ಭಾಲ್ಕಿ, : ಸೋಮವತಿ ಅಮಾವಾಸ್ಯೆಯ ಪವಿತ್ರ ಸಂದರ್ಭದಲ್ಲಿ ಬೀದರ್ ಜಿಲ್ಲೆಯ ಭಾಲ್ಕಿ ತಾಲೂಕಿನ ಖಾನಾಪುರದಲ್ಲಿರುವ ದಕ್ಷಿಣ ಕಾಶಿಯೆಂದು ಪ್ರಸಿದ್ಧಿ ಪಡೆದ ಶ್ರೀ ಮೈಲಾರ ಮಲ್ಲಣ್ಣ ದೇವಸ್ಥಾನದಲ್ಲಿ ಸೋಮವಾರ ರಾತ್ರಿ ಭವ್ಯ ಪಲ್ಲಕ್ಕಿ ಉತ್ಸವ ಭಕ್ತಿಭಾವದಿಂದ ನೆರವೇರಿತು. ಏಳುಕೋಟಿ ಭಕ್ತರ ಆರಾಧ್ಯ ದೈವವೆಂದು ಪೂಜಿಸಲ್ಪಡುವ ಶ್ರೀ ಮೈಲಾರ ಮಲ್ಲಣ್ಣನ ದರ್ಶನಕ್ಕಾಗಿ ಸಾವಿರಾರು ಭಕ್ತರು ದೇವಸ್ಥಾನಕ್ಕೆ ಆಗಮಿಸಿ ವಿಶೇಷ ಪೂಜೆ ಹಾಗೂ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸಿದರು. ಅಲಂಕೃತ ಪಲ್ಲಕ್ಕಿಯಲ್ಲಿ ವಿರಾಜಮಾನರಾದ ಮಲ್ಲಣ್ಣನ ಉತ್ಸವ ಮೂರ್ತಿಯನ್ನು ದೇವಸ್ಥಾನದ ಆವರಣದಲ್ಲಿ ಮೆರವಣಿಗೆ ನಡೆಸಲಾಯಿತು.


ಪಲ್ಲಕ್ಕಿ ಉತ್ಸವದ ವೇಳೆ ಭಕ್ತರು ಜಯಘೋಷಗಳನ್ನು ಮೊಳಗಿಸಿ ತಮ್ಮ ಭಕ್ತಿಭಾವವನ್ನು ವ್ಯಕ್ತಪಡಿಸಿದರು. ತಾಳ, ಮದ್ದಲೆ ಹಾಗೂ ಮಂಗಳವಾದ್ಯಗಳ ನಿನಾದದ ನಡುವೆ ನಡೆದ ಉತ್ಸವವು ಧಾರ್ಮಿಕ ಸಂಭ್ರಮಕ್ಕೆ ಮತ್ತಷ್ಟು ಮೆರುಗು ನೀಡಿತು. ದೇವಾಲಯದ ಆವರಣ ದೀಪಾಲಂಕಾರದಿಂದ ಕಂಗೊಳಿಸಿದ್ದು, ಭಜನೆ, ಕೀರ್ತನೆ ಹಾಗೂ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಭಕ್ತರನ್ನು ಆಕರ್ಷಿಸಿದವು.
ಈ ಸಂದರ್ಭದಲ್ಲಿ ಭಕ್ತರು ದೇವರ ದಿವ್ಯ ದರ್ಶನ ಪಡೆದು ಕುಟುಂಬದ ಸುಖ, ಶಾಂತಿ ಮತ್ತು ಸಮೃದ್ಧಿಗಾಗಿ ಪ್ರಾರ್ಥನೆ ಸಲ್ಲಿಸಿದರು. ದೇವರ ಮೇಲಿನ ಅಚಲ ನಂಬಿಕೆ ಮತ್ತು ಭಕ್ತರ ಅಪಾರ ಶ್ರದ್ಧೆಯು ಉತ್ಸವದ ಪ್ರಮುಖ ಆಕರ್ಷಣೆಯಾಗಿ ಕಂಡುಬಂದಿತು. ಪಲ್ಲಕ್ಕಿ ಉತ್ಸವದ ಸುಂದರ ದೃಶ್ಯಗಳು ಹಾಗೂ ಆಧ್ಯಾತ್ಮಿಕ ವಾತಾವರಣವು ಭಕ್ತರ ಮನದಲ್ಲಿ ವಿಶೇಷ ಅನುಭೂತಿಯನ್ನು ಮೂಡಿಸಿದ್ದು, ಈ ಪವಿತ್ರ ರಾತ್ರಿಯ ನೆನಪುಗಳು ಚಿರಸ್ಥಾಯಿಯಾಗಿ ಉಳಿಯುವಂತಾಯಿತು. ಭಕ್ತರು “ಏಳುಕೋಟಿ ಭಕ್ತರ ಆರಾಧ್ಯ ದೈವ ಶ್ರೀ ಮೈಲಾರ ಮಲ್ಲಣ್ಣನ ಕೃಪಾಕಟಾಕ್ಷವು ಸದಾ ಸರ್ವರ ಮೇಲಿರಲಿ” ಎಂದು ಪ್ರಾರ್ಥಿಸಿದರು.


ವರದಿ : ಸಂತೋಷ ಬಿಜಿ ಪಾಟೀಲ


