Ad imageAd image

ವಕ್ಫ್ ತಿದ್ದುಪಡಿ ಪ್ರಶ್ನಿಸಿ ಸುಪ್ರೀಂ ಕೋರ್ಟ್ ಗೆ 10 ಅರ್ಜಿ : ಇಂದು ವಿಚಾರಣೆ 

Bharath Vaibhav
ವಕ್ಫ್ ತಿದ್ದುಪಡಿ ಪ್ರಶ್ನಿಸಿ ಸುಪ್ರೀಂ ಕೋರ್ಟ್ ಗೆ 10 ಅರ್ಜಿ : ಇಂದು ವಿಚಾರಣೆ 
supreme court of india
WhatsApp Group Join Now
Telegram Group Join Now

ನವದೆಹಲಿ : ಇತ್ತೀಚೆಗಷ್ಟೇ ಅಂಗೀಕಾರಗೊಂಡ ವಕ್ಫ್ ಕಾಯಿದೆ 2025ರ ಸಾಂವಿಧಾನಿಕ ಸಿಂಧುತ್ವ ಪ್ರಶ್ನಿಸಿರುವ ಹತ್ತು ಅರ್ಜಿಗಳನ್ನು ಸುಪ್ರೀಂ ಕೋರ್ಟ್ ಇಂದು ವಿಚಾರಣೆ ನಡೆಸಲಿದೆ.

ರಾಷ್ಟ್ರಪತಿಗಳ ಅಂಕಿತ ದೊರೆಯುತ್ತಿದ್ದಂತೆ ದೇಶದಲ್ಲಿ ಕೆಲ ಮುಸ್ಲಿಂ ಸಂಘಟನೆಗಳು ಪ್ರತಿಭಟನೆ ನಡೆಸಿದ್ದರು, ಜೊತೆಗೆ ಇದನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್ ಗೆ ಹತ್ತು ಅರ್ಜಿಗಳು ಬಂದಿದ್ದವು, ಅದರಂತೆ ಇಂದು ವಿಚಾರಣೆ ನಡೆಯಲಿದೆ.

ಸುಪ್ರೀಂ ಕೋರ್ಟ್ ನ ಮುಖ್ಯ ನ್ಯಾಯಮೂರ್ತಿ ಸಂಜೀವ್ ಖನ್ನಾ, ನ್ಯಾಯಮೂರ್ತಿಗಳಾದ ಪಿ ವಿ ಸಂಜಯ್ ಕುಮಾರ್ ಮತ್ತು ಕೆ ವಿ ವಿಶ್ವನಾಥನ್ ಅವರನ್ನೊಳಗೊಂಡ ತ್ರಿಸದಸ್ಯ ಪೀಠ ಈ ಹತ್ತು ಅರ್ಜಿಯನ್ನು ವಿಚಾರಣೆ ನಡೆಸಲಿದೆ, ಅರ್ಜಿಯ ವಿವರ ಈ ಕೆಳಗಿನಂತಿದೆ.

ಅರ್ಜಿದಾರ : ಅಸಾದುದ್ದೀನ್‌ ಓವೈಸಿ

ಆರೋಪ – ತಿದ್ದುಪಡಿ ಕಾಯಿದೆಯು ವಕ್ಫ್‌ ಆಡಳಿತ ಸಂಸ್ಥೆಗಳಿಗೆ ಈ ಹಿಂದೆ ನೀಡಲಾಗಿದ್ದ ವಿವಿಧ ರಕ್ಷಣೆಗಳನ್ನು ತೆಗೆದುಹಾಕುತ್ತದೆ.

ಹಿಂದೂ, ಜೈನ ಹಾಗೂ ಸಿಖ್ ಧಾರ್ಮಿಕ ಮತ್ತು ದತ್ತಿ ಸಂಸ್ಥೆಗಳಿಗೆ ನೀಡಲಾಗುತ್ತಿರುವ ಕೆಲವು ರಕ್ಷಣೆಗಳನ್ನು ವಕ್ಫ್‌ಗಳಿಂದ ಈ ತಿದ್ದುಪಡಿ ಕಾಯಿದೆಯ ಮೂಲಕ ಕಸಿದುಕೊಳ್ಳಲಾಗುತ್ತಿದೆ. ಇದು ಸಂವಿಧಾನದ 14ನೇ ವಿಧಿಯಡಿ ಸಮಾನತೆಯ ಹಕ್ಕಿನ ಉಲ್ಲಂಘನೆ.

ಅರ್ಜಿದಾರ : ಅಮಾನತುಲ್ಲಾ ಖಾನ್

ಆರೋಪ : ಕೇಂದ್ರ ವಕ್ಫ್ ಕೌನ್ಸಿಲ್ ಮತ್ತು ರಾಜ್ಯ ವಕ್ಫ್ ಮಂಡಳಿಗಳಿಗೆ ಮುಸ್ಲಿಮೇತರ ಸದಸ್ಯರನ್ನು ಸೆಕ್ಷನ್ 9 ಮತ್ತು 14 ರ ಅಡಿಯಲ್ಲಿ ನೇಮಿಸುವುದು ಸಂವಿಧಾನದ 14ನೇ ವಿಧಿಯ ಉಲ್ಲಂಘನೆ. ಏಕೆಂದರೆ ಇದು ಬೌದ್ಧಿಕ ವ್ಯತ್ಯಾಸವನ್ನಾಗಲಿ ಅಥವಾ ಧಾರ್ಮಿಕ ಆಸ್ತಿಯ ಆಡಳಿತಕ್ಕೆ ಸಂಬಂಧಿಸಿದ ತಾರ್ಕಿಕತೆಯನ್ನಾಗಲಿ ಆಧರಿಸಿರದ ವರ್ಗೀಕರಣವನ್ನು ಸೃಷ್ಟಿಸುತ್ತದೆ.

ಇದಲ್ಲದೆ, ತಿದ್ದುಪಡಿ ಕಾಯಿದೆಯ ಸೆಕ್ಷನ್ 3 (ಆರ್) ಕನಿಷ್ಠ 5 ವರ್ಷಗಳ ಕಾಲ ಇಸ್ಲಾಂ ಧರ್ಮವನ್ನು ಪಾಲಿಸಿದ ಮತ್ತು ಆಸ್ತಿಯನ್ನು ಹೊಂದಿರುವ ಮುಸ್ಲಿಮರಿಗೆ ಮಾತ್ರ ವಕ್ಫ್ ರಚನೆಯನ್ನು ನಿರ್ಬಂಧಿಸಿರುವುದು ಬಳಕೆದಾರ ಮತ್ತು ಅನೌಪಚಾರಿಕ ಸಮರ್ಪಣೆಗಳಿಂದ ವಕ್ಫ್‌ನ ಐತಿಹಾಸಿಕ ಸ್ವರೂಪವನ್ನು ಮುಕ್ಕಾಗಿಸುತ್ತದೆ.

ಅರ್ಜಿದಾರ : ನಾಗರಿಕ ಹಕ್ಕುಗಳ ರಕ್ಷಣಾ ಸಂಘ (APCR)

ಆರೋಪ : ವಕ್ಫ್ ತಿದ್ದುಪಡಿ ಹೆಚ್ಚಿನ ಸಂಖ್ಯೆಯ ಐತಿಹಾಸಿಕ ವಕ್ಫ್‌ ಆಸ್ತಿಗಳನ್ನು ಅದರಲ್ಲಿಯೂ ಮೌಖಿಕವಾಗಿ ಸಮರ್ಪಿಸಲಾದ ಮತ್ತು ಔಪಚಾರಿಕ ಪತ್ರಗಳಿಲ್ಲದ ಆಸ್ತಿಗಳ ಅಸ್ತಿತ್ವಕ್ಕೆ ಅಪಾಯವನ್ನುಂಟು ಮಾಡುತ್ತದೆ.

ವಕ್ಫ್‌ ವ್ಯಾಖ್ಯಾನದಿಂದ ‘ಬಳಕೆಯ ಕಾರಣದಿಂದಾದ ವಕ್ಫ್’ ಪದಗುಚ್ಛವನ್ನು ಕೈಬಿಟ್ಟಿದ್ದು, ಇದು ನ್ಯಾಯಾಲಯಗಳು ಸಾಕ್ಷ್ಯಗಳ ಆಧಾರದಲ್ಲಿ ರೂಪಿಸಿದ ತತ್ವ ಎಂದಿದೆ. ಹೀಗಾದ ಪಕ್ಷದಲ್ಲಿ ಸಾಕಷ್ಟು ಸಂಖ್ಯೆಯ ಹಳೆಯ ಮಸೀದಿಗಳು ಮತ್ತು ಸ್ಮಶಾನಗಳನ್ನು ಕಳೆದುಕೊಳ್ಳಬೇಕಾಗುತ್ತದೆ.

ಅರ್ಜಿದಾರ : ಸಮಸ್ತ ಕೇರಳ ಜಮೀಯತ್‌ ಉಲೇಮ

ಆರೋಪ : ತಿದ್ದುಪಡಿಗಳು ವಕ್ಫ್‌ಗಳ ಧಾರ್ಮಿಕ ಸ್ವರೂಪವನ್ನು ವಿರೂಪಗೊಳಿಸುತ್ತವೆ ಮತ್ತು ವಕ್ಫ್‌ ಆಸ್ತಿಗಳು ಮತ್ತು ವಕ್ಫ್ ಮಂಡಳಿಗಳ ಆಡಳಿತವನ್ನು ನಿಯಂತ್ರಿಸುವ ಪ್ರಜಾಸತ್ತಾತ್ಮಕ ಪ್ರಕ್ರಿಯೆಯನ್ನು ಬದಲಾಯಿಸಲಾಗದಷ್ಟು ಹಾನಿಗೊಳಿಸುತ್ತವೆ.

ಧಾರ್ಮಿಕ ಪಂಗಡವು ತನ್ನದೇ ಆದ ಧಾರ್ಮಿಕ ವ್ಯವಹಾರಗಳನ್ನು ನಿರ್ವಹಿಸಲು ಸಂವಿಧಾನದ 26ನೇ ವಿಧಿಯ ಅಡಿಯಲ್ಲಿ ಒದಗಿಸಲಾದ ಹಕ್ಕುಗಳಲ್ಲಿ ಮಾಡುವ ಸ್ಪಷ್ಟವಾದ ಹಸ್ತಕ್ಷೇಪವಾಗಿದೆ.

ಅರ್ಜಿದಾರ : ಅಂಜುಮ್ ಕದರಿ

ಆರೋಪ : ವಕ್ಫ್ ಆಸ್ತಿಯ ಆಯ್ದ ತಿದ್ದುಪಡಿಯು ಸಮಾನತೆ, ಧಾರ್ಮಿಕ ಸ್ವಾತಂತ್ರ್ಯ ಮತ್ತು ಅಲ್ಪಸಂಖ್ಯಾತ ಹಕ್ಕುಗಳ ರಕ್ಷಣೆಯ ಮೂಲಭೂತ ತತ್ವಗಳನ್ನು ದುರ್ಬಲಗೊಳಿಸುವ ಅಪಾಯಕಾರಿ ಮತ್ತು ತಾರತತಮ್ಯದ ಪೂರ್ವನಿದರ್ಶನವನ್ನು ಹುಟ್ಟುಹಾಕುತ್ತದೆ.

ನ್ಯಾಯಾಂಗ ಪೂರ್ವನಿದರ್ಶನದ ಸಿಂಧುತ್ವ ಮತ್ತು ಪಾವಿತ್ರ್ಯವನ್ನು ಎತ್ತಿಹಿಡಿಯಲು ಮತ್ತು ಮುಸ್ಲಿಂ ಸಮುದಾಯದ ಸಾಂವಿಧಾನಿಕ ಹಕ್ಕುಗಳನ್ನು ರಕ್ಷಿಸಲು, ಬಳಕೆಯ ಕಾರಣದಿಂದಾದ ವಕ್ಫ್ ಪದಗುಚ್ಛ ಕೈಬಿಟ್ಟಿರುವುದನ್ನು ಮತ್ತು ಕಾಯಿದೆಯನ್ನು ಮರುಪರಿಶೀಲಿಸಬೇಕು.

ಅರ್ಜಿದಾರ : ತೈಯಬ್ ಖಾನ್ ಸಲ್ಮಾನಿ

ಆರೋಪ : ವಕ್ಫ್ ಅನ್ನು ಯಾರು ನೀಡಬಹುದು ಎಂಬುದರ ಮೇಲಿನ ನಿರ್ಬಂಧವು 1937ರ ಮುಸ್ಲಿಂ ವೈಯಕ್ತಿಕ ಕಾನೂನಿನೊಂದಿಗೆ (ಶರಿಯತ್) ನೇರ ಸಂಘರ್ಷದಲ್ಲಿದೆ

ಅರ್ಜಿದಾರ : ಮೊಹಮ್ಮದ್ ಶಫಿ

ಆರೋಪ : ನೇರವಾಗಿ ಮಾಡಬಾರದಂತದ್ದನ್ನು ಪರೋಕ್ಷವಾಗಿಯೂ ಮಾಡಬಾರದು ಎನ್ನುವ ತತ್ವವನ್ನು ಕಾಯಿದೆ ಉಲ್ಲಂಘಿಸುತ್ತದೆ

ವಕ್ಫ್ ಆಸ್ತಿಗಳ ಸಮರ್ಪಕ, ಬಳಕೆದಾರರು ಮತ್ತು ವ್ಯವಸ್ಥಾಪಕರ ಹಕ್ಕುಗಳಿಗೆ ಕಾಯಿದೆ ಅಡ್ಡಿಪಡಿಸುತ್ತದೆ.

ಅರ್ಜಿದಾರ : ಮೊಹಮ್ಮದ್ ಫಜಲ್‌ಉರ್‌ರಹೀಮ್‌, ಅಖಿಲ ಭಾರತ ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿಯ ಪ್ರಧಾನ ಕಾರ್ಯದರ್ಶಿ

ಆರೋಪ : ಕಾಯಿದೆಯನ್ನು ಪ್ರತ್ಯೇಕವಾಗಿ ನೋಡದೆ ಭ್ರಾತೃತ್ವ, ಸಮಾನತೆ ಮತ್ತು ಕಾನೂನಿನ ಸಮಾನ ರಕ್ಷಣೆಯ ತತ್ವಗಳ ಮೇಲೆ ದಾಳಿ ನಡೆಸುವ ಕಾರ್ಯಾಂಗದ ವಿವಿಧ ಆದೇಶಗಳು, ಪೊಲೀಸ್ ವಿಧಾನಗಳು, ಅಸಲಿ ಮತ್ತು ಕಚ್ಚಾ ಅಧಿಕಾರ ಪ್ರಕ್ರಿಯೆ ಮತ್ತು ಅಧೀನ ಶಾಸನಗಳ ಹಿನ್ನೆಲೆಯಲ್ಲಿ ನೋಡಬೇಕು

ಕಾಯಿದೆ ಸಾಂವಿಧಾನಿಕ ನೈತಿಕತೆಯ ತತ್ವಕ್ಕೆ ವಿರುದ್ಧವಾಗಿದೆಯೇ ಎಂಬುದನ್ನು ಅರ್ಥಮಾಡಿಕೊಳ್ಳುವಲ್ಲಿ ಕಾನೂನಿನ ತಿರುಳು ಮತ್ತು ಸಂದರ್ಭ ಎರಡನ್ನೂ ಬಳಸುವುದು ಮುಖ್ಯ

ಅರ್ಜಿದಾರ : ಡಾ ಮನೋಜ್ ಕುಮಾರ್ ಝಾ ಮತ್ತು ಫೈಯಾಜ್ ಅಹ್ಮದ್, ಆರ್‌ಜೆಡಿ ಸಂಸದರು

ಆರೋಪ : ಸಂವಿಧಾನದ 1, 14, 15, 21, 25, 26, 29, 30 ಮತ್ತು 300ಎ ವಿಧಿಗಳನ್ನು ಕಾಯಿದೆ ಉಲ್ಲಂಘಿಸುತ್ತದೆ.

ಮುಸ್ಲಿಂ ಧಾರ್ಮಿಕ ದತ್ತಿ ವಿಚಾರಗಳಲ್ಲಿ ಕಾಯಿದೆ ಹಸ್ತಕ್ಷೇಪ ಮಾಡಿ ಸರ್ಕಾರಿ ನಿಯಂತ್ರಣಕ್ಕೆ ಒಳಪಡಿಸುತ್ತದೆ. ಇದರಿಂದ ಧರ್ಮಾಧಾರಿತ ತಾರತಮ್ಯ ಉಂಟು ಮಾಡಿ ಸಂವಿಧಾನದ 14 ಮತ್ತು 15ನೇ ವಿಧಿಗಳನ್ನು ಉಲ್ಲಂಘಿಸುತ್ತದೆ.

WhatsApp Group Join Now
Telegram Group Join Now
Share This Article
error: Content is protected !!