ಮುಂಬೈ: ಜೀವನದಲ್ಲಿ ಸಮಯ ಉಳಿಸಲು ನಾವು ಹುಡುಕುವ ‘ಶಾರ್ಟ್ಕಟ್’ಗಳು ಕೆಲವೊಮ್ಮೆ ಜೀವನವನ್ನೇ ಅಲ್ಪವಾಗಿಸಿಬಿಡುತ್ತವೆ ಎಂಬುವುದಕ್ಕೆ ಮಹಾರಾಷ್ಟ್ರದ ನಾಸಿಕ್ ಜಿಲ್ಲೆಯಲ್ಲಿ ನಡೆದ ಈ ಘೋರ ದುರಂತವೇ ಸಾಕ್ಷಿ. ಒಂದು ಸಣ್ಣ ತಪ್ಪು ನಿರ್ಧಾರ ಮತ್ತು ಆಡಳಿತ ಮಂಡಳಿಯ ನಿರ್ಲಕ್ಷ್ಯ ಸೇರಿ ಇಂದು ಒಂಬತ್ತು ಜೀವಗಳನ್ನು ಬಲಿಪಡೆದಿದೆ.
ಸಂಭ್ರಮದ ನಡುವೆ ಸುಳಿದ ಸಾವು
ದರ್ಗುಡೆ ಕುಟುಂಬದ ಸದಸ್ಯರು ಶುಕ್ರವಾರದಂದು ದಿಂಡೋರಿಯ ಕೋಚಿಂಗ್ ಸೆಂಟರ್ ಆಯೋಜಿಸಿದ್ದ ಕಾರ್ಯಕ್ರಮವೊಂದರಲ್ಲಿ ಪಾಲ್ಗೊಳ್ಳಲು ಅತ್ಯಂತ ಉತ್ಸಾಹದಿಂದ ತೆರಳಿದ್ದರು.
ಸುನಿಲ್ ದರ್ಗುಡೆ (32), ಅವರ ಪತ್ನಿ ರೇಷ್ಮಾ (27), ಪುತ್ರಿ ಗುಣವಂತಿ (11) ಸೇರಿದಂತೆ ಕುಟುಂಬದ ಆರು ಮಕ್ಕಳು ಈ ಪ್ರವಾಸದಲ್ಲಿದ್ದರು. ಸಂಜೆ ಕಾರ್ಯಕ್ರಮ ಮುಗಿಸಿ ತಮ್ಮ ಗ್ರಾಮಕ್ಕೆ ಮರಳುವಾಗ ವಿಧಿ ಅವರನ್ನೇ ಹೊಂಚು ಹಾಕಿ ಕುಳಿತಿದೆ ಎಂದು ಯಾರೂ ಊಹಿಸಿರಲಿಲ್ಲ.
ಆ ಒಂದು ತಪ್ಪು ನಿರ್ಧಾರ!
ತಮ್ಮ ಹಳ್ಳಿಗೆ ತಲುಪಲು ಕೇವಲ 10 ಕಿಲೋಮೀಟರ್ ಬಾಕಿ ಇತ್ತು. ಕತ್ತಲಾಗುತ್ತಿದ್ದ ಕಾರಣ, ಕಾರು ಚಲಾಯಿಸುತ್ತಿದ್ದ ಸುನಿಲ್ ದರ್ಗುಡೆ ಬೇಗ ತಲುಪಲೆಂದು ಮುಖ್ಯ ರಸ್ತೆಯನ್ನು ಬಿಟ್ಟು ಪರ್ಯಾಯ ‘ಶಾರ್ಟ್ಕಟ್’ ರಸ್ತೆಯನ್ನು ಆಯ್ದುಕೊಂಡರು. ದುರದೃಷ್ಟವಶಾತ್, ಮಾರುತಿ ಸುಜುಕಿ XL6 ಕಾರು ರಸ್ತೆ ಪಕ್ಕದಲ್ಲೇ ಇದ್ದ ಬಾವಿಯ ಗೋಡೆಗೆ ಡಿಕ್ಕಿ ಹೊಡೆದು ನೇರವಾಗಿ 40 ಅಡಿ ಆಳದ ನೀರಿನೊಳಗೆ ಬಿದ್ದಿದೆ.
ಕತ್ತಲಲ್ಲಿ ನಡೆದ ರಕ್ಷಣಾ ಕಾರ್ಯಾಚರಣೆ
ಜೋರಾದ ಶಬ್ದ ಕೇಳಿ ಸ್ಥಳೀಯರು ಓಡಿ ಬಂದರಾದರೂ, ಬಾವಿಯ ಆಳ ಮತ್ತು ಕಡುಗತ್ತಲು ರಕ್ಷಣಾ ಕಾರ್ಯಕ್ಕೆ ಅಡ್ಡಿಯಾಯಿತು. ಅಗ್ನಿಶಾಮಕ ದಳದವರು ಬಂದು ದೀಪಗಳ ಸಹಾಯದಿಂದ ಕಾರನ್ನು ಮೇಲೆತ್ತುವಷ್ಟರಲ್ಲಿ ಕಾಲ ಮಿಂಚಿಹೋಗಿತ್ತು.
ಕಾರಿನಲ್ಲಿದ್ದ ಮೂವರು ಹಿರಿಯರು ಮತ್ತು ಆರು ಮಕ್ಕಳು ಉಸಿರುಗಟ್ಟಿ ಸಾವನ್ನಪ್ಪಿದ್ದರು. ಕೇವಲ 7 ರಿಂದ 14 ವರ್ಷದೊಳಗಿನ ಆರು ಪುಟ್ಟ ಮಕ್ಕಳ ಪ್ರಾಣಪಕ್ಷಿ ಹಾರಿಹೋಗಿದ್ದು ಇಡೀ ಗ್ರಾಮವನ್ನೇ ಶೋಕಸಾಗರದಲ್ಲಿ ಮುಳುಗಿಸಿದೆ.




