ತುರುವೇಕೆರೆ : ಮಾಯಸಂದ್ರದ ಎಸ್.ಬಿ.ಜಿ ವಿದ್ಯಾಲಯ ಕ್ರೀಡಾಂಗಣದಲ್ಲಿ ನಡೆದ 17 ವರ್ಷದೊಳಗಿನ ಬಾಲಕರ 69ನೇ ರಾಷ್ಟ್ರಮಟ್ಟದ ಹ್ಯಾಂಡ್ಬಾಲ್ ಕ್ರೀಡಾಕೂಟದಲ್ಲಿ ಕರ್ನಾಟಕ ತಂಡವು ರಾಜಾಸ್ಥಾನ್ ತಂಡದ ವಿರುದ್ಧ 35-26 ಅಂತರದ ಅರ್ಹ ಜಯ ಸಾಧಿಸಿ ಚಿನ್ನದ ಪದಕದೊಂದಿಗೆ ಚಾಂಪಿಯನ್ ಆಗಿ ಹೊರಹೊಮ್ಮಿತು.
ಸ್ಕೂಲ್ ಗೇಮ್ಸ್ ಫೆಡರೇಶನ್ ಆಫ್ ಇಂಡಿಯಾ, ಶಾಲಾ ಶಿಕ್ಷಣ ಇಲಾಖೆ ಹಾಗೂ ಆದಿಚುಂಚನಗಿರಿ ಟ್ರಸ್ಟ್ ಇವರ ಸಂಯುಕ್ತಾಶ್ರಯದಲ್ಲಿ ನಡೆದ ರಾಷ್ಟ್ರಮಟ್ಟದ ಹ್ಯಾಂಡ್ ಬಾಲ್ ಕ್ರೀಡಾಕೂಟದಲ್ಲಿ ರಾಜಾಸ್ಥಾನ್ ಮತ್ತು ಬಿಹಾರ ತಂಡಗಳು ಕ್ರಮವಾಗಿ ಎರಡು ಮತ್ತು ಮೂರನೆಯ ಸ್ಥಾನ ಪಡೆದು ಬೆಳ್ಳಿ ಹಾಗೂ ತಾಮ್ರ ಪದಕಕ್ಕೆ ಪಾತ್ರವಾದವು.
ಪಂದ್ಯಾವಳಿಯುದ್ದಕ್ಕೂ ನೆಚ್ಚಿನ ತಂಡವಾಗಿದ್ದ ಕರ್ನಾಟಕ ತಂಡ ಅಂತಿಮ ಹಣಾಹಣಿಯಲ್ಲಿ ರಾಜಾಸ್ಥಾನ್ ವಿರುದ್ಧ ಆರಂಭದಿಂದಲೇ ಹಿಡಿತ ಸಾಧಿಸಿತು. ಯಾವೊಂದು ಹಂತದಲ್ಲೂ ಕರ್ನಾಟಕ ತಂಡ ಯಾವುದೇ ತಪ್ಪೆಸಗದೆ ಎಲ್ಲಾ ವಿಭಾಗಗಲ್ಲಿ ಸಮರ್ಥ ಮತ್ತು ಚಾಕಚಕ್ಯತೆಯ ಪ್ರದರ್ಶನ ನೀಡಿ ನಿರ್ಣಾಯಕ ಗುರಿ ತಲುಪಿ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿತು. ಕ್ರೀಡಾಕೂಟದುದ್ದಕ್ಕೂ ವಿವಿಧ ವಿಭಾಗಗಳಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದ ರಾಜಾಸ್ಥಾನ ತಂಡದ ಗೋಲಿ ನಿತೀಶ್, ಡಿಫೆಂಡರ್ ಶ್ರೀರಾಮ್, ಬಿಹಾರದ ಪ್ರವೀಣ್ ಸಿಂಗ್ ಹಾಗೂ ಕರ್ನಾಟಕದ ಅಲ್ರೌಂಡರ್ ಮೋನಿತ್ ಗೌಡ ವೈಯಕ್ತಿಕ ಪ್ರಶಸ್ತಿ ಪಡೆದರು.
ರಾಷ್ಟ್ರಮಟ್ಟದ ಕ್ರೀಡಾಕೂಟ ತಾಲ್ಲೂಕಿನಲ್ಲಿ ನಡೆದದ್ದು ಕ್ರೀಡಾ ಪ್ರೇಮಿಗಳಿಗೆ ದೇಶದ ವಿವಿಧ ಭಾಗಗಳ ಆಟಗಾರರ ಹ್ಯಾಂಡ್ಬಾಲ್ ಕ್ರೀಡಾ ಕೌಶಲವನ್ನು ಹತ್ತಿರದಿಂದ ನೋಡುವ ಒಂದು ಅಪೂರ್ವ ಅವಕಾಶವನ್ನು ಸೃಷ್ಟಿಸಿತ್ತು. ಅಲ್ಲದೆ ಮಾಯಸಂದ್ರದ ಎಸ್.ಬಿ.ಜಿ. ವಿದ್ಯಾಲಯದ ಐವರು ಆಟಗಾರರಾದ ನಿಶ್ಚಯ್ ಗೌಡ, ಶ್ರೇಯಸ್ ಗೌಡ, ಮೋನಿತ್ ಗೌಡ, ಉಮಾಶಂಕರ್, ಯೋಗಾನಂದ್ ಕರ್ನಾಟಕ ತಂಡದಲ್ಲಿ ಅವಕಾಶ ಪಡೆದಿದ್ದುದು ಸಹ ಒಂದು ಹೆಗ್ಗಳಿಕೆಯ ವಿಷಯವಾಗಿತ್ತು.

ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಪ್ರಧಾನ ಕಾರ್ಯದರ್ಶಿ ಶ್ರೀ ಪ್ರಸನ್ನನಾಥ ಸ್ವಾಮೀಜಿ ವಿಜೇತ ತಂಡಗಳಿಗ ಪ್ರಶಸ್ತಿಗಳನ್ನು ವಿತರಿಸಿದರು. ಎಸ್.ಜಿ.ಎಫ್.ಐನ ಕ್ಷೇತ್ರ ಅಧಿಕಾರಿ ಕು. ಕನಕ್ ಚರಕದಾರ್, ಉಪವಿಭಾಗಾಧಿಕಾರಿ ಸಪ್ತಶ್ರೀ, ತಹಸೀಲ್ದಾರ್ ಕುಂಞ ಅಹಮದ್, ಕರ್ನಾಟಕ ಹ್ಯಾಂಡ್ ಬಾಲ್ ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಬಿ.ಎಲ್. ಲೋಕೇಶ್, ಉಪಾಧ್ಯಕ್ಷರಾದ ಶಿವರಾಮ್ ಮತ್ತು ಕೆ. ಪುಟ್ಟರಂಗಪ್ಪ, ಆಡಳಿತಾಧಿಕಾರಿ ಎ.ಟಿ.ಶಿವರಾಂ, ಕರ್ನಾಟಕ ಹ್ಯಾಂಡ್ ಬಾಲ್ ತಂಡದ ತರಬೇತುದಾರರಾದ ಉದಯಕುಮಾರ್, ಕೆಂಚಪ್ಪ, ಕರ್ನಾಟಕ ಹ್ಯಾಂಡ್ಬಾಲ್ ತಂಡದ ವ್ಯವಸ್ಥಾಪಕ ಸುನಿಲ್ ಕುಮಾರ್, ಕೆ.ಎಚ್. ಆನಂದರಾಜ್ ಇತರರು ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ಪಾಲ್ಗೊಂಡಿದ್ದರು.
ವರದಿ: ಗಿರೀಶ್ ಕೆ ಭಟ್




