ಅಲ್ವಾರ್: ಅಕ್ರಮ ಪಟಾಕಿ ಕಾರ್ಖಾನೆಯಲ್ಲಿ ಸ್ಫೋಟ ಸಂಭವಿಸಿ ಕಾರ್ಖಾನೆಯಲ್ಲಿ ಕೆಲಸ ಮಾಡುತ್ತಿದ್ದ ಕನಿಷ್ಠ 7 ಕಾರ್ಮಿಕರು ಸಜೀವ ದಹನಗೊಂಡಿದ್ದಾರೆ. ರಾಜಸ್ಥಾನದ ಅಲ್ವಾರ್ ಜಿಲ್ಲೆಯ ಭಿವಾಡಿ ಕೈಗಾರಿಕಾ ಪ್ರದೇಶದಲ್ಲಿ ಇಂದು ಘಟನೆ ನಡೆದಿದೆ.
ಕಾರ್ಖಾನೆಯೊಳಗೆ ಇನ್ನೂ ಇಬ್ಬರು ಕಾರ್ಮಿಕರು ಸಿಲುಕಿಕೊಂಡಿರುವ ಶಂಕೆ ವ್ಯಕ್ತವಾಗಿದ್ದು, ಘಟನೆ ನಡೆದ ಸಮಯದಲ್ಲಿ, ಸುಮಾರು 25 ಕಾರ್ಮಿಕರು ಸ್ಥಳದಲ್ಲಿದ್ದರು ಎಂದು ತಿಳಿದು ಬಂದಿದೆ.
ಬೆಂಕಿಯ ಬಗ್ಗೆ ಮಾಹಿತಿ ಹರಡಿದ ತಕ್ಷಣ ಹತ್ತಿರದ ಕಾರ್ಖಾನೆಗಳ ಕಾರ್ಮಿಕರು ಮತ್ತು ನೌಕರರು ಪ್ರಾಣ ಉಳಿಸಿಕೊಳ್ಳಲು ಹೊರಗೆ ಓಡಿ ಬಂದಿದ್ದಾರೆ.
ಘಟನೆ ನಡೆದ ಕಾರ್ಖಾನೆಯನ್ನು ವ್ಯಕ್ತಿಯೊಬ್ಬರು ಬಾಡಿಗೆಗೆ ಪಡೆದು ಅಲ್ಲಿ ಅಕ್ರಮವಾಗಿ ಪಟಾಕಿ ತಯಾರಿಕಾ ಘಟಕ ಆರಂಭಿಸಿದ್ದರು ಎಂಬ ಆರೋಪ ಕೇಳಿ ಬಂದಿದೆ.
ಕಾರ್ಖಾನೆಯೊಳಗೆ ಸಂಗ್ರಹಿಸಲಾಗಿದ್ದ ಗನ್ಪೌಡರ್ ಮತ್ತು ಕಾರ್ಡ್ಬೋರ್ಡ್ನ ದೊಡ್ಡ ದಾಸ್ತಾನು ಭಾರಿ ಸ್ಫೋಟದ ನಂತರ ಬೆಂಕಿಗೆ ಆಹುತಿಯಾಗಿದ್ದು, ಇದು ಬೆಂಕಿ ತೀವ್ರವಾಗಿ ಹರಡುವುದಕ್ಕೆ ಕಾರಣವಾಯ್ತು.
ಮುನ್ನೆಚ್ಚರಿಕೆ ಕ್ರಮವಾಗಿ, ಹತ್ತಿರದ ಕಾರ್ಖಾನೆಗಳಲ್ಲಿದ್ದ ಜನರನ್ನು ಬೇರೆಡೆ ಸ್ಥಳಾಂತರಿಸಲಾಗಿದ್ದು, ಹೆಚ್ಚಿನ ಅನಾಹುತವನ್ನು ತಡೆಗಟ್ಟಲು ತಾತ್ಕಾಲಿಕವಾಗಿ ವಿದ್ಯುತ್ ಸರಬರಾಜನ್ನು ಕಡಿತಗೊಳಿಸಲಾಗಿದೆ.
ಹಲವು ಗಂಟೆಗಳ ಕಠಿಣ ಪ್ರಯತ್ನದ ನಂತರ, ಅಗ್ನಿಶಾಮಕ ದಳದ ತಂಡಗಳು ಬೆಂಕಿಯನ್ನು ಬಹುತೇಕ ನಿಯಂತ್ರಣಕ್ಕೆ ತರುವಲ್ಲಿ ಯಶಸ್ವಿಯಾದವು, ಆದರೂ ವಾತಾವರಣವನ್ನು ತಂಪಾಗಿಸುವ ಕಾರ್ಯಾಚರಣೆಗಳು ದೀರ್ಘಕಾಲದವರೆಗೆ ಮುಂದುವರೆದವು.
ಬೆಂಕಿಯ ಸಮಯದಲ್ಲಿ ಮೂರರಿಂದ ನಾಲ್ಕು ದೊಡ್ಡ ಸ್ಫೋಟಗಳ ಶಬ್ದಗಳು ಕೇಳಿಬಂದವು ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ, ಇದು ನಿವಾಸಿಗಳು ಮತ್ತು ಕಾರ್ಮಿಕರಲ್ಲಿ ಭೀತಿ ಉಂಟುಮಾಡಿತು.




