ತುರುವೇಕೆರೆ: ಸ್ಥಳೀಯ ಪಟ್ಟಣ ಪಂಚಾಯ್ತಿಯ ನೂತನ ಅಧ್ಯಕ್ಷರಾಗಿ ಜೆಡಿಎಸ್ನ ಸ್ವಪ್ನ ನಟೇಶ್ ಅವಿರೋಧವಾಗಿ ಆಯ್ಕೆಯಾದರು.
ಈ ಹಿಂದೆ ಅಧ್ಯಕ್ಷರಾಗಿದ್ದ ಬಿಜೆಪಿಯ ಆಶಾರಾಣಿ ರಾಜಶೇಖರ್ ಅವರ ರಾಜೀನಾಮೆಯಿಂದ ತೆರವಾಗಿದ್ದ ಅಧ್ಯಕ್ಷ ಸ್ಥಾನದಲ್ಲಿ ಪಪಂ ಉಪಾಧ್ಯಕ್ಷರಾಗಿದ್ದ ಕೆ.ಭಾಗ್ಯ ಅವರು ಪ್ರಭಾರ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದರು. ಇದೀನ ನೂತನ ಅಧ್ಯಕ್ಷರ ಆಯ್ಕೆಗೆ ಇಂದು ಚುನಾವಣೆ ನಡೆಯಿತು. ಚುನಾವಣೆಯಲ್ಲಿ ಜೆಡಿಎಸ್ ಪಕ್ಷದಿಂದ ಜಯಗಳಿಸಿದ್ದ 8 ನೇ ವಾರ್ಡಿನ ಸದಸ್ಯೆ ಸ್ನಪ್ನ ನಟೇಶ್ ನಾಮಪತ್ರ ಸಲ್ಲಿಸಿದ್ದರು. ಅಧ್ಯಕ್ಷ ಸ್ಥಾನಕ್ಕೆ ಏಕೈಕ ನಾಮಪತ್ರ ಸಲ್ಲಿಕೆಯಾದ ಕಾರಣ ಪಟ್ಟಣ ಪಂಚಾಯ್ತಿಯ ನೂತನ ಅಧ್ಯಕ್ಷರಾಗಿ ಸ್ವಪ್ನನಟೇಶ್ ಅವಿರೋಧವಾಗಿ ಆಯ್ಕೆಯಾಗಿದ್ದಾರೆಂದು ಚುನಾವಣಾಧಿಕಾರಿ, ತಹಸೀಲ್ದಾರ್ ಕುಂಞ ಅಹಮದ್ ಘೋಷಿಸಿದರು.
ಪಟ್ಟಣ ಪಂಚಾಯ್ತಿ ಅಧ್ಯಕ್ಷ ಸ್ಥಾನ ಸಾಮಾನ್ಯ ಮಹಿಳೆಗೆ ಮೀಸಲಾಗಿತ್ತು. ನಾಮಪತ್ರ ಸಲ್ಲಿಕೆ ವೇಳೆ ಅಧ್ಯಕ್ಷ ಸ್ಥಾನಕ್ಕೆ 8 ನೇ ವಾರ್ಡಿನ ಸದಸ್ಯೆ ಸ್ನಪ್ನ ನಟೇಶ್ ತಮ್ಮ ಉಮೇದುವಾರಿಕೆ ಸಲ್ಲಿಸಿದರು. ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿರುವ ಸ್ವಪ್ನನಟೇಶ್ ಅವರಿಗೆ ಸೂಚಕರಾಗಿ 10 ನೇ ವಾರ್ಡ್ ಸದಸ್ಯ ಕಾಂಗ್ರೆಸ್ ನ ಟಿ.ಪಿ.ಮಹೇಶ್ (ಯಜಮಾನ್), ಅನುಮೋದಕರಾಗಿ ಸದಸ್ಯ ಬಿಜೆಪಿಯ ಅಂಜನ್ ಕುಮಾರ್ ಸಹಿ ಹಾಕಿದರು.
ಚುನಾವಣಾ ಪ್ರಕ್ರಿಯೆಗಳ ಬಗ್ಗೆ ತಹಸೀಲ್ದಾರ್, ಚುನಾವಣಾಧಿಕಾರಿ ಕುಂ.ಞ. ಅಹಮದ್ ಮಾತನಾಡಿ, ಅಧ್ಯಕ್ಷ ಸ್ಥಾನಕ್ಕೆ ಒಂದೇ ನಾಮಪತ್ರ ಸಲ್ಲಿಕೆಯಾಗಿದ್ದ ಕಾರಣ ಪಟ್ಟಣ ಪಂಚಾಯ್ತಿಯ ನೂತನ ಅಧ್ಯಕ್ಷರಾಗಿ ಸ್ವಪ್ನನಟೇಶ್ ಅವಿರೋಧವಾಗಿ ಆಯ್ಕೆಯಾಗಿದ್ದಾರೆಂದು ಘೋಷಿಸಿ, ಪಟ್ಟಣದ ಸರ್ವತೋಮುಖ ಅಭಿವೃದ್ದಿಗೆ ನೂತನ ಅಧ್ಯಕ್ಷರು ಸರ್ವ ಸದಸ್ಯರ ಸಹಕಾರದೊಂದಿಗೆ ಶ್ರಮಿಸಲಿ ಎಂದು ಹೇಳಿದರು. ಚುನಾವಣಾ ಪ್ರಕ್ರಿಯೆಯಲ್ಲಿ ಪಪಂ ಮುಖ್ಯಾಧಿಕಾರಿ ಶ್ರೀನಾಥ್ ಬಾಬು, ಚುನಾವಣಾ ಶಾಖೆಯ ಕಾಂತರಾಜು ಹಾಗೂ ಎಲ್ಲಾ ಸದಸ್ಯರು ಉಪಸ್ಥಿತರಿದ್ದರು. ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆ ಘೋಷಣೆಯಾಗುತ್ತಿದ್ದಂತೆ ಅಭಿಮಾನಿಗಳು, ಬೆಂಬಲಿಗರು ಪಟಾಕಿ ಸಿಡಿಸಿ ಸಿಹಿ ಹಂಚಿ ಸಂಭ್ರಮಿಸಿದರು.
ನೂತನ ಅಧ್ಯಕ್ಷೆ ಸ್ವಪ್ನನಟೇಶ್ ಮಾತನಾಡಿ, ಪಟ್ಟಣ ಪಂಚಾಯ್ತಿ ಅಧ್ಯಕ್ಷಳಾಗಿ ಅವಿರೋಧವಾಗಿ ಆಯ್ಕೆಯಾಗಲು ಸಹಕಾರ ನೀಡಿದ ಮಾಜಿ ಶಾಸಕ ಮಸಾಲಾ ಜಯರಾಮ್ ಹಾಗೂ ಪಟ್ಟಣ ಪಂಚಾಯ್ತಿಯ ಎಲ್ಲಾ ಸದಸ್ಯರಿಗೆ ಹಾಗೂ 8 ನೇ ವಾರ್ಡಿನ ಎಲ್ಲಾ ಮತದಾರರಿಗೆ ಅಭಿನಂದನೆಗಳನ್ನು ಸಲ್ಲಿಸುವುದಾಗಿ ತಿಳಿಸಿದರು.
ನನ್ನ ತಂದೆಯವರು ನಮ್ಮ ತಾಯಿಯನ್ನು ಪಟ್ಟಣ ಪಂಚಾಯ್ತಿ ಚುನಾವಣೆಗೆ ನಿಲ್ಲಿಸುವ ಸಾಕಷ್ಟು ಪ್ರಯತ್ನ ಮಾಡಿದ್ದರು. ಇಂದು ನಾನು ಪಟ್ಟಣ ಪಂಚಾಯ್ತಿ ಅಧ್ಯಕ್ಷ ಸ್ಥಾನ ಅಲಂಕರಿಸುವ ಮೂಲಕ ನನ್ನ ತಂದೆ ಗುಡ್ಡೇನಹಳ್ಳಿ ಮಹಲಿಂಗಯ್ಯನವರ ಕನಸನ್ನು ನನಸು ಮಾಡಿದ ಸಂತೋಷ ನನಗಿದೆ ಎಂದ ಅವರು, ಪಟ್ಟಣ ಪಂಚಾಯ್ತಿಯ ಎಲ್ಲಾ ಸದಸ್ಯರ ಹಾಗೂ ಅಧಿಕಾರಿ ವರ್ಗದವರ ಸಹಕಾರದೊಂದಿಗೆ ಪಟ್ಟಣಕ್ಕೆ ಅಗತ್ಯ ಮೂಲಸೌಕರ್ಯ ಒದಗಿಸುವ ನಿಟ್ಟಿನಲ್ಲಿ ಪ್ರಾಮಾಣಿಕವಾಗಿ ನನ್ನ ಕರ್ತವ್ಯ ನಿಭಾಯಿಸುತ್ತೇನೆಂದರು.
ಪಪಂ ನೂತನ ಅಧ್ಯಕ್ಷೆ ಸ್ವಪ್ನನಟೇಶ್ ಅವರನ್ನು ಮಾಜಿ ಶಾಸಕ ಹೆಚ್.ಬಿ.ನಂಜೇಗೌಡ, ಪಪಂ ಉಪಾಧ್ಯಕ್ಷೆ ಕೆ.ಭಾಗ್ಯ, ಪಪಂ ಸದಸ್ಯರಾದ ಟಿ.ಪಿ.ಮಹೇಶ್ (ಯಜಮಾನ್), ಅಂಜನ್ ಕುಮಾರ್, ಆರ್.ಮಧು, ಎನ್.ಆರ್.ಸುರೇಶ್, ಚಿದಾನಂದ್, ನದೀಮ್ ಅಹಮದ್, ಪ್ರಭಾಕರ್, ಕೆ.ರವಿ, ಆಶಾರಾಣಿ, ಜಯಮ್ಮ, ಶೀಲಾ, ಮೇಘನಾ, ರುದ್ರೇಶ್ ಸೇರಿದಂತೆ ನೂರಾರು ಅಭಿಮಾನಿಗಳು, ಹಿತೈಷಿಗಳು ಪುಷ್ಪಗುಚ್ಛ ಅರ್ಪಿಸಿ ಅಭಿನಂದಿಸಿದರು.
ವರದಿ: ಗಿರೀಶ್ ಕೆ ಭಟ್