ರಾಮದುರ್ಗ : ಬೆಳಗಾವಿ ಜಿಲ್ಲೆ ರಾಮದುರ್ಗ ಪಟ್ಟಣದ ಮಿನಿ ವಿಧಾನಸೌಧ ಎದುರುಗಡೆ ಇರುವ ಕುದುರೆ ಬೈಲ್ ಮೈದಾನದಲ್ಲಿ ಸರ್ಕಾರ್ ಬಾಯ್ಸ್ ರವರ ವತಿಯಿಂದ ರಾಮದುರ್ಗ ಪ್ರಿಮಿಯರ್ ಲೀಗ್ ಕ್ರಿಕೆಟ್ ಟೂರ್ನಮೆಂಟ್ ಅನ್ನು ಹಮ್ಮಿಕೊಳ್ಳಲಾಗಿತ್ತು. 8 ಕ್ಕೂ ಅಧಿಕ ತಂಡಗಳು ಈ ಟೂರ್ನಮೆಂಟ್ ನಲ್ಲಿ ಪಾಲ್ಗೊಂಡಿದ್ದವು.
ಸರ್ಕಾರದ ಮುಖ್ಯ ಸಚೇತಕ ಹಾಗೂ ರಾಮದುರ್ಗ ಶಾಸಕ, ಅಶೋಕ ಪಟ್ಟಣ ಅವರು ಮೈದಾನಕ್ಕೆ ಆಗಮಿಸಿ ರಾಮದುರ್ಗ ಪ್ರಿಮಿಯರ್ ಲೀಗ್ ನ ಫೈನಲ್ ಪಂದ್ಯವನ್ನು ಉದ್ಘಾಟಿಸಿ ಪಂದ್ಯವನ್ನು ವೀಕ್ಷಿಸಿದರು,ನಂತರ ಫೈನಲ್ ವಿಜೇತ KKR ತಂಡಕ್ಕೆ ಬಹುಮಾನವನ್ನು ವಿತರಿಸಿದರು.
ಈ ಸಂದರ್ಭದಲ್ಲಿ ಮಾಧ್ಯಮ ದವರೊಂದಿಗೆ ಮಾತನಾಡಿದ ಶಾಸಕರು “ ನಮ್ಮ ರಾಮದುರ್ಗ ಪಟ್ಟಣದಲ್ಲಿ ಇಂತಹ ಟೂರ್ನಮೆಂಟ್ ಗಳು ನಡೆಯುತ್ತಿರುವುದು ಖುಷಿಯ ವಿಚಾರ. ನನ್ನ ನೆಚ್ಚಿನ ಆಟ ಫುಟ್ಬಾಲ್ ಆಗಿದ್ದರೂ ಕೂಡ ಇವತ್ತು ಕ್ರಿಕೆಟ್ ಟೂರ್ನಮೆಂಟ್ ಅನ್ನು ನೋಡಿ ಖುಷಿ ಆಯಿತು. ಪಾಲ್ಗೊಂಡಿದ್ದ ಎಲ್ಲಾ ತಂಡಗಳು ಚೆನ್ನಾಗಿ ಆಡುವ ಮೂಲಕ ಉತ್ತಮ ಪ್ರದರ್ಶನ ನೀಡಿದ್ದಾರೆ.
ಇನ್ನ ಮೇಲೆ ಪ್ರತಿ ವರ್ಷವೂ ಕೂಡ ಇದೇ ರೀತಿ ಟೂರ್ನಮೆಂಟ್ ಗಳನ್ನು ಏರ್ಪಡಿಸಲು ನಾನು ಯೋಚಿಸುತ್ತಿದ್ದೇನೆ. ಪ್ರತಿವರ್ಷ ಇಂತಹ ಪಂದ್ಯಾವಳಿಗಳನ್ನು ಆಯೋಜಿಸುವ ಮೂಲಕ ಕ್ರಿಡೆಗೆ ಹಾಗೂ ಆಟಗಾರರಿಗೆ ಪ್ರೋತ್ಸಾಹ ನೀಡಲು ನಿರ್ಧರಿಸಿದ್ದೇನೆ ಎಂದು ತಿಳಿಸಿದರು.
ಸದ್ಯ ರಾಮದುರ್ಗ ಪಟ್ಟಣದಲ್ಲಿ ಕ್ರೀಡಾಂಗಣದ ಕೊರತೆಯಿದೆ. ಶೀಘ್ರದಲ್ಲೇ ಶಿವನ ಮೂರ್ತಿ ಹತ್ತಿರ ಜಾಗವನ್ನು ನೋಡಿ ಆದಷ್ಟು ಬೇಗ ಕ್ರೀಡಾಂಗಣವನ್ನು ನಿರ್ಮಿಸಲಾಗುವುದೆಂದು ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಕಾಂಗ್ರೆಸ್ ಮುಖಂಡ ಮುನ್ನಾ ಖತೀಬ್, ಎಸ್ಸಿ ಘಟಕದ ಅಧ್ಯಕ್ಷ ಚಿದಾನಂದ ದೊಡಮಣಿ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
ವರದಿ : ಮಂಜುನಾಥ ಕಲಾದಗಿ

