ಜಿರಳೆ ಪಕ್ಷ ಅಥವಾ ಕಾಕ್ರೋಚ್ ಜನತಾ ಪಾರ್ಟಿ ಸದ್ಯ ಸಾಮಾಜಿಕ ಜಾಲತಾಣದಲ್ಲಿ ಧೂಳೆಬ್ಬಿಸುತ್ತಿದೆ.
ನೇಪಾಳದಲ್ಲಿ ಸರ್ಕಾರದ ವಿರುದ್ಧ ಅಲ್ಲಿನ ಜೆನ್ಝೀಗಳು ರಸ್ತೆಗಿಳಿದು ಪ್ರತಿಭಟನೆ ನಡೆಸಿ ಹಲವು ವರ್ಷಗಳ ಕಾಲ ತಮ್ಮನ್ನು ಆಳಿದ್ದವರನ್ನೇ ತಪ್ಪು ಎಂದು ಸಾರಿ ಹೇಳಿದ್ದರು.
ಅದೇ ರೀತಿ ಭಾರತದಲ್ಲಿ ರಸ್ತೆಗಿಳಿದು ಹಿಂಸಾತ್ಮಕ ಪ್ರತಿಭಟನೆ ನಡೆಸದಿದ್ದರೂ ಗಾಂಧಿ ತತ್ವ ಪಾಲಿಸಿರುವ ಜೆನ್ ಝೀಗಳು ಸೈಲೆಂಟ್ ಆಗಿಯೇ ತಮ್ಮ ವಿರುದ್ಧ ನಾಲಿಗೆ ಹರಬಿಟ್ಟವರ ವಿರುದ್ಧ ಉಗ್ರ ಹೋರಾಟ ಮಾಡಿದ್ದರೆ.
ಸುಪ್ರೀಂನ ವಕೀಲರೊಬ್ಬರು ಹಿರಿಯ ವಕೀಲನಾಗಲು ಸಲ್ಲಿಸಿದ್ದ ಅರ್ಜಿಯನ್ನು ಪರಿಶೀಲಿಸಿದ್ದ ಸುಪ್ರೀಂ ನ್ಯಾಯಮೂರ್ತಿ ಸೂರ್ಯ ಕಾಂತ್ ಆತ ಅನುರಿಸಿದ್ದ ಮಾರ್ಗದ ವಿರುದ್ಧ ಆಕ್ಷೇಪ ವ್ಯಕ್ತಪಡಿಸಿದ್ದರು.
ಅಲ್ಲದೇ ‘ಕೆಲವು ಯುವಕರು ಜಿರಳೆಗಳು ಇದ್ದಂತೆ. ಯಾವುದೇ ಉದ್ಯೋಗ ಪಡೆದುಕೊಳ್ಳಲಾಗದೇ ಅಥವಾ ಕೆಲಸದಲ್ಲಿ ಸರಿಯಾದ ಸ್ಥಾನ ಪಡೆದುಕೊಳ್ಳಲಾಗದೇ ವಿಫಲರಾಗುತ್ತಾರೆ.
ಅಂಥಹ ಯುವಕರು ತಾವೇ ಮಾಧ್ಯಮಗಳಾಗಿ, ಸಾಮಾಜಿಕ ಮಾಧ್ಯಮಗಳಾಗಿ, ಮಾಹಿತಿ ಹಕ್ಕು ಕಾರ್ಯಕರ್ತರಾಗಿ ಸಮಾಜದ ಮೇಲೆ ದಾಳಿ ಮಾಡಲು ಆರಂಭಿಸುತ್ತಾರೆ’ ಎಂದು ಹೇಳಿಕೆ ನೀಡಿದ್ದರು.
ಈ ಹೇಳಿಕೆ ಭಾರತದ ಯುವ ಜನತೆ ಕಿವಿಗೆ ಬೀಳುತ್ತಿದ್ದಂತೆ ರೊಚ್ಚಿಗೆದ್ದರು. 30 ವರ್ಷದ ಅಭಿಜಿತ್ ದಿಪ್ಕೆ ಎನ್ನುವವರು ಕಾಕ್ರೋಚ್ ಜನತಾ ಪಾರ್ಟಿಯನ್ನು ಆರಂಭಿಸಿದರು.
ಸಾಮಾಜಿಕ ಜಾಲತಾಣದಲ್ಲಿ ಈ ಪಾರ್ಟಿಯ ಖಾತೆ ಮೇ 16ರಂದು ಆರಂಭವಾಗುತ್ತಿದ್ದಂತೆ ಅಬ್ಬರಿಸಿದ ಭಾರತದ ಯುವ ಜನತೆ ದೊಡ್ಡ ಮಟ್ಟದಲ್ಲಿ ಖಾತೆಯನ್ನು ಅನುಸರಿಸಲು ಆರಂಭಿಸಿದ್ದಾರೆ.
ಖಾತೆಯನ್ನು ನಿರ್ವಹಿಸಲು ದೊಡ್ಡ ದೊಡ್ಡ ಎಸಿ ಇರುವ ಆಫೀಸ್ ಇಲ್ಲದೇ, ನೂರಾರು ಕೆಲಸಗಾರರಿಲ್ಲದೇ ಆರಂಭವಾದ ಕಾಕ್ರೋಚ್ ಜನತಾ ಪಾರ್ಟಿ ಖಾತೆಗೆ ಕೇವಲ 4 ದಿನಗಳಲ್ಲಿ ಬರೋಬ್ಬರಿ 9.6 ಮಿಲಿಯನ್ ಫಾಲೋವರ್ಸ್ ( ಮೇ 21ರ ಬೆಳಗ್ಗೆ 7 ಗಂಟೆ ಸಮಯಕ್ಕೆ ) ಬಂದಿದ್ದಾರೆ.
ಈ ಮೂಲಕ ದೇಶದ ಅತಿಹೆಚ್ಚು ರಾಜ್ಯಗಳಲ್ಲಿ ಗೆದ್ದು ಬಲಿಷ್ಠ ಪಕ್ಷ ಎನಿಸಿಕೊಂಡಿರುವ ಭಾರತೀಯ ಜನತಾ ಪಾರ್ಟಿಯನ್ನು ಕಾಕ್ರೋಚ್ ಜನತಾ ಪಾರ್ಟಿ ಹಿಂದಿಕ್ಕಿದೆ. ಬಿಜೆಪಿಯ ಮುಖ್ಯ ಖಾತೆಗೆ 8.8 ಮಿಲಿಯನ್ ಹಿಂಬಾಲಕರಿದ್ದಾರೆ.


