ಚಿಕ್ಕೋಡಿ:- ಬೆಳಗಾವಿ ಜಿಲ್ಲೆಯ ಗಡಿಭಾಗದಲ್ಲಿ ಜನರಿಗೆ ಸೂಕ್ತ ವೈದ್ಯಕೀಯ ಸೌಲಭ್ಯ ಸಿಗದೇ ನೆರೆಯ ಮಹಾರಾಷ್ಟ್ರದ ಮಿರಜ್ ಸಾಂಗಲಿಗೆ ಹೋಗಬೇಕಾದ ಸ್ಥಿತಿ ಬಂದಿದೆ
ಇದನ್ನು ತಪ್ಪಿಸುವ ನಿಟ್ಟಿನಲ್ಲಿ ಕಳೆದ ಏಳು ವರ್ಷಗಳ ಹಿಂದೆ ಆಸ್ಪತ್ರೆಯೊಂದರ ಕಟ್ಟಡ ಕಾಮಗಾರಿಗೆ ಚಾಲನೆ ನೀಡಲಾಗಿತ್ತು.
ಆದರೆ ಕಾಮಗಾರಿಗೆ ಚಾಲನೆ ನೀಡಿದ ಬಳಿಕ ಏಳು ವರ್ಷಗಳ ಕಾಲ ಕುಂಟುತ್ತಾ ಸಾಗಿದ ಕಟ್ಟಡ ಕಾಮಗಾರಿ ಈಗ ಬಹುತೇಕ ಪೂರ್ಣಗೊಂಡಿದೆ.
ಆದರೆ ಈವರೆಗೂ ಉದ್ಘಾಟನಾ ಭಾಗ್ಯ ಮಾತ್ರ ಕಂಡಿಲ್ಲ ಅಷ್ಟಕ್ಕೂ ಯಾವುದು ಆ ಆಸ್ಪತ್ರೆ ಈ ಭಾಗದ ಜನರು ಹೇಳೋದೇನು? ಅಧಿಕಾರಿಗಳು ಹೇಳೋದೇನು? ಈ ಸ್ಟೋರಿ ನೋಡಿ….
ಬೆಳಗಾವಿ ಜಿಲ್ಲೆ ಚಿಕ್ಕೋಡಿಯ ಬಾಣಂತಿ ಕೋಡಿ ರಸ್ತೆಯಲ್ಲಿ ನಿರ್ಮಾಣವಾಗಿರುವ ಈ ತಾಯಿ ಮತ್ತು ಮಕ್ಕಳ ಆಸ್ಪತ್ರೆಯ ಕಾಮಗಾರಿ ಆರಂಭವಾಗಿ ಏಳು ವರ್ಷಗಳೇ ಕಳೆದಿವೆ.
ಏಳು ವರ್ಷಗಳ ವಿಳಂಬ ಕಾಮಗಾರಿಯಿಂದ ಈಗ ಬಹುತೇಕ ಪೂರ್ಣಗೊಂಡ ಈ ಆಸ್ಪತ್ರೆ ಜನರ ಉಪಯೋಗಕ್ಕೆ ಲಭ್ಯ ಯಾವಾಗ ಎಂಬ ಪ್ರಶ್ನೆ ಈ ಭಾಗದ ಜನ ಮಾಡುತ್ತಿದ್ದಾರೆ.
ಬೆಳಗಾವಿ ಜಿಲ್ಲೆ ಚಿಕ್ಕೋಡಿ ಉಪವಿಭಾಗದಲ್ಲಿ ಸೂಕ್ತ ಸರ್ಕಾರಿ ಆಸ್ಪತ್ರೆಗಳಿಲ್ಲದೇ ಜನರು ಮಹಾರಾಷ್ಟ್ರದ ಮಿರಜ್ ಸಾಂಗಲಿಯ ಖಾಸಗಿ ಆಸ್ಪತ್ರೆಗಳ ಮೊರೆ ಹೋಗುತ್ತಿದ್ದಾರೆ.
ಇದನ್ನ ತಪ್ಪಿಸುವ ನಿಟ್ಟಿನಲ್ಲಿ ಚಿಕ್ಕೋಡಿಯಲ್ಲಿ ಸುಸಜ್ಜಿತ ತಾಯಿ ಮತ್ತು ಮಕ್ಕಳ ಆಸ್ಪತ್ರೆ ನಿರ್ಮಾಣ ಮಾಡುವಂತೆ ಸಾಕಷ್ಟು ಆಗ್ರಹ ಕೇಳಿ ಬಂದಿತ್ತು. ಎಂಎಲ್ಸಿ ಪ್ರಕಾಶ್ ಹುಕ್ಕೇರಿ ಸತತ ಪ್ರಯತ್ನದಿಂದ ನೂರು ಬೆಡ್ಗಳ ತಾಯಿ ಮತ್ತು ಮಕ್ಕಳ ಆಸ್ಪತ್ರೆಯನ್ನು ಚಿಕ್ಕೋಡಿಗೆ ಮಂಜೂರು ಮಾಡಿಸಿಕೊಂಡು ಬಂದಿದ್ದರು.
2015ರಲ್ಲಿ ಕಟ್ಟಡ ಕಾಮಗಾರಿ ಅರಂಭಗೊಂಡಿದೆ ಅಂದರೆ ಬರೋಬ್ಬರಿ ಕಟ್ಟಡ ಕಾಮಗಾರಿ ಆರಂಭಗೊಂಡು ಏಳು ವರ್ಷಗಳೇ ಕಳೆದರೂ ಇನ್ನೂ ಮಾತ್ರ ಉದ್ಘಾಟನೆ ಭಾಗ್ಯ ಕಂಡಿಲ್ಲ.
ಚಿಕ್ಕೋಡಿಯಲ್ಲಿ ಇರುವಂತಹ ಸಾರ್ವಜನಿಕ ಆಸ್ಪತ್ರೆಯಂತೂ ಶಿಥಿಲಾವ್ಯಸ್ಥೆಗೆ ತಲುಪಿದ್ದು ಮಳೆಗಾಲದಲ್ಲಿ ಆಸ್ಪತ್ರೆಯಲ್ಲಿ ಬಕೆಟ್, ಬುಟ್ಟಿಗಳನ್ನು ಇಡುವಂತಹ ಪರಿಸ್ಥಿತಿ ಇದೆ.
ಆದಷ್ಟು ಬೇಗ ಆಸ್ಪತ್ರೆ ಲೋಕಾರ್ಪಣೆ ಮಾಡಬೇಕು ಇಲ್ಲವಾದ್ರೆ ತಾಲೂಕು ಆರೋಗ್ಯಾಧಿಕಾರಿ, ಜಿಲ್ಲಾ ಆರೋಗ್ಯಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸುವುದಾಗಿ ಸಾಮಾಜಿಕ ಕಾರ್ಯಕರ್ತ ಚಂದ್ರಕಾಂತ ಹುಕ್ಕೇರಿ ಎಚ್ಚರಿಕೆ ನೀಡಿದ್ದಾರೆ.
ಇನ್ನು ಕಟ್ಟಡ ಕಾಮಗಾರಿ ವಿಳಂಬವಾಗಿದ್ದಕ್ಕೆ ಖುದ್ದು ಎಂಎಲ್ಸಿ ಪ್ರಕಾಶ್ ಹುಕ್ಕೇರಿಯವರೇ ಬಹಿರಂಗ ವೇದಿಕೆಗಳಲ್ಲಿ ಸಾಕಷ್ಟು ಬಾರಿ ಅಸಮಾಧಾನ ಹೊರಹಾಕಿದ್ದಾರೆ.
ಕಟ್ಟಡ ಕಾಮಗಾರಿ ಜವಾಬ್ದಾರಿ ನೋಡಿಕೊಳ್ಳುವ ಕರ್ನಾಟಕ ಆರೋಗ್ಯ ವ್ಯವಸ್ಥೆ ಅಭಿವೃದ್ಧಿ ಮತ್ತು ಸುಧಾರಣೆ ಯೋಜನೆ ಅಧಿಕಾರಿಗಳು 20 ಕ್ಕೂ ಹೆಚ್ಚು ಬಾರಿ ಗುತ್ತಿಗೆದಾರನಿಗೆ ನೋಟಿಸ್ ನೀಡಿದ್ದರೂ ಯಾವುದೇ ಪ್ರಯೋಜನ ಆಗಿಲ್ವಂತೆ.
ಇನ್ನು ಈ ಕುರಿತು ಮಾತನಾಡಿರುವ ಚಿಕ್ಕೋಡಿ ಸಾರ್ವಜನಿಕ ಆಸ್ಪತ್ರೆಯ ಮುಖ್ಯ ವೈದ್ಯಾಧಿಕಾರಿ ಡಾ.ಸಂತೋಷ್ ಕೊಣ್ಣೂರಿ, ಸಾರ್ವಜನಿಕ ಆಸ್ಪತ್ರೆ ಚಿಕ್ಕೋಡಿಯಿಂದ ಹೊಸದಾಗಿ ತಾಯಿ ಮತ್ತು ಮಕ್ಕಳ ಆಸ್ಪತ್ರೆ ಕಟ್ಟಡ ಕಾಮಗಾರಿ 2015 ರಿಂದ ಆರಂಭವಾಗಿದ್ದು ಈವರೆಗೂ ಪೂರ್ಣಗೊಂಡಿಲ್ಲ ಕೋವಿಡ್ ಹಿನ್ನೆಲೆ ವಿಳಂಬವಾಗಿತ್ತು.
ಬಳಿಕ ಮತ್ತೆ ಕಟ್ಟಡ ಕಾಮಗಾರಿ ಶುರುವಾಯಿತು. ಇನ್ನೊಂದು ತಿಂಗಳಲ್ಲಿ ಆಸ್ಪತ್ರೆ ಉದ್ಘಾಟನೆ ಮಾಡುವ ಚಿಂತನೆ ಇದೆ. ಕಟ್ಟಡ ಕಾಮಗಾರಿ ಮುಗಿದಿದೆ ಇಂಟಿರಿಯರ್ ವರ್ಕ್ ನಡೆದಿದೆ.
ಈಗಾಗಲೇ ಶೇಕಡ 80ರಷ್ಟು ವೈದ್ಯಕೀಯ ಉಪಕರಣಗಳು ಸಹ ಬಂದಿವೆ ಆಸ್ಪತ್ರೆಗೆ ಬೇಕಾದಂತಹ ವೈದ್ಯಕೀಯ ಸಿಬ್ಬಂದಿ ಸಹ ನೇಮಕ ಮಾಡಿಕೊಳ್ಳಲಾಗಿದೆ ಸ್ತ್ರೀರೋಗ ತಜ್ಞ, ಅರವಳಿಕೆ ತಜ್ಞ ನೇಮಕಗೊಂಡಿದ್ದಾರೆ ಮಕ್ಕಳ ತಜ್ಞ ನೇಮಕವಾಗಬೇಕಿದೆ.
ವೈದ್ಯಕೀಯ ಉಪಕರಣಗಳು ಬಂದು ಈಗಾಗಲೇ ಆರು ತಿಂಗಳು ಕಳೆದಿವೆ ಹೈಟೆಕ್ ಶಸ್ತ್ರಚಿಕಿತ್ಸಾ ಘಟಕ, ಲಿಫ್ಟ್ ಈ ಎರಡು ಕೆಲಸ ಆಗಬೇಕಿದೆ.
ಅದೇನೇ ಇರಲಿ ಇನ್ನಾದರೂ ಸರ್ಕಾರ ಎಚ್ಚೆತ್ತುಕೊಂಡು ಶೀಘ್ರವೇ ಈ ಆಸ್ಪತ್ರೆಯನ್ನು ಸಾರ್ವಜನಿಕರ ಅನುಕೂಲಕ್ಕೆ ಲೋಕಾರ್ಪಣೆ ಮಾಡಲಿ ಎಂಬುದು ಈ ಭಾಗದ ಜನರ ಆಗ್ರಹ.
ವರದಿ :-ರಾಜು ಮುಂಡೆ