ಬೆಂಗಳೂರು : 2028ರ ವಿಧಾನಸಭೆ ಚುನಾವಣೆಯಲ್ಲಿ 141 ಸೀಟುಗಳಲ್ಲಿ ಜಯಗಳಿಸುವ ಮೂಲಕ ಮತ್ತೆ ನಾವು ಅಧಿಕಾರಕ್ಕೆ ಬರುತ್ತೇವೆ ಎಂದು ಉಪಮುಖ್ಯಮಂತ್ರಿ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳಿದ್ದರು.
ಆದರೆ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿರುವ ಪೋಸ್ಟ್ ನೋಡಿ ಕಾಂಗ್ರೆಸ್ ನಾಯಕರು, ಕಾರ್ಯಕರ್ತರು, ಬೆಂಬಲಿಗರು ಬೆಚ್ಚಿ ಬಿದ್ದಿದ್ದಾರೆ.ದೆಹಲಿ ಮೂಲದ ಸಂಸ್ಥೆಯೊಂದು ಕರ್ನಾಟಕದ ಚುನಾವಣೆ ಬಗ್ಗೆ ನಡೆಸಿದ ಚುನಾವಣಾ ಪೂರ್ವ ಸಮೀಕ್ಷೆ ಇದಾಗಿದೆ.
ಸಮೀಕ್ಷೆಯ ವರದಿ: ಸಾಮಾಜಿಕ ಜಾಲತಾಣದಲ್ಲಿ ಕರ್ನಾಟಕ ವಿಧಾನಸಭೆ ಚುನಾವಣೆ 2028ರ ಬಗ್ಗೆ ಬಿಜೆಪಿ ಮಾಡಿಸಿದ ಸಮೀಕ್ಷೆ ಎಂಬ ವರದಿಯೊಂದು ವೈರಲ್ ಆಗಿದೆ.
ಇದನ್ನು ಹಲವಾರು ಜನರು ಶೇರ್ ಮಾಡುತ್ತಿದ್ದು, ಕರ್ನಾಟಕದಲ್ಲಿ ಮತ್ತೆ ಕಾಂಗ್ರೆಸ್ ಅಧಿಕಾರಕ್ಕೆ ಬರಲ್ಲ ಎಂದು ಸಮೀಕ್ಷೆ ಅಂದಾಜಿಸಿದೆ.
ಸಮೀಕ್ಷೆ ವರದಿಯ ಪ್ರಕಾರ 224 ಸೀಟುಗಳ ಪೈಕಿ ಬಿಜೆಪಿ 115 ಸೀಟುಗಳಲ್ಲಿ ಗೆಲುವು ಸಾಧಿಸಲಿದೆ. ಜೆಡಿಎಸ್ 16 ರಿಂದ 23 ಸೀಟುಗಳಲ್ಲಿ ಗೆಲ್ಲಲಿದೆ. ಈ ಮೂಲಕ ಬಿಜೆಪಿ-ಜೆಡಿಎಸ್ ಸರ್ಕಾರ ರಾಜ್ಯದಲ್ಲಿ ಅಧಿಕಾರಕ್ಕೆ ಬರಲಿದೆ.
ಇದರಲ್ಲಿ ಅಚ್ಚರಿಗೆ ಕಾರಣವಾಗಿರುವ ಅಂಶ ಒಂದಿದೆ. ಕರ್ನಾಟಕದ ಆಡಳಿತ ಪಕ್ಷ ಕಾಂಗ್ರೆಸ್ ಮುಂದಿನ ಚುನಾವಣೆಯಲ್ಲಿ ಹೀನಾಯ ಸೋಲು ಕಾಣಲಿದೆ. ಕಾಂಗ್ರೆಸ್ ಪಕ್ಷದ 78 ಹಾಲಿ ಶಾಸಕರು ಮುಂದಿನ ಚುನಾವಣೆಯಲ್ಲಿ ಸೋಲು ಕಾಣಲಿದ್ದಾರೆ ಎಂದು ಸಮೀಕ್ಷೆ ಹೇಳಿದೆ.
ಈ ಸಮೀಕ್ಷೆಯನ್ನು ಯಾರು ಮಾಡಿಸಿದರು, ವರದಿ ಎಲ್ಲಿದೆ, ಯಾರ ಕೈಗೆ ವರದಿ ನೀಡಲಾಗಿದೆ, ಸಂಸ್ಥೆ ಯಾವುದು ಎಂಬ ಮಾಹಿತಿ ಲಭ್ಯವಿಲ್ಲ. ಆದರೆ ಬಿಜೆಪಿ 115 ಸೀಟು, ಕಾಂಗ್ರೆಸ್ನ 78 ಶಾಸಕರಿಗೆ ಸೋಲು ಎಂಬ ವರದಿಯ ಅಂಶವನ್ನು ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಲಾಗುತ್ತಿದೆ.
ಈ ಪೋಸ್ಟ್ಗೆ ಕಾಂಗ್ರೆಸ್, ಬಿಜೆಪಿ ಕಾರ್ಯಕರ್ತರ ಕಮೆಂಟ್ಗಳ ಸುರಿಮಳೆಯೇ ಹರಿದು ಬರುತ್ತಿದೆ. ಬಿಜೆಪಿ ಅಧಿಕಾರಕ್ಕೆ ಬಂದರೆ ಮುಖ್ಯಮಂತ್ರಿ ಯಾರು? ಎಂದು ಹಲವು ಜನರು ಪ್ರಶ್ನೆ ಮಾಡಿದ್ದಾರೆ.
ಜೆಡಿಎಸ್ 16-23 ಸೀಟುಗಳಲ್ಲಿ ಗೆಲ್ಲಲು ಸಾಧ್ಯವೇ ಇಲ್ಲ. ಪಕ್ಷ 10 ಸೀಟು ಗೆದ್ದರೆ ಅದು ದೊಡ್ಡ ಸಾಧನೆ ಎಂದು ಕಮೆಂಟ್ಗಳನ್ನು ಹಾಕಲಾಗುತ್ತಿದೆ. ಗ್ಯಾರಂಟಿ ಯೋಜನೆಗಳ ಮೇಲೆ ಭಾರೀ ಅವಲಂಬಿತವಾಗಿರುವ ಕಾಂಗ್ರೆಸ್ನ 78 ಶಾಸಕರು ಸೋಲು ಕಾಣಲಿದ್ದಾರೆಯೇ? ಎಂಬುದು ಎಲ್ಲರ ಪ್ರಶ್ನೆಯಾಗಿದೆ.
ಬಿಜೆಪಿ-ಜೆಡಿಎಸ್ ಹೇಳುವ ಪ್ರಕಾರ ಈಗಾಗಲೇ ರಾಜ್ಯದಲ್ಲಿ ಆಡಳಿತ ವಿರೋಧಿ ಅಲೆ ಇದೆ. ಮುಖ್ಯಮಂತ್ರಿ ಕುರ್ಚಿಗಾಗಿ ನಡೆಯುತ್ತಿರುವ ಕದಾಟದ ಕಾರಣಕ್ಕೆ ಕಾಂಗ್ರೆಸ್ ಮುಂದಿನ ಚುನಾವಣೆಯಲ್ಲಿ ಹೀನಾಯ ಸೋಲು ಕಾಣಲಿದೆ.
ವಿಧಾನಸಭೆ ಚುನಾವಣೆಗೆ ಇನ್ನೂ ಸಮಯವಿದೆ. ಆದರೆ ಈಗ ಬಂದಿರುವ ಚುನಾವಣಾ ಪೂರ್ವ ಸಮೀಕ್ಷೆ ರಾಜ್ಯದಲ್ಲಿ ಸಂಚಲನಕ್ಕೆ ಕಾರಣವಾಗಿದೆ. ಹಲವರು ಈ ಪೋಸ್ಟ್ಗಳನ್ನು ವಾಟ್ಸಪ್ ಗ್ರೂಪ್ಗಳಲ್ಲಿಯೂ ಶೇರ್ ಮಾಡುತ್ತಿದ್ದು, ವೈರಲ್ ಆಗುತ್ತಿದೆ.
ನಿಮ್ಮ ಪ್ರಕಾರ ಮುಂದಿನ ಚುನಾವಣೆಯಲ್ಲಿ ಯಾರು ಅಧಿಕಾರ ಹಿಡಿಯಬಹುದು?. ಬಿಜೆಪಿ ಅಧಿಕಾರಕ್ಕೆ ಬಂದರೆ ಸಿಎಂ ಯಾರು?, ಕಾಂಗ್ರೆಸ್ ಮರಳಿ ಅಧಿಕಾರಕ್ಕೆ ಬಂದರೆ ಮುಖ್ಯಮಂತ್ರಿ ಹುದ್ದೆ ಡಿ.ಕೆ.ಶಿವಕುಮಾರ್ಗೆ ಸಿಗಲಿದೆಯೇ? ನಿಮ್ಮ ಉತ್ತರವನ್ನು ಕಮೆಂಟ್ ಮಾಡಿ.




