ಬೆಂಗಳೂರು : ಈಗಾಗಲೇ ರಹಸ್ಯವಾಗಿ ಮದುವೆಯಾಗಿದ್ದರೂ ಪಾಲಕರ ಒತ್ತಾಯದ ಮೇರೆಗೆ ಮತ್ತೊಂದು ವಿವಾಹಕ್ಕೆ ಮುಂದಾಗಿದ್ದ ಪತ್ನಿಯನ್ನು ಪತಿಯೇ ಉಸಿರುಗಟ್ಟಿಸಿ ಹತ್ಯೆ ಮಾಡಿದ್ದಾನೆ.
ಭವಾನಿ (22) ಹತ್ಯೆಗೀಡಾದವಳು. ನಗರದ ತಿಗಳರಪಾಳ್ಯದಲ್ಲಿ ಘಟನೆ ನಡೆದಿದೆ. ಭವಾನಿ ತಂದೆ ಶ್ರೀನಿವಾಸ್ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡು ಆರೋಪಿ ಚಂದ್ರಶೇಖರ್ ಅಲಿಯಾಸ್ ಚಂದನ್ನನ್ನು ಪೊಲೀಸರು ಬಂಧಿಸಿದ್ದಾರೆ.
ಭವಾನಿ ಎರಡು ವರ್ಷದಿಂದ ಮನೆ ಸಮೀಪದ ಮೊಬೈಲ್ ಅಂಗಡಿಯಲ್ಲಿ ಕೆಲಸ ಮಾಡಿಕೊಂಡಿದ್ದಳು. ಚಂದನ್ ಆಟೋದಲ್ಲಿ ಭವಾನಿ, ಮನೆಯಿಂದ ಮೊಬೈಲ್ ಅಂಗಡಿಗೆ ಕೆಲಸಕ್ಕೆ ಹೋಗುತ್ತಿದ್ದಳು. ಈ ವೇಳೆ ಇಬ್ಬರ ಪರಿಚಯವಾಗಿ, ಬಳಿಕ ಪರಸ್ಪರ ಪ್ರೀತಿಸುತ್ತಿದ್ದರು ಎಂದು ಪೊಲೀಸರು ಹೇಳಿದ್ದಾರೆ.
ಗೌಪ್ಯ ವಿವಾಹ : ಕೆಲ ತಿಂಗಳ ಹಿಂದೆಯಷ್ಟೇ ದೇವಸ್ಥಾನ ದಲ್ಲಿ ಚಂದನ್ ಮತ್ತು ಭವಾನಿ ಮದುವೆಯಾಗಿದ್ದರು.
ಆದರೆ, ಪ್ರತ್ಯೇಕವಾಗಿ ವಾಸವಾಗಿದ್ದುಕೊಂಡು ಪಾಲಕರಿಗೆ ವಿಷಯ ತಿಳಿಸದೆ ಎಂದಿನಂತೆ ಜೀವನ ನಡೆಸುತ್ತಿದ್ದರು.
ಭವಾನಿ ಯುವಕನೊಬ್ಬನನ್ನು ಪ್ರೀತಿಸುತ್ತಿದ್ದಾಳೆ ಎಂಬ ವಿಚಾರ ತಿಳಿದು ಆಕೆಯ ಮನೆಯವರು, ಬೇರೆ ಮದುವೆಗೆ ಸಿದ್ಧತೆ ನಡೆಸಿದ್ದರು. ಪಾಲಕರ ಮನವಿಗೆ ಭವಾನಿ ಕೂಡ ಒಪ್ಪಿ ಮದುವೆಯಾಗಲು ಮುಂದಾಗಿದ್ದಳು ಎನ್ನಲಾಗಿದೆ.


