ಸಿರುಗುಪ್ಪ : ತಾಲೂಕಿನ ರಾರಾವಿ ಗ್ರಾಮದಲ್ಲಿ ಪ್ರತಿವರ್ಷ ಭಾರತ ಹುಣ್ಣಿಮೆಯಂದು ಜರುಗುವ ಶ್ರೀ ಹುತ್ತಿನ ಯಲ್ಲಮ್ಮ ದೇವಿಯ ರಥೋತ್ಸವ ಅದ್ದೂರಿಯಾಗಿ ಜರುಗಿತು.
ಜಾತ್ರಾ ನಿಮಿತ್ತ ದೇವಸ್ಥಾನದಲ್ಲಿ ಶ್ರೀದೇವಿಗೆ ವಿವಿಧ ಫಲಪುಷ್ಪಗಳು, ಆಭರಣಗಳಿಂದ ಅಲಂಕರಿಸಿ ಮಹಾಮಂಗಳಾರತಿ ಸಲ್ಲಿಸಿ ಪೂಜೆ ಸಲ್ಲಿಸಲಾಗಿತು. ಭಕ್ತರಿಗೆ ವಿಶೇಷ ದರ್ಶನ ವ್ಯವಸ್ಥೆಯನ್ನು ಕಲ್ಪಿಸಲಾಗಿತ್ತು.
ರಾರಾವಿ ಹಾಗೂ ಇನ್ನಿತರ ಗ್ರಾಮಗಳಿಂದ ಆಗಮಿಸಿದ ಭಕ್ತರು ಶ್ರೀ ಹುತ್ತಿನ ಯಲ್ಲಮ್ಮ ದೇವಿಗೆ ಹರಕೆ ಕುಂಭ ಹೊತ್ತು ದೇವಿಗೆ ನೈವೇದ್ಯ ಸಮರ್ಪಿಸಿದರು.
ಅಲ್ಲದೇ ದೇವಸ್ಥಾನದ ಆಡಳಿತ ಮಂಡಳಿಯಿಂದ ಸುಮಂಗಲೆಯರಿಗೆ ಸಾಮೂಹಿಕ ಉಡಿತುಂಬುವ ಕಾರ್ಯವನ್ನು ನೆರವೇರಿಸಲಾಯಿತು.
ಪಲ್ಲಕ್ಕಿ ಸೇವೆ ಇನ್ನಿತರ ಧಾರ್ಮಿಕ ಕಾರ್ಯಕ್ರಮಗಳು ಜರುಗಿದ್ದು, ದೇವಸ್ಥಾನವು ಬಾಳೆಕಂಬ, ಮಾವಿನ ತೋರಣಗಳಿಂದ, ವಿದ್ಯುತ್ ದೀಪಗಳಿಂದ ಝಗಮಗಿಸುತ್ತಿತ್ತು.
ಭಕ್ತರು ವಿವಿಧ ವಾದ್ಯಗಳ ಮೂಲಕ ಬೃಹತ್ ಹೂವಿನ ಹಾರಗಳನ್ನು ಮೆರವಣಿಗೆ ಮೂಲಕ ತಂದು ರಥಕ್ಕೆ ಅರ್ಪಿಸುತ್ತಿರುವ ದೃಶ್ಯ ಕಂಡುಬಂದಿತು.
ಈ ಭಾಗದ ಜನಪದ ಜಾತ್ರೆಯೆಂದೇ ಪ್ರಖ್ಯಾತಿ ಹೊಂದಿರುವ ರಾರಾವಿಯ ಜಾತ್ರೆಯಲ್ಲಿ ಮೂರು ದಿನಗಳ ಕಾಲ ನಡೆಯುವ ರಾಸು(ಎತ್ತು)ಗಳ ಪ್ರದರ್ಶನ ಹಾಗೂ ಮಾರಾಟ ಸುಪ್ರಸಿದ್ದವಾಗಿದ್ದು, ಕೃಷಿಯ ಪರಿಕರಗಳ ಮಾರಾಟವಾಗುತ್ತವೆ.
ಎತ್ತುಗಳ ಮಾರಾಟ ಮತ್ತು ಖರೀದಿಗಾಗಿ ಬಳ್ಳಾರಿ, ರಾಯಚೂರು, ಕೊಪ್ಪಳ ಹಾಗೂ ನೆರೆಯ ಸೀಮಾಂದ್ರ ಪ್ರದೇಶದ ಸಹಸ್ರಾರು ರೈತರು ಪರ್ಷೆಯಲ್ಲಿ ಭಾಗವಹಿಸುತ್ತಾರೆ.
ಸಾಯಂಕಾಲ ಜರುಗಿದ ರಥೋತ್ಸವವದಲ್ಲಿ ಸುತ್ತಮುತ್ತಲಿನ ಗ್ರಾಮಗಳಾದ ತೊಂಡೆಹಾಳ್, ರಾಂಪುರ, ಕುರುವಳ್ಳಿ, ನಾಗಲಾಪುರ, ಕರ್ಚಿಗನೂರು, ಚಾಣಕ್ಯನೂರು, ಗಜಗಿನಹಾಳ್, ಬಗ್ಗೂರು, ಶಾಲಿಗನೂರು, ಕೆ.ಸೂಗೂರು, ಬಂಡ್ರಾಳ್, ಸೇರಿದಂತೆ ಇನ್ನಿತರ ಸಹಸ್ರಾರು ಭಾಗವಹಿಸಿ ಹೂಹಣ್ಣು, ಎಸೆದು ಭಕ್ತಿಯಿಂದ ನಮಿಸಿದರು.
ವರದಿ : ಶ್ರೀನಿವಾಸ ನಾಯ್ಕ