ಬಿಹಾರ : ರಾಜ್ಯದ ಹಲವು ಜಿಲ್ಲೆಗಳಲ್ಲಿ ಧಾರಾಕಾರವಾಗಿ ಸುರಿದ ಆಲಿಕಲ್ಲು ಮಳೆ ಹಾಗೂ ಗಾಳಿಗೆ ಜನಜೀವನ ಅಸ್ತವ್ಯಸ್ಥಗೊಂಡಿದ್ದು ಮಾತ್ರವಲ್ಲ, ಸಿಡಿಲು ಬಡಿದು 25 ಜನ ಮೃತಪಟ್ಟಿರುವುದಾಗಿ ಅಲ್ಲಿನ ರಾಜ್ಯ ಸರ್ಕಾರ ಖಚಿತಪಡಿಸಿದೆ.
ಕಳೆದ ಎರಡು ದಿನಗಳಲ್ಲಿ ಸಿಡಿಲಿಗೆ 25 ಜನ ಬಲಿಯಾಗಿದ್ದು, ಅಪಾರ ಪ್ರಮಾಣದಲ್ಲಿ ಕೈಗೆ ಬಂದ ಬೆಳೆಯೂ ಹಾನಿಯಾಗಿ ಅನ್ನದಾತರು ಕಂಗಾಲಾಗಿದ್ದಾರೆ.
ಬಿಹಾರದ ಪಾಟ್ನಾ, ಭೋಜ್ಪುರ, ಬಕ್ಸರ್, ಸಸಾರಾಮ್, ಛಾಪ್ರಾ, ಕೈಮೂರ್, ಸಿತಾಮರ್ಹಿ, ಶಿವಾರ್, ದರ್ಬಂಗಾ, ಸಹರ್ಸಾ, ಮಧುಬನಿ ಮತ್ತು ಅರಾರಿಯಾ ಮತ್ತು ಇತರ ಜಿಲ್ಲೆಗಳಲ್ಲಿ ಮಳೆ-ಸಿಡಿಲಿನಿಂದ ಘೋರ ಅನಾಹುತ ನಡೆದಿದೆ.
ಗಂಟೆಗೆ ಸುಮಾರು 65 ಕಿ.ಮೀ ವೇಗದಲ್ಲಿ ಬೀಸಿದ ಬಿರುಗಾಳಿಯೊಂದಿಗೆ ಮಳೆಯು ಅಬ್ಬರಿಸಿ ಬೊಬ್ಬಿರಿದು ಭಾರೀ ವಿನಾಶವನ್ನೇ ತಂದೊಡ್ಡಿದೆ. ಇನ್ನು ಸಿವಾನ್ ಪ್ರದೇಶದಲ್ಲಿ ಸಿಡಿಲು ಬಡಿದು ಇಬ್ಬರು ಹಾಗೂ ನಳಂದ ಜಿಲ್ಲೆಯ ಒಂದರಲ್ಲೇ 18 ಸೇರಿ ಒಟ್ಟು ಇಪ್ಪತ್ತೈದು ಜನರು ಸಿಡಿಲಿಗೆ ಪ್ರಾಣ ಕಳೆದುಕೊಂಡಿದ್ದಾರೆ.