ಬೆಳಗಾವಿ :ರಾಜ್ಯ ರಾಜಕಾರಣದಲ್ಲಿ ನಾಯಕತ್ವ ಬದಲಾವಣೆಯ ಕುರಿತು ಒಳಗೊಳಗೇ ಚರ್ಚೆಗಳು ನಡೆಯುತ್ತಿರುವ ಬೆನ್ನಲ್ಲೇ, ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರನ್ನು 'ಮುಂದಿನ ಮುಖ್ಯಮಂತ್ರಿ' ಎಂದು ಬಿಂಬಿಸುವ ಬ್ಯಾನರ್ ಸಂಸ್ಕೃತಿ ಈಗ ರಾಜಧಾನಿ ಬೆಂಗಳೂರಿನಿಂದ ಕುಂದಾನಗರಿ ಬೆಳಗಾವಿಗೂ ವಿಸ್ತರಿಸಿದೆ.
ಎರಡು ದಿನಗಳ ಹಿಂದಷ್ಟೇ ಬೆಂಗಳೂರಿನ ಕೆಪಿಸಿಸಿ ಕಚೇರಿಯ ಮುಂಭಾಗದಲ್ಲಿ ಡಿ.ಕೆ. ಶಿವಕುಮಾರ್ ಅಭಿಮಾನಿಗಳು ಇಂತಹದ್ದೇ ಬ್ಯಾನರ್ ಹಾಕಿ ಗಮನ ಸೆಳೆದಿದ್ದಾರೆ.
ಇದೀಗ ಬೆಳಗಾವಿ ನಗರದ ಪ್ರಮುಖ ವೃತ್ತಗಳಲ್ಲೂ ಡಿ.ಕೆ.ಶಿ ಮುಂದಿನ ಸಿಎಂ ಎಂಬ ಪೋಸ್ಟರ್ಗಳು ರಾರಾಜಿಸುತ್ತಿರುವುದು ತೀವ್ರ ಕುತೂಹಲ ಮೂಡಿಸಿದೆ.
ವಿಶೇಷವೆಂದರೆ, ಈ ಬ್ಯಾನರ್ಗಳನ್ನು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಅವರ ಪುತ್ರ ಮೃಣಾಲ್ ಹೆಬ್ಬಾಳ್ಕರ್ ಅವರು ಅಳವಡಿಸಿದ್ದಾರೆ.
ಡಿ.ಕೆ. ಶಿವಕುಮಾರ್ ಅವರ ಹುಟ್ಟುಹಬ್ಬದ ಹಿನ್ನೆಲೆಯಲ್ಲಿ ಈ ಬ್ಯಾನರ್ಗಳನ್ನು ಹಾಕಲಾಗಿದ್ದು, ಅದರಲ್ಲಿ "ಕರ್ನಾಟಕದ ಮುಂದಿನ ಮುಖ್ಯಮಂತ್ರಿ, ಡಿಸಿಎಂ ಡಿ.ಕೆ. ಶಿವಕುಮಾರ್ ಅವರಿಗೆ ಹುಟ್ಟುಹಬ್ಬದ ಹಾರ್ದಿಕ ಶುಭಾಶಯಗಳು" ಎಂದು ಬರೆಯಲಾಗಿದೆ. ಬೆಳಗಾವಿಯ ಬಹುತೇಕ ಪ್ರಮುಖ ಸರ್ಕಲ್ಗಳಲ್ಲಿ ಮೃಣಾಲ್ ಹೆಬ್ಬಾಳ್ಕರ್ ಅವರ ಹೆಸರಿನಲ್ಲೇ ಈ ಬ್ಯಾನರ್ಗಳು ಪ್ರತ್ಯಕ್ಷವಾಗಿವೆ.


