ರಾಮದುರ್ಗ:- ರೈಲು ಹೋರಾಟ ಸಮಿತಿಯ ಪೂರ್ವಭಾವಿ ಸಭೆಯು ಇಲ್ಲಿನ ವೆಂಕಟೇಶ್ವರ ದೇವಸ್ಥಾನದಲ್ಲಿ ಜರುಗಿ ಹೋರಾಟದ ಮೂಲಕವೇ ರೈಲು ಮಾರ್ಗ ಪಡೆದುಕೊಳ್ಳುವುದು ಸೇರಿದಂತೆ ಅನೇಕ ಮಹತ್ವದ ನಿರ್ಧಾರಗಳನ್ನು ತೆಗೆದುಕೊಂಡರು.
ಲೋಕಾಪೂರದಿಂದ ಸವದತ್ತಿ ಮೂಲಕ ಧಾರವಾಡಕ್ಕೆ ಹೋಗುವ ರೈಲು ಮಾರ್ಗದಲ್ಲಿ ರಾಮದುರ್ಗ ತಾಲ್ಲೂಕನ್ನು ಬೇರ್ಪಡಿಸಿ ಅನ್ಯಾಯ ಮಾಡುವ ಸುಳಿವು ಲಭ್ಯವಾದ ಹಿನ್ನೆಲೆಯಲ್ಲಿ ಇಲ್ಲಿನ ರೈಲು ಹೋರಾಟ ಸಮಿತಿಯು ತೀವ್ರವಾಗಿ ಆಕ್ರೋಶ ವ್ಯಕ್ತ ಪಡಿಸಿದರು.
ಬೆಳಗಾವಿ ಜಿಲ್ಲೆಯ ಸುಪ್ರಸಿದ್ದ ಧಾರ್ಮಿಕ ಕ್ಷೇತ್ರ ಸವದತ್ತಿಗೆ ಈಗಾಗಲೇ ರೈಲು ಮಾರ್ಗದ ಸಮೀಕ್ಷೆ 2019ರಲ್ಲಿಯೇ ಕಾರ್ಯ ಪೂರ್ಣಗೊಂಡು ಲೋಕಾಪೂರದಿಂದ ರಾಮದುರ್ಗ, ಸವದತ್ತಿ ಮೂಲಕ ಧಾರವಾಡಕ್ಕೆ ಹೋಗುವ ರೈಲು ಮಾರ್ಗದ ಅಂದಾಜು ಪತ್ರಿಕೆ ಸಹ ಸಿದ್ದವಾಗಿದೆ.
ರಾಮದುರ್ಗ ತಾಲ್ಲೂಕು ಸಹ ಒಂದು ಪ್ರವಾಸಿ ತಾಣವಾಗಿ ಗುರುತಿಸಲ್ಪಟ್ಟಿದೆ.
ಗೊಡಚಿ ಶ್ರೀ ವೀರಭದ್ರೇಶ್ವರ ದೇವಸ್ಥಾನ, ಶಬರಿ ಕೊಳ್ಳ, ಶಿವನ ಮೂರ್ತಿ ಸೇರಿದಂತೆ ಅನೇಕ ವೀಕ್ಷಣೆಯ ತಾಣಗಳು ರಾಮದುರ್ಗದಲ್ಲಿ ಇವೆ. ಇದನ್ನು ಹೊರತುಪಡಿಸಿ ಎರಡು ಸಕ್ಕರೆ ಕಾರ್ಖಾನೆಗಳು ಕಾರ್ಯನಿರ್ವಹಿಸುತ್ತಿವೆ. ಜನರಿಗೆ ರೈಲು ಮಾರ್ಗದ ಅವಶ್ಯಕತೆಯೂ ಹೆಚ್ಚಿದೆ. ಹೀಗಿರುವಾಗ ಕೆಲವರ ಕುಚೇಷ್ಟೆಯಿಂದಾಗಿ ರಾಮದುರ್ಗವು ರೈಲು ಅವಕಾಶದಿಂದ ವಂಚಿತಗೊಳ್ಳುತ್ತಿದೆ ಎಂಬ ಅನುಮಾವನ್ನು ಸಭಿಕರು ವ್ಯಕ್ತ ಪಡಿಸಿದರು.
ಈ ಹಿಂದೆ 2019 ರಲ್ಲಿ ನಡೆಸಿರುವ ಸಮೀಕ್ಷೆ ಪ್ರಕಾರವೇ ಲೋಕಾಪೂರ ರಾಮದುರ್ಗ ಮಾರ್ಗವಾಗಿ ಸವದತ್ತಿ ಮತ್ತು ಧಾರವಾಡಕ್ಕೆ ರೈಲು ಮಾರ್ಗ ನಿರ್ಮಿಸಬೇಕು ಎಂದು ಪಕ್ಷಾತೀತವಾಗಿ ಹೋರಾಟ ಆರಂಭಿಸಬೇಕು ಎಂದು ಬಹುತೇಕರು ಅಭಿಪ್ರಾಯ ವ್ಯಕ್ತ ಪಡಿಸಿದರು.
ರಾಮದುರ್ಗ ತಾಲ್ಲೂಕಿನ ಅಭಿವೃದ್ಧಿಗಾಗಿ ಹೋರಾಟದ ಮೂಲಕ ರೈಲು ಮಾರ್ಗಕ್ಕಾಗಿ ಒತ್ತಾಯಿಸಲು ಈ ತಿಂಗಳ 22 ರಂದು ಮತ್ತೊಮ್ಮೆ ಸಭೆ ನಡೆಸಿ ಸೂಕ್ತ ಸಲಹೆ ಸೂಚನೆಗಳನ್ನು ಪಡೆದುಕೊಂಡು ಹೋರಾಟದ ಹಾದಿ ಹಿಡಿಯಬೇಕಿದೆ ಎಂದು ನಿರ್ಧರಿಸಿದರು.
ಈ ಸಂದರ್ಭದಲ್ಲಿ ಕಾರ್ಮಿಕ ಮುಖಂಡ ಗೈಬು ಜೈನೆಖಾನ, ಪ್ರದೀಪ ಪಟ್ಟಣ, ಮಹ್ಮದ್ಶಫಿ ಬೆಣ್ಣಿ, ಎಂ.ಕೆ. ಯಾದವಾಡ, ದಾದಾಫೀರ ಕೆರೂರ, ಡಿ.ಎಫ್. ಹಾಜಿ, ಮಹ್ಮದ್ಬೇಗ ನಿಗದಿ, ರೈತ ಮುಖಂಡ ಮಲ್ಲಿಕಾರ್ಜುನ ರಾಮದುರ್ಗ, ಜಿ.ಬಿ. ರಂಗನಗೌಡರ, ಸಂಜು ಕಪಾಲಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು .
ವರದಿ:-ಮಂಜುನಾಥ ಕಲಾದಗಿ