ಉತ್ತರ ಕನ್ನಡ : ಕಾರು ಮತ್ತು ಲಾರಿ ನಡುವೆ ಭೀಕರ ಅಪಘಾತ ಸಂಭವಿಸಿದ್ದು, ಒಂದೇ ಕುಟುಂಬದ ಮೂವರು ಮೃತಪಟ್ಟಿರುವ ಘಟನೆ ಯಲ್ಲಾಪುರ ತಾಲೂಕಿನ ಅರಬೈಲ್ ಬಳಿ ಇಂದು ನಡೆದಿದೆ.
ಪತಿ ಶ್ರೀಕಾಂತ್ ರೆಡ್ಡಿ (37) ಪತ್ನಿ ಚೈತ್ರಾ (31) ಹಾಗೂ ಏಳು ತಿಂಗಳು ಮಗು ಶ್ರೀಹಾನ್ ಅಪಘಾತದಲ್ಲಿ ದಾರುಣ ಸಾವನ್ನಪ್ಪಿದ್ದಾರೆ.
ಸ್ಥಳದಲ್ಲಿ ಪತ್ನಿ ಚೈತ್ರಾ ಹಾಗೂ ಮಗು ಮೃತಪಟ್ಟಿದ್ದು, ಪತಿ ಶ್ರೀಕಾಂತ್ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಿಸದೇ ಅಸುನೀಗಿದ್ದಾರೆ.
ಕೊಪ್ಪಳದಿಂದ ಪ್ರವಾಸಕ್ಕೆಂದು ಅಂಕೋಲಾ ಕಡೆಗೆ ಕುಟುಂಬ ಹೊರಟಿತ್ತು. ಈ ವೇಳೆ ಅರಬೈಲ್ ಬಳಿ ಓವರ್ಟೇಕ್ ಮಾಡುವ ಭರದಲ್ಲಿ ವೇಗವಾಗಿ ಬಂದ ಲಾರಿ ಕಾರಿಗೆ ಗುದ್ದಿದೆ. ಲಾರಿ ಗುದ್ದಿದ ರಭಸಕ್ಕೆ ಕಾರು ನಜ್ಜುಗುಜ್ಜಾಗಿದೆ. ಅಪಘಾತ ಸಂಬಂಧ ಯಲ್ಲಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.