ಬೆಂಗಳೂರು: ರಾಜ್ಯದಲ್ಲಿ ಹೊಸದಾಗಿ ಪ್ರಜಾ ಸೇವಾ ಇಲಾಖೆ ಸ್ಥಾಪನೆಗೆ ಅಧಿಕೃತ ಆದೇಶ ಹೊರಡಿಸಲಾಗಿದೆ. ಆಡಳಿತಾತ್ಮಕ ದಕ್ಷತೆ ಹೆಚ್ಚಿಸಲು ಪ್ರಜಾ ಸೇವಾ ಇಲಾಖೆ ಸ್ಥಾಪನೆಗೆ ಸರ್ಕಾರ ಆದೇಶ ಹೊರಡಿಸಿದೆ.
ಸಾರ್ವಜನಿಕರ ಅಹವಾಲುಗಳನ್ನು ಒಂದೇ ಸೂರಿನಡಿ ತ್ವರಿತವಾಗಿ ವಿಲೇವಾರಿ ಮಾಡಲು ಸಾರ್ವಜನಿಕ ಕುಂದು ಕೊರತೆಗಳ ಮೇಲ್ವಿಚಾರಣೆ ಆಡಳಿತತ್ಮಕ ಸುಧಾರಣೆ ಕ್ರಮ ಕೈಗೊಳ್ಳಲು ಪ್ರಜಾ ಸೇವಾ ಇಲಾಖೆ ಸ್ಥಾಪಿಸಲಾಗಿದೆ.
ಪ್ರಸ್ತಾವನೆ:
ರಾಜ್ಯ ಸರ್ಕಾರದಲ್ಲಿ ಆಡಳಿತಾತ್ಮಕ ದಕ್ಷತೆಯನ್ನು ಹೆಚ್ಚಿಸಲು ಮತ್ತು ಸಾರ್ವಜನಿಕರ ಅಹವಾಲುಗಳನ್ನು ಒಂದೇ ಸೂರಿನಡಿ ತ್ವರಿತವಾಗಿ ವಿಲೇವಾರಿ ಮಾಡಲು “ಪ್ರಜಾಸೇವಾ ಇಲಾಖೆ” ಎಂಬ ಹೊಸ ಇಲಾಖೆಯನ್ನು ಈ ಕೆಳಕಂಡ ಉದ್ದೇಶಗಳಿಗಾಗಿ ಸೃಜಿಸಲು ಸರ್ಕಾರವು ತೀರ್ಮಾನಿಸಿರುತ್ತದೆ.
I. ಸಂಯೋಜಿತ ವ್ಯವಸ್ಥೆ: ಸಾರ್ವಜನಿಕ ಕುಂದುಕೊರತೆಗಳ ಸ್ವೀಕಾರ,
ಮೇಲ್ವಿಚಾರಣೆ ಮತ್ತು ಆಡಳಿತಾತ್ಮಕ ಸುಧಾರಣಾ ಕ್ರಮಗಳನ್ನು ಒಂದು ಸಂಯೋಜಿತ (ಏಕೀಕೃತ) ಮಾದರಿಯಲ್ಲಿ ತರುವುದು.
II. ಕಾಲಮಿತಿಯೊಳಗಿನ ಪರಿಹಾರ: ‘ಜನಸ್ಪಂದನ’ ವ್ಯವಸ್ಥೆಯನ್ನು ಮತ್ತಷ್ಟು ಬಲಪಡಿಸುವುದು ಮತ್ತು ವಿವಿಧ ಇಲಾಖೆಗಳೊಂದಿಗೆ ಸಮನ್ವಯ ಸಾಧಿಸುವ ಮೂಲಕ ನಾಗರಿಕರ ಸಮಸ್ಯೆಗಳನ್ನು ನಿಗದಿತ ಕಾಲಮಿತಿಯೊಳಗೆ ಪರಿಹರಿಸುವುದು.
III. ಗುಣಮಟ್ಟದ ಮತ್ತು ನಾಗರಿಕರ ತೃಪ್ತಿದಾಯಕ ವಿಲೇವಾರಿ: ಕುಂದುಕೊರತೆ ನಿವಾರಣೆಯ ಪರಿಣಾಮಕಾರಿತನವನ್ನು ನಾಗರಿಕರ ಪ್ರತಿಕ್ರಿಯೆ (ಫೀಡ್ಬ್ಯಾಕ್) ಮತ್ತು ತೃಪ್ತಿಯ ಮಾನದಂಡಗಳ ಮೂಲಕ ಮೌಲ್ಯಮಾಪನ ಮಾಡುವುದು.
IV. ಸರ್ಕಾರಿ ಕಾರ್ಯವಿಧಾನಗಳ ಮರುವಿನ್ಯಾಸ (Government Business Process Reengineering): ವಿಳಂಬವನ್ನು ತಪ್ಪಿಸಲು ಹಾಲಿ ಇರುವ ಕಾರ್ಯವಿಧಾನಗಳನ್ನು ಸರಳೀಕರಿಸುವುದು ಮತ್ತು ಸುಧಾರಣೆಗಳನ್ನು ತರುವುದು.
V. ಉತ್ತಮ ಪದ್ಧತಿಗಳ ಅನುಷ್ಠಾನ ಹಾಗೂ ನಿರಂತರ ಕಲಿಕೆ ಮತ್ತು ನಾವೀನ್ಯತೆ.
ಮೇಲೆ ಕ್ರಮ ಸಂಖ್ಯೆ (1) ರಲ್ಲಿ ಓದಲಾದ ಸಿಆಸುಇ (ಇ-ಆಡಳಿತ)ದ ದಿನಾಂಕ:18-06-2026 ರ ಅನಧಿಕೃತ ಟಿಪ್ಪಣಿಯಲ್ಲಿ ಹೊಸದಾಗಿ ಸೃಜಿಸಲಾಗುವ ಇಲಾಖೆಗೆ ಸಿಆಸುಇ (ಇ-ಆಡಳಿತ) ಯಡಿಯಲ್ಲಿ ಬರುವ ದೂರುಗಳು ಮತ್ತು ಕುಂದುಕೊರತೆಗಳು ಎ ಮತ್ತು ಬಿ ಶಾಖೆ) ಯನ್ನು ವರ್ಗಾಯಿಸಲು ಸಹಮತಿ ನೀಡಲಾಗಿದೆ.
ಮೇಲೆ ಕ್ರಮ ಸಂಖ್ಯೆ (2) ರಲ್ಲಿ ಓದಲಾದ ದಿನಾಂಕ: 12-06-2026 ರ ಟಿಪ್ಪಣಿಯಲ್ಲಿ ರಾಜ್ಯದಲ್ಲಿ ಹೊಸದಾಗಿ ಸ್ಥಾಪಿಸುವ ಇಲಾಖೆಯ ಸಂಬಂಧ ಆಡಳಿತ ಇಲಾಖೆಯು ಸಲ್ಲಿಸಿರುವ ಕರಡು ಸಚಿವ ಸಂಪುಟ ಟಿಪ್ಪಣಿಗೆ ಆರ್ಥಿಕ ಇಲಾಖೆಯು ಸಹಮತಿಸಿದೆ.
ಮೇಲೆ ಕ್ರಮ ಸಂಖ್ಯೆ (3) ರಲ್ಲಿ ಓದಲಾದ ಸಚಿವ ಸಂಪುಟದ ದಿನಾಂಕ:20-06-2026 ರ ಪ್ರಕರಣದಲ್ಲಿ ನೂತನ “ಪ್ರಜಾಸೇವಾ ಇಲಾಖೆ’ಯನ್ನು ಸಕಾಲ ಮಿಷನ್ ನೊಂದಿಗೆ ಸ್ಥಾಪಿಸಲು ತೀರ್ಮಾನಿಸಲಾಗಿರುತ್ತದೆ.
ಈ ಉದ್ದೇಶಕ್ಕಾಗಿ, ಈ ಹೊಸ ಇಲಾಖೆಯನ್ನು ರಚಿಸಲು ಈ ಕೆಳಗಿನವುಗಳನ್ನು ವಿಲೀನಗೊಳಿಸಲಾಗಿದೆ.
1) ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ (ಆಡಳಿತ ಸುಧಾರಣೆ) ಅನುಬಂಧ-1 ರಲ್ಲಿರುವ ಹುದ್ದೆಗಳೊಂದಿಗೆ
2) ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ (ಇ-ಆಡಳಿತ) ಅಡಿಯಲ್ಲಿನ ದೂರುಗಳು ಮತ್ತು ಕುಂದುಕೊರತೆಗಳು ವಿಭಾಗದ ‘ಎ’ ಮತ್ತು ‘ಬಿ’ ಶಾಖೆಗಳು – ಅನುಬಂಧ-2 ರಲ್ಲಿರುವ ಹುದ್ದೆಗಳೊಂದಿಗೆ
3) ಸಕಾಲ ಮಿಷನ್ ಅನುಬಂಧ-3 ರಲ್ಲಿರುವ ಹುದ್ದೆಗಳೊಂದಿಗೆ
ಮೇಲೆ ವಿವರಿಸಿರುವ ಅಂಶಗಳ ಹಿನ್ನೆಲೆಯಲ್ಲಿ, ಪ್ರಸ್ತಾವನೆಯನ್ನು ಕೂಲಂಕಷವಾಗಿ ಪರಿಶೀಲಿಸಿದ ಸರ್ಕಾರವು ಈ ಕೆಳಗಿನಂತೆ ಆದೇಶಿಸಿದೆ.
ಸರ್ಕಾರದ ಆದೇಶ ಸಂಖ್ಯೆ: ಸಿಆಸುಇ 225 ಸಉಸೇ 2026, ಬೆಂಗಳೂರು, ದಿನಾಂಕ:24-06-2026.
ಪ್ರಸ್ತಾವನೆಯಲ್ಲಿ ವಿವರಿಸಿರುವ ಅಂಶಗಳ ಹಿನ್ನೆಲೆಯಲ್ಲಿ, ಸಿಆಸುಇ (ಆಡಳಿತ ಸುಧಾರಣೆ) ಯಲ್ಲಿನ ಅಧಿಕಾರಿ/ಸಿಬ್ಬಂದಿಗಳ ಸಮೇತ ಎಲ್ಲಾ ಹುದ್ದೆಗಳನ್ನು ; ಸಿಆಸುಇ (ಇ-ಆಡಳಿತ) ಅಡಿಯಲ್ಲಿನ ದೂರುಗಳು ಮತ್ತು ಕುಂದುಕೊರತೆಗಳು ವಿಭಾಗದ ‘ಎ’ ಮತ್ತು ‘ಬಿ’ ಶಾಖೆಗಳು (ಅಧಿಕಾರಿ/ಸಿಬ್ಬಂದಿಗಳ ಸಮೇತ) ಮತ್ತು ಸಕಾಲ ಮಿಷನ್ ವಿಭಾಗದ ಎಲ್ಲಾ ಹುದ್ದೆಗಳನ್ನು ಸಂಯೋಜಿಸಿ ಕರ್ನಾಟಕ ಸರ್ಕಾರ ಸಚಿವಾಲಯದಲ್ಲಿ ಹೊಸದಾಗಿ "ಪ್ರಜಾಸೇವಾ ಇಲಾಖೆ” ಯನ್ನು ಸ್ಥಾಪಿಸಿ ಆದೇಶಿಸಿದೆ.


