ಆಂಧ್ರಪ್ರದೇಶದ ಪೊಲೀಸರು ಕರ್ನಾಟಕ ಸೇರಿದಂತೆ ದೇಶದ 7 ರಾಜ್ಯಗಳಲ್ಲಿ ಏಕಕಾಲಕ್ಕೆ ಕಾರ್ಯಾಚರಣೆ ನಡೆಸಿ, ನಿಷೇಧಿತ ಉಗ್ರ ಸಂಘಟನೆಗಳಾದ ಅಲ್-ಖೈದಾ ಮತ್ತು ಐಸಿಸ್(ISIS) ಜೊತೆ ಸಂಪರ್ಕ ಹೊಂದಿದ್ದ 12 ಮಂದಿ ಶಂಕಿತರನ್ನು ಬಂಧಿಸಿದ್ದಾರೆ. ಬಂಧಿತರಲ್ಲಿ ಕರ್ನಾಟಕದ ಬಳ್ಳಾರಿಯ ಅಬ್ದುಲ್ ಸಲಾಂ ಎಂಬಾತನೂ ಸೇರಿದ್ದಾನೆ.
ಕರ್ನಾಟಕ ಸೇರಿ ಒಟ್ಟು 7 ರಾಜ್ಯಗಳಲ್ಲಿ ಆಂಧ್ರ ಪೊಲೀಸರು ಕಾರ್ಯಾಚರಣೆ ನಡೆಸಿದ್ದಾರೆ.ಇವರು ಆಂಧ್ರದಲ್ಲಿ‘ಅಲ್ ಮಾಲಿಕ್ ಇಸ್ಲಾಮಿಕ್ ಯೂತ್’‘ (Al-Malik Youth Islamic Committee) ಎಂಬ ಗುಂಪನ್ನು ರಚಿಸಿಕೊಂಡು ಯುವಕರನ್ನು ತೀವ್ರಗಾಮಿ ಚಿಂತನೆಗಳತ್ತ ಸೆಳೆಯುತ್ತಿದ್ದರು.ಭಾರತವನ್ನು ಇಸ್ಲಾಮಿಕ್ ರಾಷ್ಟ್ರವನ್ನಾಗಿ ಮಾಡುವ ಗುರಿ ಹೊಂದಿದ್ದರು ಎನ್ನಲಾಗಿದೆ.
ಬಂಧಿತರನ್ನು ಅಬ್ದುಲ್ ಸಲಾಂ (ಕರ್ನಾಟಕ), ಅಜಾನುಲ್ಲಾ ಖಾನ್ (ಬಿಹಾರ), ಲಕ್ಕಿ ಅಹ್ಮದ್ (ದೆಹಲಿ), ಮಿರ್ ಆಸಿಫ್ ಅಲಿ (ಪ. ಬಂಗಾಳ), ಜೀಶನ್ (ರಾಜಸ್ಥಾನ), ಶಾರುಖ್ ಖಾನ್ ಮತ್ತು ಶಿಯಾಕ್ ಪಿಯಾಜ್ ಉರ್ ರೆಹಮಾನ್ (ಮಹಾರಾಷ್ಟ್ರ) ಹಾಗೂ ಆಂಧ್ರಪ್ರದೇಶದ ಮೊಹಮ್ಮದ್ ರಹಮತುಲ್ಲಾ ಶರೀಫ್, ಮಿರ್ಜಾ ಸೊಹೈಲ್ ಬೇಗ್ ಮತ್ತು ಮೊಹಮ್ಮದ್ ಡ್ಯಾನಿಶ್ ಎಂದು ಗುರುತಿಸಲಾಗಿದೆ.
ತರಬೇತಿ ಯೋಜನೆ: ಇವರು ತರಬೇತಿ ಪಡೆಯಲು ಪಾಕಿಸ್ತಾನಕ್ಕೆ ತೆರಳಲು ಯೋಜನೆ ರೂಪಿಸಿದ್ದರು ಎಂದು ವರದಿಯಾಗಿದೆ.ಸಾಮಾಜಿಕ ಜಾಲತಾಣಗಳ ಮೂಲಕ ಜಿಹಾದಿ ಪ್ರಚೋದನೆ ನೀಡುವುದು ಮತ್ತು ಉಗ್ರ ಚಟುವಟಿಕೆಗಳಿಗೆ ಜನರನ್ನು ಆಕರ್ಷಿಸುವ ಕೆಲಸ ಮಾಡುತ್ತಿದ್ದರು.
ಈ ತಂಡದ ಕೆಲವರು ಉಗ್ರ ಒಸಾಮಾ ಬಿನ್ ಲಾಡೆನ್ ಮಾದರಿಯಲ್ಲಿ ವೇಷಧರಿಸಿ ಆತನಂತೆಯೇ ವರ್ತಿಸುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. ಈ ಕಾರ್ಯಾಚರಣೆಯು ಬುಧವಾರ ನಡೆದಿದ್ದು, ವಿಜಯವಾಡದ ಪೊಲೀಸರು ಈ ಬಗ್ಗೆ ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.




