ಸಿರುಗುಪ್ಪ : ನಗರದ ತಾಲೂಕು ಕ್ರೀಡಾಂಗಣದಲ್ಲಿ 76ನೇ ಗಣರಾಜ್ಯೋತ್ಸವ ಕಾರ್ಯಕ್ರಮದ ನಿಮಿತ್ತ ಶಾಸಕ ಬಿ.ಎಮ್.ನಾಗರಾಜ ಅವರ ನೇತೃತ್ವದಲ್ಲಿ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿಯ ತಾಲೂಕಾಧ್ಯಕ್ಷ, ತಹಶೀಲ್ದಾರ್ ಹೆಚ್.ವಿಶ್ವನಾಥ ಅವರು ಧ್ವಜಾರೋಹಣ ನೆರವೇರಿಸಿದರು.
ನಂತರ ಮಾತನಾಡಿ ಭಾರತ ಪ್ರಜಾಪ್ರಭುತ್ವದ ದಿನವಾಗಿ ಅರ್ಪಿಸಿಕೊಂಡ ದಿನವನ್ನು ಅತ್ಯಂತ ಸಂಭ್ರಮದಿಂದ ಆಚರಿಸುತ್ತಿದ್ದೇವೆ. ನಮ್ಮ ದೇಶವನ್ನು ಸೌರ್ವಭೌಮ, ಜಾತ್ಯತೀತ, ರಾಷ್ಟ್ರವೆಂದು ಅಂಗೀಕರಿಸುವುದರ ಜೊತೆಗೆ ಸಂವಿಧಾನವನ್ನು ಜನವರಿ 26 1950 ರಂದು ಜಾರಿಗೆ ತರಲಾಗಿದೆ.

ಪ್ರತಿವರ್ಷ ಜನವರಿ 26ರ ದಿನವನ್ನು ಗಣರಾಜ್ಯೋತ್ಸವವನ್ನಾಗಿ ಆಚರಿಸಿಕೊಂಡು ಬರುತ್ತಿದ್ದು, ಭಾರತ ಪ್ರಜಾಪ್ರಭುತ್ವವಾಗಲು ತಮ್ಮ ಪ್ರಾಣ ಬಲಿದಾನವನ್ನು ಸಮರ್ಪಿಸಿದ ಎಲ್ಲಾ ದೇಶಭಕ್ತರನ್ನು ಸ್ಮರಿಸಬೇಕೆಂದರು.
ಶಾಸಕ ಬಿ.ಎಮ್.ನಾಗರಾಜ ಅವರು ಮಾತನಾಡಿ ಈ ವರ್ಷ ವಿದ್ಯಾರ್ಥಿನಿಯರಿಗೆ ವಿಶೇಷ ಪ್ರಾತಿನಿಧ್ಯವನ್ನು ನೀಡಲೆಂದು ಮಹಿಳಾ ಕಾಲೇಜಿಗೆ ಅನುಮೋದನೆ ತೆಗೆದುಕೊಂಡಿದ್ದೇವೆ. ಆದಷ್ಟು ಶೀಘ್ರದಲ್ಲಿ ಹಮ್ಮಿಕೊಳ್ಳಲಾಗುವುದು. ನೆನೆಗುದಿಗೆ ಬಿದ್ದಿದ್ದ ಹೆದ್ದಾರಿ ರಸ್ತೆ ಕಾಮಗಾರಿಗೆ ವೇಗ ನೀಡಲಾಗಿದೆಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ತೆರೆದ ಜೀಪ್ನಲ್ಲಿ ಶಾಸಕರು ಮತ್ತು ತಹಶೀಲ್ದಾರರು ಪಥಸಂಚಲನಗಳ ತಂಡಗಳ ವೀಕ್ಷಣೆ ನಡೆಸಿದರು. ವಿವಿಧ ಶಾಲಾ ವಿದ್ಯಾರ್ಥಿಗಳ ಪಥ ಸಂಚಲನದ ವಿವಿಧ ಧ್ವಜವಂದನೆ ಕಾರ್ಯಕ್ರಮ ಜರುಗಿತು.
ಸ್ವತಂತ್ರ ದೇಶದ ಕನಸನ್ನು ಹೊತ್ತು ಪ್ರಾಣತ್ಯಾಗ ಮಾಡಿದ ಹುತಾತ್ಮರ ಜೀವನ, ಅನ್ನದಾತನು ಅನುಭವಿಸುತ್ತಿರುವ ಸಂಕಷ್ಟಗಳು, ಸಮಾಜದಲ್ಲಿ ಮಹಿಳೆಯರ ಮೇಲಾಗುವ ದೌರ್ಜನ್ಯಗಳ ತುಣುಕು ದೃಶ್ಯಗಳನ್ನು ಹಾಡುಗಳ ಮೂಲಕ ನೀಡಲಾದ ಪ್ರದರ್ಶನ ನೆರೆದಿದ್ದ ಸಾರ್ವಜನಿಕರನ್ನು ಮನರಂಜಿಸಿತು.
ಸಂಭ್ರಮಾಚರಣೆಯ ನಿಮಿತ್ತ ತಾಲೂಕು ಕ್ರೀಡಾಂಗಣದ ಮೈದಾನವೆಲ್ಲ ಶಾಲಾ ಮತ್ತು ಕಾಲೇಜು ವಿದ್ಯಾರ್ಥಿಗಳು ಮತ್ತು ಇನ್ನಿತರ ಇಲಾಖೆಗಳ ಸಿಬ್ಬಂದಿಗಳಿಂದ ತುಂಬಿ ತುಳುಕುತ್ತಿರುವ ದೃಶ್ಯ ಕಂಡುಬಂದಿತು.
ಪಥ ಸಂಚಲನ, ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳ ಸ್ಪರ್ಧೆಯಲ್ಲಿ ವಿಜೇತವಾದ ಕಿರಿಯ ಮತ್ತು ಹಿರಿಯ ಪ್ರಾಥಮಿಕ ಹಾಗೂ ಪ್ರೌಡ ಶಾಲೆಗಳ ವಿದ್ಯಾರ್ಥಿಗಳಿಗೆ ಪ್ರಶಸ್ತಿ ವಿತರಿಸಿ ಸನ್ಮಾನಿಸಲಾಯಿತು.
ಇದೇ ವೇಳೆ ನಗರಸಭೆ ಅಧ್ಯಕ್ಷೆ ಬಿ.ರೇಣುಕಮ್ಮ, ಉಪಾಧ್ಯಕ್ಷೆ ಯಶೋದಾ ಮೂರ್ತಿ, ಗ್ರೇಡ್-2 ತಹಶೀಲ್ದಾರ್ ಕುಮಾರಿ ಸತ್ಯಮ್ಮ, ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಎಸ್.ಪವನ್ಕುಮಾರ್ ದಂಡಪ್ಪನವರ್, ಪೌರಾಯುಕ್ತ ಹೆಚ್.ಎನ್.ಗುರುಪ್ರಸಾದ್ ಸೇರಿದಂತೆ ತಾಲೂಕು ಮಟ್ಟದ ಅಧಿಕಾರಿಗಳು ಹಾಗೂ ನಗರಸಭೆ ಸದಸ್ಯರು, ಸಾರ್ವಜನಿಕರು ಇದ್ದರು.
ವರದಿ : ಶ್ರೀನಿವಾಸ ನಾಯ್ಕ




