ಬೀದರ್ : ಜಾತಿ ಗಣತಿ ವರದಿ ಜಾರಿ ಮಾಡುವ ಕುರಿತು ಒಂದು ಕಡೆ ಪರ ವಿರೋಧ ಅಭಿಪ್ರಾಯಗಳು ವ್ಯಕ್ತವಾಗುತ್ತಿರುವಾಗ, ಇದರ ಮಧ್ಯ ಲಿಂಗಾಯತ ಧರ್ಮ ಸ್ವತಂತ್ರ ಧರ್ಮವಾಗುವ ಕಾಲ ಬಹಳ ದೂರವಿಲ್ಲ ಎಂದು ಭಾಲ್ಕಿ ಹಿರೇಮಠದ ಬಸವಲಿಂಗ ಪಟ್ಟದೇವರು ತಿಳಿಸಿದ್ದಾರೆ.
ಇಂದು ಬೀದರ್ ಜಿಲ್ಲೆಯ ಬಸವಕಲ್ಯಾಣದಲ್ಲಿ ನಡೆದಂತಹ ಕಲ್ಯಾಣ ಪರ್ವ ವೇದಿಕೆ ಕಾರ್ಯಕ್ರಮದಲ್ಲಿ ಮಾತನಾಡಿದ ಬಸವಲಿಂಗ ಪಟ್ಟದೇವರು, ಬಸವಣ್ಣನವರ ಕಾಲದಿಂದ ಇಲ್ಲಿಯವರೆಗೂ ಲಿಂಗಾಯತ ಧರ್ಮಕ್ಕೆ ವಿರೋಧ ಮಾಡುವವರು ಇದ್ದೇ ಇದ್ದಾರೆ.
ವಿರೋಧದ ಮಧ್ಯೆಯೂ 21ನೇ ಶತಮಾನದವರೆಗೆ ಜಾಗೃತ ಮಾಡುತ್ತಾ ಬಂದಿದ್ದು ಲಿಂಗಾಯತ ಸ್ವತಂತ್ರ ಧರ್ಮ ಮುದ್ರೆ ಪಡೆದೇ ತೀರೋಣ ಎಂದು ಭಾಲ್ಕಿ ಹಿರೇಮಠದ ಬಸವಲಿಂಗ ಪಟ್ಟದ್ದೇವರು ಹೇಳಿದ್ದಾರೆ.
ಬಸವಣ್ಣನವರ ಲಿಂಗಾಯತ ಧರ್ಮ ಸ್ವತಂತ್ರ ಧರ್ಮ ಆಗಬಾರದು ಅಂತ ಅನೇಕ ಶಕ್ತಿಗಳು ವಿರೋಧ ಮಾಡುತ್ತಿವೆ. ಆದ್ರೆ ಲಿಂಗಾಯತ ಧರ್ಮ ಸ್ವತಂತ್ರ ಧರ್ಮವಾಗುವ ಕಾಲ ಬಂದೇ ಬರುತ್ತೆ.
12ನೇ ಶತಮಾನದಲ್ಲೇ ಅನುಭವ ಮಂಟಪದಲ್ಲಿ ಲಿಂಗಾಯತ ಸ್ವತಂತ್ರ ಧರ್ಮಕ್ಕೆ ಮುದ್ರೆ ಬಿದ್ದಿದೆ. ಇನ್ನು ಸರ್ಕಾರದಲ್ಲಿ ಸ್ವತಂತ್ರ ಧರ್ಮದ ಮುದ್ರೆ ಬೀಳಬೇಕಿದೆ.ಅದಕ್ಕಾಗಿ ನಾವೆಲ್ಲರೂ ಒಗ್ಗಟ್ಟಿನಿಂದ ಹೋರಾಡೋಣ, ಸ್ವತಂತ್ರ ಧರ್ಮ ಹೋರಾಟಕ್ಕೆ ಸ್ವಾಮಿಜೀ ಕರೆ ನೀಡಿದ್ದಾರೆ.
200 ಸ್ವಾಮೀಜಿಗಳ ನಿಯೋಗ ಸಿಎಂ ಸಿದ್ದರಾಮಯ್ಯ ಅವರನ್ನ ಭೇಟಿ ಮಾಡಿ ಮನವಿ ಸಲ್ಲಿಸಿದ ಬಳಿಕ ಸರ್ಕಾರ ಕೆಲವೇ ದಿನಗಳಲ್ಲಿ ಬಸವಣ್ಣರನ್ನ ನಾಯಕ ಎಂದು ಘೋಷಣೆ ಮಾಡಿತು. ಅದೇ ರೀತಿ ಲಿಂಗಾಯತ ಸ್ವತಂತ್ರ ಧರ್ಮ ಆಗುವ ಕಾಲ ಬರುತ್ತೆ. ನಾವೆಲ್ಲಾ ನಿರಾಸೆಯಾಗದೇ ಸ್ವತಂತ್ರ ಧರ್ಮಕ್ಕೆ ಹೋರಾಡಬೇಕು ಜಿಲ್ಲೆ, ತಾಲೂಕು, ಗ್ರಾಮಗಳಲ್ಲಿ ಲಿಂಗಾಯತ ಜಾಗೃತಿ ಸಮಾವೇಶ ಮಾಡಬೇಕು ಎಂದು ಕರೆ ನೀಡಿದ್ದಾರೆ.