ತುರುವೇಕೆರೆ : ನಿರುದ್ಯೋಗ ಸಮಸ್ಯೆ ಪರಿಹರಿಸಲು ನಾಗಮಂಗಲ, ತುರುವೇಕೆರೆ ತಾಲ್ಲೂಕಿನ ಮಧ್ಯೆ ಕೇಂದ್ರ ಸರ್ಕಾರದಿಂದ ಬೃಹತ್ ಕೈಗಾರಿಕೆ ಸ್ಥಾಪಿಸಬೇಕೆಂಬ ಆಶಯ ನನ್ನದಾಗಿದ್ದು, ರಾಜ್ಯ ಕಾಂಗ್ರೆಸ್ ಸರ್ಕಾರ ಸ್ಪಂದಿಸುತ್ತಿಲ್ಲ ಎಂದು ಕೇಂದ್ರ ಬೃಹತ್ ಉಕ್ಕು ಮತ್ತು ಕೈಗಾರಿಕಾ ಸಚಿವ ಹೆಚ್.ಡಿ.ಕುಮಾರಸ್ವಾಮಿ ಬೇಸರ ವ್ಯಕ್ತಪಡಿಸಿದರು.
ತಾಲೂಕಿನ ಮಾಯಸಂದ್ರ ಹೋಬಳಿ ಕೋಡಿನಾಗಸಂದ್ರ ಟಿ.ಬಿ.ಕ್ರಾಸ್ ವೃತ್ತದಲ್ಲಿರುವ ಶ್ರೀ ವಿನಾಯಕ ಮಾರುತಿ ದೇವರ ಪ್ರತಿಷ್ಟಾಪನೆ, ವಿಮಾನಗೋಪುರ, ಕಳಸ ಸ್ಥಾಪನೆ ಹಾಗೂ ಶ್ರೀ ಮಾರುತಿ ಸ್ವಾಮಿಯವರ 31 ಅಡಿ ಎತ್ತರದ ಪ್ರತಿಮೆ ಅನಾವರಣದ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಕೇಂದ್ರ ಸರ್ಕಾರದ ಎ.ಆರ್.ಐ. ಸಂಸ್ಥೆಯು ಕೈಗಾರಿಕೆ ಸ್ಥಾಪಿಸಲು ಉದ್ದೇಶಿಸಿ ಬೆಳ್ಳೂರು ಕ್ರಾಸ್ ಬಳಿ ಭೂಮಿ ನೀಡುವಂತೆ ರಾಜ್ಯ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದೆ. ಆದರೆ ರಾಜ್ಯ ಸರ್ಕಾರ ಸ್ಪಂದಿಸುತ್ತಿಲ್ಲ. ಇದರಿಂದ ಸುಮಾರು 20-25 ಸಾವಿರ ನಿರುದ್ಯೋಗಿ ಯುವಕ-ಯುವತಿಯರಿಗೆ ಉದ್ಯೋಗ ದೊರೆಕಿಸಿಕೊಡಬೇಕೆನ್ನುವ ನನ್ನ ಕನಸು ಈಡೇರುತ್ತಿಲ್ಲ. ರಾಜ್ಯ ಸರ್ಕಾರ ಭೂಮಿ ನೀಡಿದರೆ ಶೀಘ್ರ ಕೈಗಾರಿಕೆ ಸ್ಥಾಪಿಸಿ, ಈ ಎರಡೂ ಜಿಲ್ಲೆಗಳ ವಿದ್ಯಾವಂತ ಯುವಕರಿಗೆ ಉದ್ಯೋಗ ಒದಗಿಸುತ್ತೇವೆ ಎಂದರು.
1994 ರ ಚುನಾವಣಾ ಪ್ರಚಾರದ ವೇಳೆಯೇ ತುರುವೇಕೆರೆ ಕ್ಷೇತ್ರದ ಪರಿಚಯವಿದೆ. ಕ್ಷೇತ್ರದ ಜನತೆ ದೇವೇಗೌಡರ ಮೇಲಿಟ್ಟಿರುವ ಅಭಿಮಾನ ಪ್ರೀತಿಯನ್ನೂ ನನ್ನ ಮೇಲೆಯೂ ತೋರಿಸುತ್ತಾ ಬಂದಿದ್ದೀರಿ. ನಿಮ್ಮ ಈ ಪ್ರೀತಿಯನ್ನು ನನ್ನ ಕೊನೆ ಉಸಿರು ಇರುವವರೆಗೂ ಮರೆಯುವುದಿಲ್ಲ. ದೇವೇಗೌಡರು ಬದುಕಿದ್ದಾಗಲೇ ರೈತಪರವಾದ ಸರ್ಕಾರವನ್ನು ಅಧಿಕಾರಕ್ಕೆ ತರಬೇಕೆಂಬ ಆಶಯ ನನ್ನದಾಗಿದ್ದು, ಅದಕ್ಕೆ ನೀವು ಶಕ್ತಿ ತುಂಬಬೇಕೆಂದ ಅವರು, ದೇವಾಲಯದಲ್ಲಿರುವ ದೇವರು ಕಲ್ಲಿನದ್ದಾದರೆ, ನನ್ನ ಪಾಲಿಗೆ ನೀವೇ ನಿಜವಾದ ದೇವರುಗಳು. ಭಗವಂತ ಹಾಗೂ ನಿಮ್ಮ ಆರ್ಶೀವಾದದ ಬಲದಿಂದ ಐದು ಬಾರಿ ಸಾವನ್ನು ಗೆದ್ದು ಬಂದಿದ್ದೇನೆ. ನಿಮ್ಮ ಸೇವೆ ಮಾಡಲೆಂದೇ ಭಗವಂತ ನನ್ನನ್ನು ಇನ್ನೂ ಬದುಕಿಸಿದ್ದಾನೆ ಎಂದರು.
ತುರುವೇಕೆರೆ ಕ್ಷೇತ್ರ ಜೆಡಿಎಸ್ ಪಕ್ಷದ ಭದ್ರಕೋಟೆಯಾಗಿದೆ. ಜೆಡಿಎಸ್ ಪಕ್ಷದ ಕಷ್ಟಕಾಲದಲ್ಲೂ ಕ್ಷೇತ್ರದ ಜನತೆ ಕೈಹಿಡಿದು ಆರ್ಶೀವದಿಸಿದ್ದೀರಿ. 25 ವರ್ಷಗಳಿಂದ ಪಕ್ಷದ ಮೇಲೆ ಹಾಲಿ ಶಾಸಕ ಎಂ.ಟಿ.ಕೃಷ್ಣಪ್ಪ ಇಟ್ಟಿರುವ ನಿಷ್ಠೆ ಹಾಗೂ ನಿಯತ್ತನ್ನು ಕಂಡಿದ್ದೇನೆ. ಆದ್ದರಿಂದ ಪಕ್ಷದಲ್ಲಿ ಯಾವುದೇ ಗುಂಪುಗಾರಿಕೆ, ಬಣ ಬಡಿದಾಟಕ್ಕೆ ಅವಕಾಶ ನೀಡುವುದಿಲ್ಲ. ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಪಕ್ಷದ ಟಿಕೆಟ್ ಬಗ್ಗೆಯೂ ಕಾರ್ಯಕರ್ತರಿಗೆ ಗೊಂದಲ ಬೇಡ. ನನಗೆ ಎಲ್ಲಾ ಕ್ಷೇತ್ರವೂ ಬಹಳ ಮುಖ್ಯ ಎಂದು ಕ್ಷೇತ್ರದಲ್ಲಿ ಪಕ್ಷದಲ್ಲಿ ಎದ್ದಿರುವ ಬಣ ಬಡಿದಾಟ, ಗೊಂದಲಕ್ಕೆ ತೆರೆ ಎಳೆದರು.
ತುಮಕೂರು ಜಿಲ್ಲೆಗೆ 25 ಟಿಎಂಸಿ ಹೇಮಾವತಿ ನೀರು ಹರಿಯಲು ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರು ಪ್ರಮುಖ ಕಾರಣ. ಹೆಚ್.ಡಿ. ದೇವೇಗೌಡರು ಲೋಕಸಭಾ ಚುನಾವಣೆಯಲ್ಲಿ ಗೆದ್ದರೆ ಹೇಮಾವತಿ ನೀರನ್ನು ಹಾಸನಕ್ಕೆ ಹೆಚ್ಚು ಕೊಂಡೊಯ್ದು ತುಮಕೂರಿಗೆ ಅನ್ಯಾಯ ಮಾಡುತ್ತಾರೆ ಎಂದು ಅಪಪ್ರಚಾರ ಮಾಡಿ ಚುನಾವಣೆಯಲ್ಲಿ ಅವರನ್ನು ಸೋಲಿಸಿದರು. ರೈತರ ಬಗ್ಗೆ ದೇವೇಗೌಡರು ಇಟ್ಟಿರುವ ಪ್ರೀತಿ, ಕಾಳಜಿ ಈ ಭಾಗದ ಜನರಿಗೆ ಗೊತ್ತಿದೆ, ಆ ಕಾರಣದಿಂದಲೇ ಚುನಾವಣೆಯಲ್ಲಿ ತುರುವೇಕೆರೆ ಕ್ಷೇತ್ರದ ಜನತೆ ದೇವೇಗೌಡರಿಗೆ ಹೆಚ್ಚು ಮತವನ್ನು ನೀಡಿ ಜೆಡಿಎಸ್ ಪರವಾಗಿ ನಿಂತರು ಎಂದರು.
ಶಾಸಕ ಎಂ.ಟಿ.ಕೃಷ್ಣಪ್ಪ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮದಲ್ಲಿ ಚಿಕ್ಕನಾಯಕನಹಳ್ಳಿ ಶಾಸಕ ಸುರೇಶ್ ಬಾಬು, ಮಾಜಿ ಶಾಸಕ ತಿಮ್ಮರಾಯಪ್ಪ, ಜೆಡಿಎಸ್ ಜಿಲ್ಲಾಧ್ಯಕ್ಷ ನಿಂಗಪ್ಪ, ಶಿರಾ ಕ್ಷೇತ್ರದ ಉಗ್ರೇಶ್, ತುಮುಲ್ ನಿರ್ದೇಶಕ ಮಹಲಿಂಗಯ್ಯ, ರಾಜ್ಯ ಜೆಡಿಎಸ್ ಯುವ ಘಟಕದ ಪ್ರಧಾನ ಕಾರ್ಯದರ್ಶಿ ದೊಡ್ಡಾಘಟ್ಟ ಚಂದ್ರೇಶ್, ಎಐಸಿಸಿ ಸದಸ್ಯ ಸುಬ್ರಮಣಿ ಶ್ರೀಕಂಠೇಗೌಡ, ತಾಪಂ ಮಾಜಿ ಅಧ್ಯಕ್ಷ ರಮೇಶ್ ಗೌಡ, ಶ್ರೀ ವಿನಾಯಕ ಮಾರುತಿ ದೇವಾಲಯ ಸಮಿತಿ ಅಧ್ಯಕ್ಷ ಎನ್. ಲೋಕೇಶ್, ಕಾರ್ಯದರ್ಶಿ ಜಿ.ಡಿ.ಗಂಗಾಧರಯ್ಯ, ಉಪಾಧ್ಯಕ್ಷ ರಘು, ಹನುಮಂತರಾಜು, ಖಜಾಂಚಿ ಚಂದ್ರಶೇಖರಯ್ಯ, ಸದಸ್ಯರಾದ ನಂಜುಂಡಯ್ಯ, ಮಂಜುನಾಥ್, ನಾಗೇಶ್, ಸ್ವಾಮಿ, ಶಿವಣ್ಣ, ಲೋಕೇಶ್, ಶಿವಣ್ಣ, ರಾಮಚಂದ್ರ, ಗ್ರಾಪಂ ಮಾಜಿ ಸದಸ್ಯ ಮುರುಳಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ವರದಿ: ಗಿರೀಶ್ ಕೆ ಭಟ್


