ಪ್ರೇಮವೆಂಬ ಅಂಧಾಭಿಮಾನ, ಮದುವೆಯಾಗಬೇಕಿದ್ದ ಭಾವಿ ಪತಿಯನ್ನೇ ಕಂದಕಕ್ಕೆ ತಳ್ಳಿ ಬಲಿಪಡೆದಿದೆ ಮಹಾರಾಷ್ಟ್ರದ ಲೋನಾವಾಲಾ ಸಮೀಪದ ಪ್ರಸಿದ್ಧ ಲೋಹಗಢ ಕೋಟೆಯಲ್ಲಿ (Lohagad Fort) ಜೂನ್ 18 ರಂದು ನಡೆದಿದ್ದ 26 ವರ್ಷದ ಯುವ ರಿಯಲ್ ಎಸ್ಟೇಟ್ ಉದ್ಯಮಿ ಕೇತನ್ ವಿಶಾಲ್ ಅಗರ್ವಾಲ್ ಅವರ ನಿಗೂಢ ಸಾವು, ಇದೀಗ ಕೊಲೆ ಪ್ರಕರಣವಾಗಿ ಬದಲಾಗಿದೆ.
ಆರಂಭದಲ್ಲಿ ಆಯತಪ್ಪಿ ಬಿದ್ದು ಸತ್ತಿದ್ದಾನೆ ಎಂದು ನಂಬಿಸಿ ನಾಟಕವಾಡಿದ್ದ ಕೇತನ್ನ ಭಾವಿ ಪತ್ನಿ ಸಿಯಾ ಗೋಯಲ್ ಮತ್ತು ಆಕೆಯ ಸೀಕ್ರೆಟ್ ಪ್ರಿಯಕರ ಚೇತನ್ ಚೌಧರಿಯನ್ನು ಪುಣೆ ಗ್ರಾಮಾಂತರ ಪೊಲೀಸರು ಕೊಲೆ ಆರೋಪದ ಮೇಲೆ ಅರೆಸ್ಟ್ ಮಾಡಿದ್ದಾರೆ.
ಬರ್ತ್ಡೇ ಸಂಭ್ರಮದ ಹೆಸರಲ್ಲಿ ಕರೆಯೊಯ್ದು ಕಂದಕಕ್ಕೆ ತಳ್ಳಿದರು
ಘಟನೆಯ ಕರಾಳ ಹಿನ್ನೆಲೆ ಹೀಗಿದೆ: ಜೂನ್ 19 ರಂದು ಸಿಯಾ ಗೋಯಲ್ ಹುಟ್ಟುಹಬ್ಬವಿತ್ತು. ಇದರ ಮುನ್ನಾದಿನ ಅಂದರೆ ಜೂನ್ 18 ರಂದು ಬೆಳಗ್ಗೆ, ತನ್ನ ಬರ್ತ್ಡೇ ಆಚರಣೆ ಹಾಗೂ ಪ್ರಿ-ವೆಡ್ಡಿಂಗ್ ಫೋಟೋಶೂಟ್ಗಾಗಿ ಕೇತನ್ನನ್ನು ಪ್ರೀತಿಯ ನಾಟಕವಾಡಿ ಸಿಯಾ ಲೋಹಗಢ ಕೋಟೆಗೆ ಟ್ರೆಕ್ಕಿಂಗ್ ಕರೆತಂದಿದ್ದಳು.
ಕೋಟೆಯ ತುದಿಯಲ್ಲಿ ಬೆಳಗ್ಗೆ 10:30ರ ಸುಮಾರಿಗೆ ಫೋಟೋ ತೆಗೆದುಕೊಳ್ಳುವಾಗ ತೀವ್ರ ಗಾಳಿಗೆ ಕೇತನ್ ಆಯತಪ್ಪಿ 400 ಅಡಿ ಆಳದ ಕಂದಕಕ್ಕೆ ಬಿದ್ದು ಸಾವನ್ನಪ್ಪಿದ್ದಾರೆ ಎಂದು ಸಿಯಾ ಕಥೆ ಕಟ್ಟಿದ್ದಳು.
ಪೊಲೀಸರು ಕೂಡ ಮೊದಲಿಗೆ ಇದನ್ನು ಆಕಸ್ಮಿಕ ಸಾವು (Accidental Death) ಎಂದೇ ಕೇಸ್ ದಾಖಲಿಸಿಕೊಂಡಿದ್ದರು.


