ಶಿವಮೊಗ್ಗ ' ಆರೆಸೆಸ್ (RSS) ನೋಂದಣಿ ಹಾಗೂ ಲೆಕ್ಕ ಪತ್ರ ಕುರಿತು ಸಚಿವ ಪ್ರಿಯಾಂಕ್ ಖರ್ಗೆ ಹೇಳಿಕೆ ವಿಚಾರವಾಗಿ ಶಿವಮೊಗ್ಗದಲ್ಲಿ ಮಾಜಿ ಡಿಸಿಎಂ ಕೆ.ಎಸ್.ಈಶ್ವರಪ್ಪ (KS Eshwarappa) ಇಂದು ಸುದ್ದಿಗೋಷ್ಠಿ ನಡೆಸಿ ಮಾತನಾಡಿದರು.
ಪ್ರಿಯಾಂಕ್ ಖರ್ಗೆ ವಿರುದ್ದ ತೀವ್ರವಾಗಿ ಕಿಡಿ ಕಾರಿದ ಅವರು, ಭಾಗವತ್ ಅವರ ವಿದೇಶ ಪ್ರವಾಸಕ್ಕೆ ಖರ್ಗೆ ಅಪ್ಪನ ಮನೆಯಿಂದ ದುಡ್ಡು ಕೊಡ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಲೆಕ್ಕ ಮತ್ತು ನೋಂದಣಿ ಬಗ್ಗೆ ಕೇಳಲು ಇವನ್ಯಾರು ಎಂದು ಏಕವಚನದಲ್ಲಿಯೇ ದಾಳಿ ನಡೆಸಿದ ಈಶ್ವರಪ್ಪ, ಕೇವಲ ಪ್ರಚಾರಕ್ಕಾಗಿ ಅವರು ಹೀಗೆ ಮಾಡುತ್ತಿದ್ದಾರೆ.
ಪ್ರಿಯಾಂಕ್ ಖರ್ಗೆ ಅಷ್ಟೇ ಅಲ್ಲ ಅವರ ಅಪ್ಪ, ನೆಹರು, ಇಂದಿರಾ, ರಾಜೀವ್ ಹಾಗೂ ಸೋನಿಯಾ ಗಾಂಧಿ ಕೈಯಲ್ಲಿ ಆಗಲಿಲ್ಲ. ಲೆಕ್ಕ, ನೋಂದಣಿ ಕೇಳಲು ಇವನ್ಯಾರು, ಬೇಕಾದರೆ ಕಾನೂನು ಕ್ರಮ ಕೈಗೊಳ್ಳಲಿ ಎಂದು ಸವಾಲು ಹಾಕಿದರು.
ಆರೆಸೆಸ್ ಕಾರ್ಯಕರ್ತರಿಗೆ ಈ ಬಗ್ಗೆ ನೋವಾಗಿದೆ. ಇದಕ್ಕೆ ಮೋಹನ್ ಭಾಗವತ್ ಅವರಂತಹ ಹಿರಿಯರು ಉತ್ತರ ಕೊಡುವ ಅಗತ್ಯ ಇರಲಿಲ್ಲ. ಮೋಹನ್ ಭಾಗವತ್ ವಿದೇಶಕ್ಕೆ ಹೋಗುವುದು ಅವರ ಖರ್ಚಿನಲ್ಲಿ. ಪ್ರಿಯಾಂಕ್ ಖರ್ಗೆ ಅಪ್ಪನಮನೆಯಿಂದ ವಿದೇಶಕ್ಕೆ ಹೋಗಲು ದುಡ್ಡು ಕೊಡ್ತಿಲ್ಲ. ಲೆಕ್ಕ ಯಾರಿಗೆ ಕೊಡಬೇಕು ಅವರಿಗೆ ಕೊಡುತ್ತಾರೆ. ಇವರಿಗೆ ಯಾಕೆ ಲೆಕ್ಕ ಕೊಡಬೇಕು ಎಂದರು.
ದೇಶದ ಬಹುತೇಕ ರಾಜ್ಯದಲ್ಲಿ ಕಾಂಗ್ರೆಸ್ ಮೂಲೆಗೆ ಸೇರಿದೆ. ಕರ್ನಾಟಕದಲ್ಲೂ ಅದೇ ಪರಿಸ್ಥಿತಿ ಆಗಲಿದೆ. ಗ್ಯಾರಂಟಿ ಬಗ್ಗೆ ಸರ್ಕಾರ ಗೊಂದಲ ಮೂಡಿಸುತ್ತಿದೆ.
ಸರ್ಕಾರದ ಬಗ್ಗೆಯೇ ಗ್ಯಾರಂಟಿ ಇಲ್ಲ. ಸರ್ಕಾರದ ಬಳಿ ದುಡ್ಡಿಲ್ಲ ಹಾಗಾಗಿ ಹೊಸದಾಗಿ ಅರ್ಜಿ ಹಾಕಲು ಹೇಳುತ್ತಿದೆ ಎಂದು ಈಶ್ವರಪ್ಪ ರಾಜ್ಯ ಸರ್ಕಾರದ ವಿರುದ್ದವೂ ಹೇಳಿಕೆ ನೀಡಿದರು.


