ಬೆಂಗಳೂರು: ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಅವರ ಕಾರು ಅಪಘಾತ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಜೆಪಿ ಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಬಾರಿ ಆರೋಪ ಮಾಡಿದ್ದಾರೆ.
ನಗರದ ಬಿಜೆಪಿ ಕಚೇರಿಯಲ್ಲಿ ಮಾತನಾಡಿದ ಅವರು, ಲಕ್ಷ್ಮೀ ಹೆಬ್ಬಾಳ್ಕರ್ ಅವರು ಬೇಗ ಗುಣಮುಖರಾಗಲಿ, ಅವರ ಕಾರಿನಲ್ಲಿ ಅಪಾರ ಪ್ರಮಾಣದ ಹಣ ಸಾಗಾಟ ಮಾಡಲಾಗುತ್ತಿತ್ತು.
ಸರ್ಕಾರ ಕಾರು, ಗನ್ ಮ್ಯಾನ್, ಎಸ್ಕಾರ್ಟ್ ಕೊಟ್ಟಿದೆ. ಆದರೆ ಎಲ್ಲರನ್ನೂ ಯಾಕೆ ಬಿಟ್ಟು ಹೋಗಿದ್ದು.. ಸೆಕ್ಯೂರಿಟಿ ಬಿಟ್ಟು ಯಾಕೆ ಟ್ರಾವಲ್ ಮಾಡಿದ್ರೀ..ಘಟನೆ ನಡೆದಿದ್ದು ಹೇಗೆ..ಸತ್ಯ ಏನೂ ಅಂತಾ ಜನರಿಗೆ ತಿಳಿಸಿ ಎಂದು ಆಗ್ರಹಿಸಿದರು.
ನಾಯಿ ಎದುರು ಬಂದಾಗ ಘಟನೆ ಆಯ್ತು ಅಂತೀರಿ.. ಹಿಂದಿನಿಂದ ಬಂದು ಗುದ್ದಿದ್ದಾರೆ ಅಂತಾನೂ ಹೇಳಿದ್ರಿ. ಹಾಗಾದ್ರೆ ಯಾವುದು ಸತ್ಯ.? ಬಹಳಷ್ಟು ದೊಡ್ಡ ಮೊತ್ತದ ಹಣ ಆ ಕಾರಿನಲ್ಲಿ ಸಾಗಿಸಲಾಗ್ತಿತ್ತು, ಆದರೆ ದೂರು ದಾಖಲಾಗಿಲ್ಲ. ಎಫ್ ಐ ಆರ್ ಕೂಡ ಆಗಿಲ್ಲ ಯಾಕೆ ಎಂದು ಪ್ರಶ್ನಿಸಿದರು.
ತರಾತುರಿಯಲ್ಲಿ ಪೊಲೀಸ್ ಬೆಂಗಾವಲಿನಲ್ಲಿ ಕಾರ್ ಲಿಫ್ಟ್ ಮಾಡಿದ್ದು ಯಾಕೆ..? ಹೀಗಾಗಿ ಸಿಟ್ಟಿಂಗ್ ಜಡ್ಜ್ ನೇತೃತ್ವದಲ್ಲಿ ತನಿಖೆಯಾಗಬೇಕು. ಅದರಲ್ಲಿ ಯಾರೆಲ್ಲ ಪ್ರಯಾಣ ಮಾಡ್ತಿದ್ರು ಅವರನ್ನ ಮಂಪರು ಪರೀಕ್ಷೆಗೆ ಒಳಪಡಿಸಬೇಕು.
ಅದರಲ್ಲಿ ಬಹಳ ಹಣ ಇತ್ತು ಅಂತಾ ಜನ ನಮಗೆ ಹೇಳ್ತಿದಾರೆ. ಯಾವುದನ್ನೂ ಮಹಜರು ಮಾಡದೇ ಆ ಬ್ಯಾಗ್ ಗಳನ್ನ ತೆಗೆದುಕೊಂಡು ಹೋಗಿದ್ದಾರೆ ಎಂದು ಹೇಳುವ ಮೂಲಕ ಲಕ್ಷ್ಮಿ ಹೆಬ್ಬಾಳ್ಕರ್ ಅಪಘಾತದ ಹಿನ್ನೆಲೆ ಬಗ್ಗೆ ಗಂಭೀರ ಆರೋಪ ಮಾಡಿದರು.




