನ್ನು ಮಾಡಿ ತೋರಿಸಲಿ" ಎಂದು ಸವಾಲು ಹಾಕಿದರು.
ಪಕ್ಷದ ಸಂಘಟನಾ ವಿಚಾರ ಪ್ರಸ್ತಾಪಿಸಿದ ಟ್ರಾವೆಲ್ಸ್ ಮಂಜುನಾಥ್, "ಕೆಲವರನ್ನು ಹೊರತುಪಡಿಸಿದರೆ ಲಿಖಿತ್ ಗೌಡ ಸೇರಿದಂತೆ ಪಕ್ಷದ ಕೆಲ ಪದಾಧಿಕಾರಿಗಳು ನಮಗೆ ಸರಿಯಾದ ಮಾಹಿತಿ ನೀಡುತ್ತಿಲ್ಲ. ನಾನು ಪಕ್ಷದಲ್ಲಿ ಅವರಿಗಿಂತ ಹಿರಿಯವನಾಗಿದ್ದೇನೆ. ಆದರೂ ನಮ್ಮ ಶಾಸಕರ ಪರವಾಗಿ ನಾವು ದೃಢವಾಗಿ ನಿಂತಿದ್ದೇವೆ" ಎಂದು ಹೇಳಿದರು.

"ಎಸ್.ಟಿ. ಸೋಮಶೇಖರ್ ಅವರೊಂದಿಗೆ ನಮ್ಮ ಬಾಂಧವ್ಯ ಗಟ್ಟಿಯಾಗಿದೆ. ಅವರ ಗೆಲುವಿಗಾಗಿ ಕಾರ್ಯಕರ್ತರೆಲ್ಲರೂ ಒಗ್ಗಟ್ಟಿನಿಂದ ಕೆಲಸ ಮಾಡುತ್ತೇವೆ. ಯಾವುದೇ ಕಾರಣಕ್ಕೂ ಅವರನ್ನು ಸೋಲಲು ಅವಕಾಶ ನೀಡುವುದಿಲ್ಲ" ಎಂದು ಟ್ರಾವೆಲ್ಸ್ ಮಂಜುನಾಥ್ ಸ್ಪಷ್ಟಪಡಿಸಿದರು.
ವರದಿ :ಅಯ್ಯಣ್ಣ ಮಾಸ್ಟರ್


