Join The Telegram | Join The WhatsApp |
ಬೆಂಗಳೂರು: ರಾಜ್ಯದ ಪರಂಪರೆ, ಕಲೆ, ಸಂಸ್ಕೃತಿ, ಎಂಜಿನಿಯರಿಂಗ್, ಆವಿಷ್ಕಾರ, ಸೃಜನಶೀಲತೆಯನ್ನು ಪರಸ್ಪರ ಸಂಯೋಜಿಸಬೇಕು. ಈ ಸಂಯೋಜನೆಯೇ ಬ್ರ್ಯಾಂಡ್ ಬೆಂಗಳೂರಿನ ವಿನ್ಯಾಸಗಳಾಗಬೇಕು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.
ಬೆಂಗಳೂರು ವಿನ್ಯಾಸಕಾರರ ಸಮುದಾಯ, ಜೈನ್ ವಿನ್ಯಾಸ ಶಾಲೆಯ ಸಹಯೋಗದಲ್ಲಿ ಬುಧವಾರ ಆಯೋಜಿಸಿದ್ದ ‘ಭವಿಷ್ಯದ ವಿನ್ಯಾಸ’ ಸಮ್ಮೇಳನ ಉದ್ಘಾಟಿಸಿ ಅವರು ಮಾತನಾಡಿದರು. ನಾವಿನ್ಯತೆಯ ಸಾಧಕರು, ಅವರು ಬಿಂಬಿಸುವ ನಾವಿನ್ಯತಾ ಅನುಭವ ವಸ್ತು ಸಂಗ್ರಹಾಲಯವನ್ನು (ಇನ್ನೋವೇಷನ್ ಎಕ್ಸ್ಪೀರಿಯನ್ಸ್ಮ್ಯೂಸಿಯಂ) ಎನ್ಜಿಇಎಫ್ ಕಾರ್ಖಾನೆ ವೃಕ್ಷೋದ್ಯಾನದ ಆವರಣದಲ್ಲಿ ಸ್ಥಾಪಿಸಲಾಗುವುದು. ಎಲ್ಲ ನಾವಿನ್ಯತೆ, ಆವಿಷ್ಕಾರಗಳ ಕುರಿತು ಮಾಹಿತಿ ನೀಡುವ ಅಂತರರಾಷ್ಟ್ರೀಯ ಮ್ಯೂಸಿಯಂ ರೀತಿ ಅಭಿವೃದ್ಧಿಪಡಿಸಲಾಗುವುದು. ಇದರಿಂದ ವಿದೇಶಿ ಪ್ರವಾಸೋದ್ಯಮಕ್ಕೂ ಪ್ರೋತ್ಸಾಹ ದೊರೆಯಲಿದೆ. ಯುವ ಆವಿಷ್ಕಾರ ನಿರತರು, ವಿನ್ಯಾಸಕಾರರಿಗೂ ಸ್ಫೂರ್ತಿಯಾಗಲಿದೆ ಎಂದು ವಿವರಿಸಿದರು. ಬೆಂಗಳೂರಿನಲ್ಲಿ 400 ಸಂಶೋಧನೆ ಮತ್ತು ಅಭಿವೃದ್ಧಿ(ಆರ್ ಅಂಡ್ ಡಿ) ಕೇಂದ್ರಗಳಿವೆ. ವಿದೇಶಿ ಬಂಡವಾಳ ಹೂಡಿಕೆಯಲ್ಲಿ ಕರ್ನಾಟಕ ಮುಂಚೂಣಿಯಲ್ಲಿದೆ. ಅಭಿವೃದ್ಧಿಗೆ ಬಹಳ ಅವಕಾಶಗಳಿವೆ. ಬೆಂಗಳೂರಿನ ಅಭಿವೃದ್ಧಿಗೆ ಕೊಡುಗೆ ನೀಡುವಂತಹ ಸಕಾರಾತ್ಮಕತೆಎಲ್ಲರಲ್ಲೂ ಇರಬೇಕು.
ಬೆಂಗಳೂರಿನ ಎಂ.ಜಿ. ರಸ್ತೆ, ಕಮರ್ಷಿಯಲ್ ಸ್ಟ್ರೀಟ್, ಬ್ರಿಗೇಡ್ ರಸ್ತೆ, ಮಲ್ಲೇಶ್ವರಂ,ಇಂದಿರಾನಗರದಂತಹ ಪ್ರದೇಶಗಳನ್ನು ಜನರಿಗೆ ಅನುಕೂಲವಾಗುವ, ಪರಂಪರೆ ಉಳಿಸುವ ರೀತಿ ಮರುವಿನ್ಯಾಸಗೊಳಿಸಬೇಕು. ಕೆರೆಗಳ ವಿನ್ಯಾಸ ಬದಲಿಸಬೇಕು ಎಂದು ಕೋರಿದರು. ಐಟಿ, ಬಿಟಿ ಸಚಿವ ಡಾ.ಸಿ.ಎನ್.ಅಶ್ವತ್ಥ ನಾರಾಯಣ, ವಿನ್ಯಾಸ ಉದ್ಯಮವು ಬೆಂಗಳೂರು ನಗರದಲ್ಲಿ ಜಾಗತಿಕ ಗುಣಮಟ್ಟದೊಂದಿಗೆ ಬೇರೂರಬೇಕು. ವಿನ್ಯಾಸ ಕಲಿಕೆಯನ್ನು ಎನ್ಇಪಿ ಪಠ್ಯಕ್ರಮದ ಭಾಗವಾಗಿಸಲು ಚಿಂತಿಸಲಾಗುತ್ತಿದೆ ಎಂದರು.
ಲೋಕೋಪಯೋಗಿ ಸಚಿವ ಸಿ.ಸಿ. ಪಾಟೀಲ, ಸ್ಟಾರ್ಟಪ್ ವಿಷನ್ ಗ್ರೂಪ್ ಮುಖ್ಯಸ್ಥ ಪ್ರಶಾಂತ್ ಪ್ರಕಾಶ್, ಅಂತರರಾಷ್ಟ್ರೀಯ ಕೌಶಲ್ಯಾಭಿವೃದ್ಧಿ ಸಮಿತಿ ಮುಖ್ಯಸ್ಥ ಟಾಮ್ ಜೋಸೆಫ್, ಗೀತಾ ನಾಯರ್ ಉಪಸ್ಥಿತರಿದ್ದರು. ಎಂಟು ನಗರ ಕೇಂದ್ರಗಳ ನಿರ್ಮಾಣ ಬೆಂಗಳೂರಿನಲ್ಲಿ ಎಂಟುದಿಕ್ಕಿನಲ್ಲೂ ಎಂಟು ನಗರ ಕೇಂದ್ರಗಳ ನಿರ್ಮಾಣಕ್ಕೆ ರೂಪುರೇಷೆ ಸಿದ್ಧಪಡಿಸಲು ಅಧಿಕಾರಿಗಳಿಗೆ ಸೂಚಿಸಲಾಗಿದೆ. ಪ್ರತಿ ನಗರ ಕೇಂದ್ರಗಳಿಗೂ ಪೂರಕವಾಗಿ ರಸ್ತೆ, ರೈಲು ಅಭಿವೃದ್ಧಿಗೊಳಿಸಬಹುದು. ಈ ಯೋಜನೆಗೆ ಬೇಕಾದ ಸಲಹೆಗಳನ್ನು ವಿನ್ಯಾಸಕಾರರು ಒದಗಿಸಬೇಕು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.
Join The Telegram | Join The WhatsApp |