ಚಿಕ್ಕೋಡಿ : ಪಟ್ಟಣದಲ್ಲಿ ಸೋಮವಾರ ಭಗವಾನ್ ಮಹಾವೀರ ಜನ್ಮೋತ್ಸವವನ್ನು ಅದ್ದೂರಿಯಾಗಿ ಆಚರಿಸಲಾಯಿತು.
ಇದರ ನಿಮಿತ್ತ ಭಗವಾನ್ ಮಹಾವೀರರ ಭಾವಚಿತ್ರಕ್ಕೆ ಪುಷ್ಪಾರ್ಚನೆಯ ಜೊತೆಗೆ ಜೈನ್ ಪೇಟೆಯ ಆದಿನಾಥ ದಿಗಂಬರ ಜೈನ ಮಂದಿರದಲ್ಲಿ ಅಭಿಷೇಕ ಮಾಡಲಾಯಿತು.
ಭಗವಾನ ಮಾಹಾವೀರ ಸ್ವಾಮಿಯ ಪಲ್ಲಕ್ಕಿ ಮೆರವಣಿಗೆ ಸಕಲ ವಾದ್ಯ ಮೇಳದೊಂದಿಗೆ, ಗುರುವಾರ ಪೇಟೆ, ಕೆ.ಸಿ.ರಸ್ತೆ, ಎನ್. ಎಮ್. ರಸ್ತೆ ಮೂಲಕ ಮಹಾವೀರ ನಗರದ ಶಾಂತಿನಾಥ ಮಂದಿರಕ್ಕೆ ತಲುಪಿ, ಅಲ್ಲಿ ಪೂಜೆ ಸಲ್ಲಿಸಿ, ಮಹಾವೀರ ಸ್ಥಾನಕ್ಕೆ ಪೂಜೆ ಸಲ್ಲಿಸಿ, ಮರಳಿ ಸ್ವೇತಾಂಬರ ಮಂದಿರ, ಹೊಸಪೇಟ ಗಲ್ಲಿಯ ಮಂದಿರ ಮೂಲಕ ಜೈನ ಪೇಟದ ಮಂದಿರಕ್ಕೆ ಸೇರಲಾಯಿತು.
ಜೈನ ಧರ್ಮದ ಭಾರತೀಯ ಸಂಸ್ಕೃತಿಯು ವಿಭಿನ್ನತೆಯಲ್ಲೂ ಏಕತೆಯನ್ನು ಹೊಂದಿದೆ. ಭಗವಾನ್ ಮಹಾವೀರರು ಜೈನ ಧರ್ಮದ ಪ್ರತಿಪಾದಕರಾಗಿದ್ದರು. ತೀರ್ಥಂಕರರಾಗಿ ಇವರು, ಅಹಿಂಸೆ, ಶಾಂತಿಗೆ ಹೆಚ್ಚು ಪ್ರಾಧಾನ್ಯತೆ ನೀಡಿ, ಧರ್ಮದ ಪ್ರವರ್ತಕರಾಗಿದ್ದರು. ವಿಶ್ವಕ್ಕೆ ಶಾಂತಿ, ಪ್ರೀತಿ ಮತ್ತು ಸಹಬಾಳ್ವೆಯ ಮಾರ್ಗವನ್ನು ತೋರಿಸಿದ ಮಹಾನ್ ಸಂತರು ಮಹಾವೀರರು, ಕೇವಲ ಯುದ್ಧ ಮಾತ್ರವಲ್ಲದೆ, ಕಾಯ, ವಾಚ, ಮನಸ್ಸಿನಿಂದಲೂ ಯಾವುದೇ ಜೀವಿಗೂ ನೋವುಂಟು ಮಾಡಬಾರದೆಂಬುದು ಇವರ ಮೂಲಮಂತ್ರವಾಗಿದೆ.
ಮಧ್ಯಾಹ್ನ ಭೋಜನ ವ್ಯವಸ್ಥೆ ಮಾಡಲಾಗಿತ್ತು, ಸಂಜೆಯ ವೇಳೆ ತೊಟ್ಟಿಲು ಕಾರ್ಯಕ್ರಮ ಸೇರಿದಂತೆ ವಿವಿಧ ರೀತಿಯ ಮನರಂಜನಾ ಕಾರ್ಯಕ್ರಮಗಳು ಜರುಗಿದವು.
ಈ ಸಂದರ್ಭದಲ್ಲಿ ವರ್ಧಮಾನ ಸದಲಗೆ, ಡಾ. ಸಂಜಯ ಪಾಟೀಲ, ಶೀತಲ ಹಜಾರೆ, ಚಂದ್ರಕಾಂತ ಹುಕ್ಕೇರಿ, ರಾಮಚಂದ್ರ ಜೌಗುಲೆ, ಅನೀಲ ಸದಲಗೆ, ಡಾ. ಪದ್ಮರಾಜ ಪಾಟೀಲ, ಬಾಹುಬಲಿ ನಸಲಾಪೂರೆ, ರಾಜು ರೋಖಡೆ, ಪ್ರಕಾಶ ಅಲಗಣ್ಣವರ, ಮಹೇಂದ್ರಕುಮಾರ ಶಹಾ, ಅಮೀತ ಶಹಾ, ಅನುಪ ಶಹಾ, ರಾವಸಾಹೇಬ ಕೇಸ್ತಿ, ಎಸ್.ಟಿ.ಮುನ್ನೋಳಿ, ಬಿ. ಬಿ. ಹಜಾರೆ, ಸಂಕೇತ ಮೆಹತಾ, ಶಿರೀಶ ಮೆಹತಾ, ಸೇರಿದಂತೆ ನೂರಾರು ಜನ ಶ್ರಾವಕ-ಶ್ರಾವಕಿಯರು ಉಪಸ್ಥಿತರಿದ್ದರು.
ವರದಿ: ರಾಜು ಮುಂಡೆ




